ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.

ಮಲ್ಲಪ್ಪ - ಕರೇಣ್ಣನವರ, ಹನುಮಾಪುರ

ಯುಗಾದಿ ಹಬ್ಬವೆಂದರೆ ಸಕಲ ಜೀವ ಸಂಕುಲಕ್ಕೂ ಸಂತಸ ಸಡಗರ ತರುವಂತಹ ಹಬ್ಬವೆಂದೇ ಜನಮನದಲ್ಲಿ ಅಚ್ಚೊತ್ತಿದೆ. ಸಸ್ಯ ಸಂಕುಲವು ಬಹಳಷ್ಟು ಹರ್ಷದಿಂದ ಈ ಹಬ್ಬಕ್ಕಾಗಿ ಕಾಯುತ್ತಿರುತ್ತವೆ. ಕೋಗಿಲೆಯ ಪಾಲಿಗೆ ಎಲ್ಲಿಲ್ಲದ ಹರ್ಷವನ್ನು ತರುವಂತಹ ಕಾಲವಾಗಿದೆ.

ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿ ಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.

ನಮ್ಮ ಪೂರ್ವಜರು ಸಾಕಷ್ಟು ವೈಜ್ಞಾನಿಕ ಹಿನ್ನೆಲೆಯಿಂದಲೂ ಮತ್ತು ಸೃಷ್ಟಿಯಲ್ಲಾಗುವ ಬದಲಾವಣೆಯ ಕಾರಣದಿಂದಲೂ ಹೊಸ ವರ್ಷವನ್ನಾಗಿಯುಗಾದಿ ಹಬ್ಬವನ್ನು ಆಚರಿಸಿ ಕೊಂಡು ಬಂದಿದ್ದಾರೆ; ಹಿನ್ನೆಲೆಯಲ್ಲಿ ಹಿರಿಯರು ಈ ಹಬ್ಬದ ವೈಶಿಷ್ಟ್ಯತೆಗಳನ್ನು ಚಿಕ್ಕ ಮಕ್ಕಳಿಗೆ ಹೇಳುತ್ತಿದ್ದರು. ಜೀವನದಲ್ಲಿ ಕಷ್ಟಗಳು ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಸರಿಸಮಾನವಾಗಿ ಸ್ವೀಕರಿಸುತ್ತಾ ಮುನ್ನಡೆಯಬೇಕೆಂದು ಹೇಳುತ್ತಿದ್ದುದು ನೆನಪಾ ಗುತ್ತದೆ. ಹಾಗಾಗಿಯೇ ಬೇವು-ಬೆಲ್ಲವನ್ನು, ಶಾವಿಗೆ ಹಾಲು ಬೇವಿನೊಂದಿಗೆ ಸೇವೆಸುತ್ತೇ ವೆಂದು ಅಜ್ಜಿಯ ಹೇಳುತ್ತಿದ್ದ ಮಾತುಗಳು ಈಗ ನೆನಪಾಗುತ್ತಿದೆ.

ಇದನ್ನೂ ಓದಿ: Ugadi 2026: ಯುಗಾದಿ ವಿಶೇಷ: ಹೊಸ ನಿರೀಕ್ಷೆಯೊಂದಿಗೆ ಹೊಸ ಆರಂಭ ಮಾಡೋಣ

ಚಿಕ್ಕ ಮಕ್ಕಳಿರುವಾಗ ಯುಗಾದಿ ಹಬ್ಬವು ಸಡಗರ ಸಂಭ್ರಮದಿಂದ ತೇಲಾಡುವಂತೆ ಮಾಡುತ್ತಿತ್ತು. ಅಮವಾಸ್ಯೆಯ ಮರುದಿನ ಪಾಡ್ಯದಂದು ನಸುಕಿನಲ್ಲಿಯೇ ಚಳಪಳ ಎನ್ನುವಂತೆ ನೀರನ್ನು ಕಾಯಿಸಿದ ಮೇಲೆ ತಾಯಂದಿರು ಮಕ್ಕಳನ್ನು ಎಬ್ಬಿಸಿ ಬಿಸಿಎಣ್ಣೆ ಯನ್ನು ತಲೆಗೆ ಹಚ್ಚಿ ತದನಂತರ ಮೈ ಕೈಗೆ ಹಚ್ಚಿ, ಬಿಸಿನೀರನ್ನು ತಲೆ ಮೇಲಿಂದ ಶುರು ವಿದಾಗ ಒಂದು ಕ್ಷಣ ಉಸಿರು ಕಟ್ಟಿದಂತಾಗುತ್ತಿತ್ತು.

ಒಂದು ತಪಾಲಿ (ದೊಡ್ಡ ಪಾತ್ರೆ) ನೀರನ್ನು ಪೂರ್ಣವಾಗಿ ಹಾಕಿದ ನಂತರವೇ ತಾಯಂದಿ ರಿಗೆ ಸಮಧಾನವಾಗುತ್ತಿತ್ತು. ಮನಸ್ಸು ಪುಳಕಗೊಳ್ಳುವಂತಾಗಿ, ಜಡ್ಡುಗಟ್ಟಿದ ನರನಾಡಿಗಳು ಚಲನತೆಯನ್ನು ಪಡೆದುಕೊಂಡು, ರಕ್ತ ಸಂಚಾರ ಸರಾಗವಾಗಿ ನಡೆದು ಆಹ್ಲಾದವೆನಿಸು ತ್ತಿತ್ತು. ಈ ಪಾಡ್ಯದ ನೆಪದಲ್ಲಿ ತಂದೆ ಮೈಮುರಿದು ಕೂಲಿ ಮಾಡಿದ ಹಣದಿಂದ ತಂದ ಬಟ್ಟೆಯ ಕಡೆಯೇ ಮಕ್ಕಳ ಚಿತ್ತವಿರುತ್ತಿತ್ತು.

ಲಗುಬಗನೇ ಚೊಣ್ಣ, ಅಂಗಿಯನ್ನು ಹಾಕಿಕೊಂಡು, ಬೇವು ಮಾಡಲು ತಂದ ಬೆಲ್ಲದ ಕಣ್ಣಿಯನ್ನು ದವಡಿಯಲ್ಲಿಟ್ಟು ಸೀಪುತ್ತಾ ಓಣಿಯ ಬೀರ, ಕರಿಯ, ಬಸವ, ರಾಜ, ಜಗ್ಗರನ್ನು ಕೂಡಿಕೊಂಡು ಓಣಿ ಸುತ್ತು ಹಾಕುವುದರಲ್ಲಿ ಏನೊ ಒಂದತರ ಮಜಾಯಿರುತ್ತಿತ್ತು ಬಿಡಿ.

ಅಪ್ಪನು, ಮನೆಯ ಶ್ರಮಜೀವಿಗಳಾದ ಎತ್ತುಗಳ ಮೈತೊಳೆದು ವರ್ಷದ ಕೃಷಿ ಕಾರ್ಯ ಪ್ರಾರಂಭಿಸಲು ಗಳೇವು ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಿದ್ದರು. ಹೊಲದಲ್ಲಿ ಭೂಮಿ ತಾಯವ್ವಗ ಪೂಜೆ ಸಲ್ಲಿಸಿ ಎರಡು ದಮ್ಮ (ತಾಸು) ಹೊಲ ಉಳುಮೆ ಮಾಡಿ, ವರ್ಷದ ಕೃಷಿ ಕೆಲಸವನ್ನು ಯುಗಾದಿಯ ಈ ಶುಭ ಮುಹೂರ್ತದಲ್ಲಿ ಪ್ರಾರಂಭಿಸುತ್ತಿದ್ದರು.

ಪಾಡ್ಯದ ದಿನ ಪ್ರಾರಂಭಿಸಿದ ಕೃಷಿ ಚಟುವಟಿಕೆಯಿಂದ ದವಸ ಧಾನ್ಯಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ತಂದೆಯ ಕಂಗಳಲ್ಲಿ ಇತ್ತು. ಹಾಗಾಗಿ ಆ ಪಾಡ್ಯದ ದಿನವನ್ನು ಬಹಳ ಆಸ್ಥೆಯಿಂದ ತಂದೆ ನೋಡುತ್ತಿದ್ದರು.

ಜನಪದ ಆಟಗಳು

ನಮ್ಮ ಊರಿನ ಓಣ್ಯಾಗ ಒಬ್ಬ ಹಿರಿಯ ಸ್ನೇಹಿತನಿದ್ದ. ಅವನು ನಮ್ಮ ಪಾಲಿನ ವಿರಾಟ್ ಕೊಹ್ಲಿ ಇದ್ದಂಗ ಇದ್ದ. ನಿಂಬೆಹಣ್ಣು ಎಸೆಯುವ ಸ್ಪರ್ಧೆಯಲ್ಲಿ ಇವನನ್ನು ಮೀರಿಸು ವವರು ನಮ್ಮೂರಲ್ಲಿಯೇ ಇರಲಿಲ್ಲ. ನಿಂಬೆಹಣ್ಣು ಎಸೆಯುವ ಸ್ಪರ್ಧೆಯಲ್ಲಿ ಗೆಲವನ್ನು ಸದಾ ಪಡೆಯುತ್ತಿದ್ದ. ಇವನ ಪರವಾಗಿ ಗುಂಪು ಕಟ್ಟಿಕೊಂಡು ನಾವು ಐದು ಪೈಸೆ, ಹತ್ತ ಪೈಸೆ ಬೆಟ್ ಕಟ್ಟುತ್ತಿದ್ದವು. ಈ ಆಟದಲ್ಲಿ ನಮ್ಮೂರಿನ ಎಲ್ಲಾ ಮಕ್ಕಳ- ಯುವಕರ ದಂಡೇ ಸೇರಿ ಊರಿಗೆ ಊರೇ ಸಡಗರದಿಂದ ಪಾಲ್ಗೊಳ್ಳುತ್ತಿತ್ತು. ಇಂದು, ಅಂದರೆ, ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಇರುವ ಈ ಕಾಲದಲ್ಲಿ, ಅಂತಹ ಜನಪದ ಆಟಗಳ ದೃಶ್ಯಗಳನ್ನ ಕಾಣು ವುದು ವಿರಳವಾಗಿದೆ.

ಇನ್ನೊಂದು ಮುಖ್ಯವಾದ ಆಟವೆಂದರೆ, ಲಗೋರಿ. ಎದುರಾಳಿ ತಂಡದ ಆಟಗಾರರು ಬಟ್ಟೆಯಿಂದ ಮಾಡಿದ ಚೆಂಡಿನಿಂದ ನಮ್ಮ ತಂಡದ ಆಟಗಾರರನ್ನು ಹೊಡೆಯುವ ಮೊದಲೇ ಚಿಪ್ಪುಗಳನ್ನು ಒಂದರ ಮೇಲೊಂದು ಇಟ್ಟು ‘ಲಗೋರಿ’ ಎನ್ನುವುದು ಬಹು ಸಂತಸ ತರುತ್ತಿತ್ತು. ಇಂತಹ ಆಟ ಆಡುವ ಮಕ್ಕಳು ಈಗ ಕಡಿಮೆಯಾಗಿದ್ದಾರೆ; ಎಲ್ಲರ ಕೈ ಯಲ್ಲಿಯೂ ಐದಿಂಚು ಉದ್ದದ ಮೂರಿಂಚು ಅಗಲದ ಪೋನು; ಹಬ್ಬದ ದಿನವೂ, ತಲೆ ತಗ್ಗಿಸಿ ತಮ್ಮಷ್ಟಕ್ಕೆ ತಾವೇ ನಗುತ್ತಾ ಒಬ್ಬಂಟಿಯಾಗಿ ಕುಳಿತುಕೊಂಡಿರುವುದನ್ನು ನೋಡು ತ್ತಿದ್ದೇವೆ.

ಸಂಜೆ ಹೊತ್ತಿನ ಹೊಸ ಸಂಭ್ರಮ!

ನಮ್ಮ ಹಳ್ಳಿಯಲ್ಲಿ, ಯುಗಾದಿ ದಿನದಂದು ಸಾಯಂಕಾಲದ ಹೊತ್ತಿಗೆ ಆಟದಿಂದ ಹಿಂತಿರುಗಿ ಕೈ ಕಾಲು ಮುಖ ತೊಳೆದುಕೊಂಡು ಓಣಿಯ ಚಂದ್ರದರ್ಶನಕ್ಕಾಗಿ ಭಕ್ತಿಯಿಂದ ಕಾಯುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ಯಾಕೆ ಚಂದ್ರನನ್ನು ನೋಡುತ್ತಾರೆಂಬುದು ಅರಿವಿರದಿದ್ದರೂ, ಸಹಿತ ಹಿರಿಯರೊಂದಿಗೆ ‘ಚಂದ್ರನ ದರ್ಶನ’ವನ್ನು ಭಕ್ತಿ ಭಾವದಿಂದ ಪಡೆದುಕೊಂಡು ಓಣಿಯ ಸ್ನೇಹಿತರೊಂದಿಗೆ ಸೇರಿ ಊರಿನ ಹಿರಿಯ ಕಾಲಿಗೆ ನಮಸ್ಕಾರ ಮಾಡುತ್ತಿದ್ದೆವು. ಹೀಗೆ ಹಿರಿಯರ ಆಶೀರ್ವಾದ ಪಡೆಯಲು ಹತ್ತಾರು ಹುಡುಗರಿರುವ ಗುಂಪುಗಳು ಊರಿನ ಅಲ್ಲಲ್ಲಿ ಕಾಣುತ್ತಿದ್ದವು. ಅದರಲ್ಲಿ ನಮ್ಮ ಓಣಿಯ ಗುಂಪೊಂದು ದೊಡ್ಡದಾಗಿರುತ್ತಿತ್ತು. ಜಾತಿ, ಮತ, ಪಂಥ, ನೋಡದೇ ಹಿರಿಯರ ಪಾದ ಚರಣಕ್ಕೆ ಗೌರವ ದಿಂದ ಎರಗುತ್ತಿದ್ದು ಮನಸ್ಸಿಗೆ ಸಂತಸ ತರುತ್ತಿತ್ತು. ಹತ್ತು ಹಲವು ರೀತಿಯ ಸಂಪ್ರದಾಯ ಗಳು, ಆಚರಣೆಗಳು, ಮಹತ್ವಗಳನ್ನು ನಮಗರಿವಿಲ್ಲದೇ ನಮ್ಮ ಕುಟುಂಬ, ಸಮಾಜ, ಊರು ಕಲಿಸುತ್ತಿತ್ತು. ಇಂದು ಬದಲಾದ ಜೀವನ ಶೈಲಿಯಿಂದ ನಮ್ಮ ಪರಂಪರೆಯ ಕೊಂಡಿಗಳಾದ ಆಚರಣೆಗಳು, ಸಂಸ್ಕಾರಯುಕ್ತ ಜೀವನ, ಮೌಲ್ಯಗಳು ದೂರವಾಗುತ್ತ ಹೋಗುತ್ತಿರುವುದು ಬೇಸರ ತರಿಸುತ್ತಿದೆ.

ಹಿರಿಯರ ಕಾಲಿಗೆ ನಮಸ್ಕಾರ ಮಾಡುವುವರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿರುವುದು ಸಹ ಇಂದಿನ ವಾಸ್ತವ. ಇದಕ್ಕೆ ನಾವು ಪಡೆದುಕೊಂಡ ಆಧುನಿಕ ಶಿಕ್ಷಣ ಕಾರಣವೆಂಬುದು ವಿಪರ್ಯಾಸವೆನ್ನುವಂತಿದೆ. ಚಿಕ್ಕವರಿರುವಾಗ ಆಚರಿಸಿದ ಯುಗಾದಿ ಹಬ್ಬ ಕೊಟ್ಟ ಸಂತಸ ವನ್ನು ನೆನಪಿಸಿಕೊಂಡರೆ ಮೈ ಮನದೊಳಗೆ ಸಂತಸ ನೂರ್ಮಡಿಯಾಗುತ್ತದೆ.