ತುಂಟರಗಾಳಿ
ಸಿನಿಗನ್ನಡ
ನಟ ಉಪೇಂದ್ರ ಮತ್ತೆ ನಿರ್ದೇಶನದ ಮಾತಾಡಿದ್ದಾರೆ. ಆದರೆ ಈ ಬಾರಿ ಕೊಂಚ ಓವರ್ ಕಾನಿಡೆ ಎನ್ನುವಂಥ ಮತ್ತು ಜನರನ್ನು ಕೀಳಾಗಿ ನೋಡುವಂಥ ಮಾತು ಅವರದ್ದು. ‘ಜನ ನನ್ನ ಸಿನಿಮಾ ಅರ್ಥ ಮಾಡಿಕೊಳ್ಳುವ ಲೆವೆಲ್ಲಿಗೆ ಬೆಳೀಲಿ, ಆಮೇಲೆ ನಿರ್ದೇಶನ ಮಾಡ್ತೀನಿ’ ಎನ್ನುವಂಥ ಮಾತಾಡಿದ್ದಾರೆ ಉಪೇಂದ್ರ. ಇತ್ತೀಚೆಗೆ ಪ್ರಜಾಕೀಯ ಅಂತ ರಾಜಕಾರಣದ ಬಗ್ಗೆನೇ ಹೆಚ್ಚು ಮಾತನಾಡದ ಉಪೇಂದ್ರ ಮತ್ತೆ ನಿರ್ದೇಶನದ ಮಾತಾಡಿರುವುದು ಅವರ ಅಭಿಮಾನಿಗಳಿಗೆ ಸಂತಸದ ವಿಷಯ. ರಾಜಕಾರಣ ಬಿಟ್ಟು ಮತ್ತೆ ನಿರ್ದೇಶನದತ್ತ ಉಪೇಂದ್ರ ಅವರ ಕಣ್ಣು ತಿರುಗಿದೆ.
ಉಪೇಂದ್ರ ಅವರ ಸಿನಿಮಾ ಅಂದ್ರೆ ಅದು ಪೋಸ್ಟರ್ ಮತ್ತು ಟೈಟಲ್ ಹಂತದ ಕುತೂಹಲ ಹುಟ್ಟಿಸುತ್ತದೆ. ಅವರ ಯಾವ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ಚಿತ್ರದ ಟೈಟಲ್ ಕೂಡಾ ವಿಭಿನ್ನ ವಾಗಿರುತ್ತದೆ. ಮತ್ತು ಅದು ಏನು ಅಂತ ಯಾರಿಗೂ ಹೇಳೋಕೆ ಆಗಲ್ಲ ಅನ್ನೋದು ವಿಶೇಷ ಅಲ್ಲ, ಉಪ್ಪಿ ಚಿತ್ರಗಳ ಕಾಮನ್ ವಿಷ್ಯ. ಹಾಗೆ ನೋಡಿದರೆ ಉಪೇಂದ್ರ ಅವರ ಸಿನಿಮಾ ಮತ್ತು ಅದರ ಟೈಟಲ್ಗಳಿಗೆ ಅವರಿಗಿಂತ ಜಾಸ್ತಿ ಅರ್ಥಗಳನ್ನು ಅವರ ಅಭಿಮಾನಿಗಳೇ ಹೇಳುತ್ತಾರೆ.
ಉಪೇಂದ್ರ ಹಾಗಂದುಕೊಂಡು ಕೆಲಸ ಮಾಡಿರುತ್ತಾರೋ ಇಲ್ಲವೋ ಆದರೆ ಅಭಿಮಾನಿಗಳು ಮಾತ್ರ ಅದರಲ್ಲಿ ಇಲ್ಲದೇ ಇರುವ ಅರ್ಥಗಳನ್ನೂ ಹುಡುಕಿ ಬಿಡುತ್ತಾರೆ. ಈಗಲೂ ಅದೇ ಆಗುತ್ತಿದೆ. ಒಟ್ಟಿನಲ್ಲಿ ರಾಜಕಾರಣದಲ್ಲಿ ಮೋದಿ ಅವರು ಮಾಡದೇ ಇರುವ ಕೆಲಸಗಳಿಗೂ ಅವರ ಅಭಿಮಾನಿ ಗಳು ಕ್ರೆಡಿಟ್ ಕೊಡುವ ಹಾಗೆ, ಉಪೇಂದ್ರ ಅವರ ಸಿನಿಮಾಗಳಿಗೂ ಅವರ ಅಭಿಮಾನಿಗಳು ತಮ್ಮದೇ ಆದ ಹೊಸ ಭಾಷ್ಯವನ್ನಂತೂ ಬರೆಯುತ್ತಿದ್ದಾರೆ.
ಹಾಗಿದ್ದಾಗ ಉಪ್ಪಿ ಮಾತ್ರ ಹೀಗೆ ‘ಜನರಿಗೆ ನನ್ನ ಸಿನಿಮಾಗಳನ್ನು ಅರ್ಥಮಾಡಿಕೊಳ್ಳೋ ಕೆಪಾಸಿಟಿ ಇಲ್ಲ’ ಅಂತ ಮಾತನಾಡಿರೋದು ಎಷ್ಟು ಸರಿಯೋ ಗೊತ್ತಿಲ್ಲ.
ಇದನ್ನೂ ಓದಿ: Hari Paraak Column: ಲಾಠಿಯೇಟು ತಿಂದ ಹುಡುಗಿಯ ಹೊಸ ಸಿನಿಮಾ: ʼಅಂಡೊಂದಿತ್ತುʼ ಕಾಲ
ಲೂಸ್ ಟಾಕ್ -ಮಂಗಳೂರು ಮಂಜುನಾಥ
ಏನ್ ಮಂಜುನಾಥ ಅವ್ರೇ, ದಿನ ಬೆಳಗಾದ್ರೆ ನಿಮ್ಮ ಮಂಗಳೂರಲ್ಲಿ ಹೇಳ್ದೆ-ಕೇಳ್ದೆ ಕೊಲೆ ಮಾಡ್ತಿದಾರಲ್ರೀ?
- ಏನ್ರೀ, ನಿಮ್ಮ ಮಾತಿನ ಅರ್ಥ? ಅಲ್ರೀ, ಕೊಲೆ ಮಾಡೋನು, ‘ಕೊಲೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು, ಕೊಲೆ ಮಾಡಲಪ್ಪಣೆಯೇ ದೊರೆಯೇ?’ ಅಂತ ಪರ್ಮಿಷನ್ ಕೇಳ್ಕಂಡ್ ಬರ್ತಾನಾ?
ಹಂಗಲ್ಲ, ಮಂಗಳೂರು ಇತ್ತೀಚೆಗೆ ತುಂಬಾ ಡೇಂಜರಸ್ ಆಗ್ತಾ ಇದೆ ಅಂತ
- ಹಂಗೆಲ್ಲ ಏನಿಲ್ಲ, ಎಲ್ಲಾ ಕಡೆ ಕ್ರೈಮ್ ಆಗ್ತಾ ಇದೆ. ನೀವು ಸುಮ್ನೆ ಮಂಗಳೂರು ಸರಿ ಇಲ್ಲ ಅಂತ ಎಲ್ಲರನ್ನೂ ಮಂಗ ಮಾಡ್ತಾ ಇದ್ದೀರಾ ಅಷ್ಟೇ.
ನಿಮ್ಮೂರಲ್ಲಿ ಯಾಕೆ ಇತ್ತೀಚೆಗೆ ಕಿರಿಕ್ ಆಗುವಂಥ ಘಟನೆಗಳೇ ನಡೀತಾ ಇವೆಯಲ್ಲ.
- ಹಂಗೇನಿಲ್ಲ, ನಾವು ಚೆನ್ನಾಗೇ ಇರ್ತೀವಿ, ನಮ್ಮೂರಲ್ಲಿ ಸಮುದ್ರ ಉಂಟಲ್ಲ, ಹಂಗಾಗಿ ‘ಬೀಚ್ ಬೀಚ್ ಮೆ’ ಹಿಂಗಾಗುತ್ತೆ ಅಷ್ಟೇ..
ಸರಿ, ನಿಮ್ಮ ಪ್ರಕಾರ, ಮಂಗಳೂರಲ್ಲಿ ಯಾಕೆ ಕೋಮುವಾದ, ರಾಜಕೀಯ ದ್ವೇಷ ಜಾಸ್ತಿ ಆಗ್ತಾ ಇದೆ?
- ಏನೂ ಜಾಸ್ತಿ ಆಗಿಲ್ಲ, ನೀವು ನೋಡೋ ದೃಷ್ಟಿಕೋನ ಸರಿ ಇಲ್ಲ ಅಷ್ಟೇ, ನೀವು ‘ಸೀ’ ಲೆವೆಲ್ನಿಂದ ಕೆಳಗೆ ನಿಂತು ನೋಡ್ತಾ ಇದ್ದೀರ, ಅದಕ್ಕೆ ನಿಮಗೆ ಎಲ್ಲಾ ಕೀಳಾಗಿ ಕಾಣ್ತಾ ಇದೆ ಅಷ್ಟೇ..
ಸರಿ, ಕೊಲೆ ಮಾಡೋದಕ್ಕೆ ಬಿಟ್ಟು, ನಿಮ್ಮ ಮಂಗಳೂರು ಬೇರೆ ಇನ್ಯಾವುದಕ್ಕೆ ಫೇಮಸ್ಸು?
- ಹಲೋ ಹಿಂಗೆ ಕೇಳಿದ್ರೆ, ನೆಕ್ಸ್ಟ್ ಮರ್ಡರ್ ನಿಂದೇ...
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಖೇಮು ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನ ನೋಡಿ ಅವನ ಅಪ್ಪ-ಅಮ್ಮ ಗಾಬರಿ ಆದ್ರು, ಖೇಮುನ ಕೇಳಿದ್ರು- “ಯಾರ್ದು ಕಾರು?" “ನಂದೇ, ಇವತ್ತು ಕೊಂಡುಕೊಂಡೆ" “ಅಷ್ಟು ದುಡ್ಡು ಎಲ್ಲಿತ್ತು?" “2000 ರುಪಾಯಿ ಕೊಟ್ಟೆ ಅಷ್ಟೆ" “2000 ರುಪಾಯಿಗೆ ನಿಂಗೆ ಬೆಂಜ್ ಕಾರ್ ಯಾರ್ ಕೊಡ್ತಾರೆ. ಏನ್ ತಮಾಷೆ ಮಾಡ್ತೀಯಾ?" “ಇಲ್ಲ, ಎದುರುಮನೆ ಆಂಟಿ ನಂಗೆ ಮಾರಿದ್ರು" ಖೇಮುವಿನ ಅಪ್ಪ-ಅಮ್ಮ “ಕಾಲೇಜು ಹುಡುಗ ಸಿಕ್ಕ ಅಂತ ಈ ಆಂಟಿ ಬುಟ್ಟಿಗೆ ಹಾಕ್ಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾಳೆ ಅನ್ಸುತ್ತ" ಅಂತ ಗುಸುಗುಸು ಮಾತಾಡಿಕೊಳ್ಳೋಕೆ ಶುರು ಮಾಡಿದ್ರು. ನಂತರ, ನಡಿ ಅಂತ ಅವನನ್ನು ಕರ್ಕೊಂಡು ಆಂಟಿ ಮನೆಗೆ ಹೊರಟ್ರು.
ಮೂವರೂ ಎದುರು ಮನೆ ಆಂಟಿ ಮನೆಗೆ ಹೋದಾಗ, ಆಂಟಿ ಆರಾಮಾಗಿ ಹೂವಿನ ಗಿಡಗಳಿಗೆ ನೀರು ಹಾಕ್ತಾ ಇದ್ರು. ಖೇಮುವಿನ ಅಪ್ಪ ಕೇಳಿದ “ನನ್ನ ಮಗನಿಗೆ ನೀವು 2000 ರುಪಾಯಿಗೆ ಬೆಂಜ್ ಕಾರ್ ಮಾರಿದ್ರಂತೆ. ಯಾಕಂತ ಕೇಳಬಹುದಾ?".
ಆಂಟಿ ಹೇಳಿದ್ಳು “ನನ್ನ ಗಂಡ ಒಂದು ವಾರದಿಂದ ಮನೆಯಲ್ಲಿ ಇಲ್ಲ. ಅವನು ಇವತ್ತು ಬೆಳಗ್ಗೆ ಕಾಲ್ ಮಾಡಿ, ‘ನಾನು ನನ್ನ ಸೆಕ್ರೆಟರಿ ಜತೆ ಹೋಗ್ತಾ ಇದ್ದೀನಿ. ಇನ್ಮೇಲೆ ಮನೆಗೆ ಬರಲ್ಲ. ನಾನು ಅವಳ ಜತೆನೇ ಇರ್ತೀನಿ. ನಿನ್ನ ಹೆಸರಿಗೆ ಈಗಾಗಲೇ ಬೇಕಾದಷ್ಟು ದುಡ್ಡು ಇಟ್ಟಿದ್ದೇನೆ. ಮನೆಯಲ್ಲಿ ಇರೋ ಬೆಂಜ್ ಕಾರು ನನ್ನ ಹೆಸರಲ್ಲಿದೆ. ಅದನ್ನ ಮಾರಿ ಆ ದುಡ್ಡನ್ನ ನನ್ನ ಅಕೌಂಟಿಗೆ ಹಾಕು’ ಅಂದ. ಅದಕ್ಕೇ ಮಾರಿದೆ".
ಲೈನ್ ಮ್ಯಾನ್
ಇನ್ನೊಬ್ಬರ ಸಾವಿನಿಂದ ಲಾಭ ಪಡೆಯೋ ಸ್ವಾರ್ಥಿಗಳ ಮಾತು
- ‘ಕೊಲೆ ಒಳ್ಳೆಯದು’
ರಿವರ್ಸ್ ಸ್ವೀಪ್ ಹೊಡೆಯೋರ ಬಗ್ಗೆ ಜನ ಹೇಳೋ ಮಾತು
- ಇವ್ನಿಗೆ ‘ನೆಟ್ಟಗೆ’ ಒಂದ್ ರನ್ ಹೊಡೆಯೂಕೂ ಬರಲ್ಲ.
ನಾವು ಸೋತಾಗ ಜನ ನಗ್ತಾರೆ. ಅದು ಜಗದ ನಿಯಮ. ಆದರೆ ಇತ್ತೀಚೆಗೆ ಯಾರೂ ನಮ್ಮನ್ನ ನೋಡಿ ನಗ್ತಾ ಇಲ್ಲ ಅಂದ್ರೆ ನಾವು ಗೆಲ್ತಾ ಇದ್ದೀವಿ ಅಂತ ಅರ್ಥನಾ?
- ಅಲ್ಲ, ದಿನಾ ಸೋಲೋರಿಗೆ ನಗೋರ್ಯಾರು ಅಂತ ಜನ ಸುಮ್ಮನಾಗಿದ್ದಾರೆ ಅಂತ ಅರ್ಥ.
ಕ್ಯಾಪ್ಟನ್ನೇ ವಿಕೆಟ್ ಕೀಪರ್ ಆದ್ರೆ, ಅವನ ಕೆಲಸ
- ಹಿಂದೆ ನಿಂತು ತಂಡವನ್ನು ಮುನ್ನಡೆಸೋದು
ದಡ್ಡರನ್ನ ಲೇವಡಿ ಮಾಡೋ ಉದ್ದೇಶದಿಂದ ‘ಸರ್’ ಅಂತ ಕರೆಯೋದು
- ‘ಸರ್’ಕ್ಯಾಸ್ಟಿಕ್
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
- ಯಾಕಂದ್ರೆ ಅವು ‘ಬಾಲಾ’ಪರಾಧಿಗಳು ಇಗೋ ಜಾಸ್ತಿ ಇದ್ದು ದುರಹಂಕಾರ ತೋರಿಸುವವರದು
- ‘ನಾನ್’ ಸೆನ್ಸ್
ಯಾವಾಗಲೂ ‘ನಾನು, ನಾನು’ ಅಂತನೇ ಮಾತಾಡೋನು
- ‘ಐ’ ಸ್ಪೆಷಲಿಸ್ಟ್
‘ಹಾಲಕೋಡಾ’ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ
- ಊರ ಹೆಸರು ಯಾಕೋ ಸರಿ ಇಲ್ಲ, ಅದು ‘ಹಾಕೋ ಲೋಡಾ’ ಆಗಬೇಕಿತ್ತು ಅಲ್ವಾ?
ಲೆಜೆಂಡರೀ ಡೆಂಟಿಸ್ಟ್ ಜೀವನಚರಿತ್ರೆ
- ‘ದಂತ’ಕಥೆ