ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್‌-ಜಮೀರ್‌ ?

ಆರೆಸ್ಸೆಸ್ ವಿರುದ್ಧದ ಹೋರಾಟದಿಂದ ವರಿಷ್ಠರ ಗಮನ ಸೆಳೆದಿರುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಂಪುಟದಲ್ಲಿ ಡಿಸಿಎಂ ಆಗಲಿ ಅಂತ ಸಿದ್ದರಾಮಯ್ಯ ಬಯಸಿದ್ದಾರೆ. ಅವರ ಈ ಬಯಕೆಗೆ ಮತ್ತೊಂದು ಒಳ ಉದ್ದೇಶವೂ ಇದೆ. ಅದೆಂದರೆ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವದ ಕೂಗು ಮೇಲೇಳಲು ಕಾರಣವಾಗುತ್ತಿರುವ ಮೂಲವು ‘ಕೂಲ್’ ಆಗುತ್ತದೆ ಎಂಬುದು.

ಮೂರ್ತಿಪೂಜೆ

ಮುಂದಿನ ತಿಂಗಳ ಮೂರನೇ ವಾರ ದಿಲ್ಲಿ ದಂಡಯಾತ್ರೆಗೆ ಹೊರಡಲಿರುವ ಸಿಎಂ ಸಿದ್ದರಾಮಯ್ಯ ವರಿಷ್ಠರ ಮುಂದೆ ಹೊಸ ಪ್ರಪೋಸಲ್ಲು ಮಂಡಿಸಲಿದ್ದಾರೆ. ಈ ಪ್ರಪೋಸಲ್ಲಿಗೆ ಒಪ್ಪಿಗೆ ಸಿಕ್ಕರೆ ಇನ್ನಿಬ್ಬರು ನಾಯಕರು ಕರ್ನಾಟಕದ ಉಪಮುಖ್ಯಮಂತ್ರಿಗಳಾಗಲಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ, ಉಪಮುಖ್ಯಮಂತ್ರಿ ಪಟ್ಟಕ್ಕೆ ಬರಲಿರುವ ಈ ನಾಯಕರ ಪೈಕಿ ಒಬ್ಬರು ದಲಿತ ನಾಯಕ ಪ್ರಿಯಾಂಕ್ ಖರ್ಗೆಯವರಾದರೆ, ಮತ್ತೊಬ್ಬರು ಮುಸ್ಲಿಂ ನಾಯಕ ಜಮೀರ್ ಅಹ್ಮದ್. ಅಂದ ಹಾಗೆ, ಉಪಮುಖ್ಯಮಂತ್ರಿ ಪಟ್ಟಕ್ಕೆ ಈ ಇಬ್ಬರು ನಾಯಕರು ಬರಬೇಕು ಅಂತ ಸಿದ್ದರಾಮಯ್ಯ ಬಯಸಲು ಕೆಲ ಕಾರಣಗಳಿವೆ.

ಉದಾಹರಣೆಗೆ ಪ್ರಿಯಾಂಕ್ ಖರ್ಗೆ ಅವರನ್ನೇ ತೆಗೆದುಕೊಳ್ಳಿ. ಇವತ್ತು ಬಿಜೆಪಿ ಮತ್ತು ಸಂಘ ಪರಿ ವಾರದ ವಿರುದ್ಧ ಹೋರಾಡುವ ವಿಷಯದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ದೊಡ್ಡದು. ಇತ್ತೀಚೆಗೆ ಆರೆಸ್ಸೆಸ್ ವಿರುದ್ಧ ಅವರು ಮುಗಿಬಿದ್ದಿರುವ ರೀತಿಯಿಂದ ಸ್ವತಃ ರಾಹುಲ್ ಗಾಂಧಿಯವರೇ ಖುಷಿಯಾಗಿದ್ದಾರೆ ಎಂದರೆ ಕೈ ಪಾಳಯದಲ್ಲಿ ಪ್ರಿಯಾಂಕ್ ವರ್ಚಸ್ಸು ಹೆಚ್ಚುತ್ತಿದೆ ಎಂದೇ ಅರ್ಥ.

ಹೀಗೆ ಬಿಜೆಪಿ, ಆರೆಸ್ಸೆಸ್ ವಿರುದ್ಧದ ಹೋರಾಟದಿಂದ ವರಿಷ್ಠರ ಗಮನ ಸೆಳೆದಿರುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಂಪುಟದಲ್ಲಿ ಡಿಸಿಎಂ ಆಗಲಿ ಅಂತ ಸಿದ್ದರಾಮಯ್ಯ ಬಯಸಿದ್ದಾರೆ. ಅವರ ಈ ಬಯಕೆಗೆ ಮತ್ತೊಂದು ಒಳ ಉದ್ದೇಶವೂ ಇದೆ. ಅದೆಂದರೆ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವದ ಕೂಗು ಮೇಲೇಳಲು ಕಾರಣವಾಗುತ್ತಿರುವ ಮೂಲವು ‘ಕೂಲ್’ ಆಗುತ್ತದೆ ಎಂಬುದು.

ಇದೇ ರೀತಿ ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಲಿ ಅಂತ ಸಿದ್ದ ರಾಮಯ್ಯ ಬಯಸು ತ್ತಿರುವ ಮತ್ತೊಂದು ಹೆಸರೆಂದರೆ ಜಮೀರ್ ಅಹ್ಮದ್ ಅವರದ್ದು. ಹೀಗೆ ಜಮೀರ್ ಅಹ್ಮದ್ ಅವರಿಗೆ ಪ್ರಮೋಷನ್ ಕೊಡ ಬೇಕು ಎಂಬ ಸಿದ್ದರಾಮಯ್ಯ ಬಯಕೆಗೆ ಜಮೀರ್ ಅವರಲ್ಲಿರುವ ಲೀಡರ್‌ಷಿಪ್ ಗುಣವೇ ಕಾರಣ. ತಮ್ಮ ಸಂಪುಟದಲ್ಲಿರುವ ಬಹುತೇಕ ನಾಯಕರು ‘ಆಲ್ ಇನ್‌ಕಮಿಂಗ್ ಫ್ರೀ-ಔಟ್ ಗೋಯಿಂಗ್ ಬಾರ್’ ಮೋಡ್‌ನವರಾದರೆ ಕೆಲವೇ ನಾಯಕರು ‘ಆಲ್ ಇನ್‌ಕಮಿಂಗ್ ಫ್ರೀ-ಔಟ್ ಗೋಯಿಂಗೂ ಫ್ರೀ’ ಮೋಡ್‌ನವರು.

ಅದರಲ್ಲಿ ಜಮೀರ್ ಫ್ರಂಟ್‌ಲೈನಿನಲ್ಲಿದ್ದಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು. ಹಾಗಂತ ಇದು ಸಿದ್ದರಾಮಯ್ಯ ಅವರ ಮನಸ್ಸಿಗಷ್ಟೇ ಬಂದಿರುವ ವಿಷಯವಲ್ಲ. ಬದಲಿಗೆ ಮಂಗಳೂರು ಗಲಭೆಯ ಎಪಿಸೋಡಿನ ನಂತರ ದಿಲ್ಲಿಯ ನಾಯಕರಿಗೂ ಮನವರಿಕೆ ಆಗಿರುವ ಸತ್ಯ. ಅದರ ಪ್ರಕಾರ, ಈ ಹಿಂದೆ ಮಂಗಳೂರಿನಲ್ಲಿ ಅಶ್ರಫ್ ಕೊಲೆ ಪ್ರಕರಣ ನಡೆಯಿತಲ್ಲ? ಇದರ ಬೆನ್ನ ಹಿಂದೆಯೇ ಸುಭಾಷ್ ಶೆಟ್ಟಿ ಮತ್ತು ಅಬ್ದುಲ್ ರೆಹಮಾನ್ ಅವರ ಹತ್ಯೆ ಪ್ರಕರಣಗಳು ನಡೆದವು. ‌

ಈ ಸಂದರ್ಭದಲ್ಲಿ ಅಮಾಯಕ ಅಬ್ದುಲ್ ರೆಹಮಾನ್ ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂಬ ವಿಷಯ ಬಂದಾಗ, ಸರಕಾರದ ಪರಿಹಾರಕ್ಕೂ ಕಾಯದೆ ಜಮೀರ್ ಅಹ್ಮದ್ ಅವರು ಅಬ್ದುಲ್ ರೆಹಮಾನ್ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡಿzರೆ. ಅದೇ ರೀತಿ ಅಶ್ರಫ್ ಮತ್ತು ಅಬ್ದುಲ್ ರೆಹಮಾನ್ ಗೆಳೆಯನ ಕುಟುಂಬಕ್ಕೂ ಸಿದ್ದರಾಮಯ್ಯ ಅವರ ಮುಂದೆಯೇ ಪರಿಹಾರ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಜತೆಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು, “ರೀ ಜಮೀರ್, ಆಕ್ಚುವಲಿ ನಿಮ್ಮ ವಿಷಯದಲ್ಲಿ ನನಗೆ ಭಿನ್ನಾಭಿಪ್ರಾಯವೇ ಇತ್ತು. ಆದರೆ ಇವತ್ತು ಹೇಳುತ್ತೇನೆ. ನೀವು ನಿಜವಾದ ಹೃದಯ ಶ್ರೀಮಂತಿಕೆ ಇರುವ ನಾಯಕ. ನಾನು ಕೂಡಾ ತುಂಬಾ ಲೀಡರುಗಳನ್ನು ಹತ್ತಿರದಿಂದ ನೋಡಿದ್ದೇನೆ. ಅದರಲ್ಲಿ ಬಹುತೇಕರು ಎಂಜಲು ಕೈಯಲ್ಲಿ ಕಾಗೆ ಓಡಿಸುವವರಲ್ಲ. ದಂಡಿಯಾಗಿ ದುಡ್ಡು ಮಾಡಿದರೂ ನಾಲ್ಕು ಜನರಿಗೆ ಹಂಚುವ ಗುಣ ಹೊಂದಿದವರಲ್ಲ. ಆದರೆ, ಯೂ ಆರ್ ಎ ರಿಯಲ್ ಲೀಡರ್" ಎಂದಿದ್ದಾರೆ.

ಮುಂದೆ ಈ ಎಪಿಸೋಡು ದಿಲ್ಲಿಯಲ್ಲೂ ಚರ್ಚೆಗೆ ಕಾರಣವಾಗಿದೆಯಲ್ಲದೆ ಜಮೀರ್ ಅಹ್ಮದ್ ಅವರ ಇಂಥ ಹಲವಾರು ದಾನ ಕಾರ್ಯಗಳ ವಿವರ ಹೊರಬಂದು ಒಂದು ಹವಾ ಎಬ್ಬಿಸಿದೆ. ಅಷ್ಟೇ ಅಲ್ಲ, ನಿಜವಾದ ನಾಯಕನಿಗೆ ಇಂಥ ಮನುಷ್ಯತ್ವದ ಗುಣಗಳಿರಬೇಕು ಎಂದು ಮಾತನಾಡಿಕೊಳ್ಳುವಂತೆ ಮಾಡಿದೆ.

ಮೂಲಗಳ ಪ್ರಕಾರ, ಇಂಥ ಹಲವು ಕಾರಣಗಳಿಗಾಗಿ ಜಮೀರ್ ಅಹ್ಮದ್ ಅವರ ಹೆಸರನ್ನು ಡಿಸಿಎಂ ಹುದ್ದೆಗೆ ಶಿಫಾರಸು ಮಾಡಲು ಹೊರಟಿರುವ ಸಿದ್ದರಾಮಯ್ಯ ಅವರು ಅಂತಿಮವಾಗಿ ಪ್ರಿಯಾಂಕ್ ಖರ್ಗೆ-ಜಮೀರ್ ಅಹ್ಮದ್ ತಮ್ಮ ಸಂಪುಟದ ಹೊಸ ಜೋಡೆತ್ತುಗಳಾಗಲಿ ಎಂದು ಬಯಸಿದ್ದಾರೆ.

ಕೆಪಿಸಿಸಿ ಪಟ್ಟಕ್ಕೆ ಕೃಷ್ಣ ಭೈರೇಗೌಡ?

ಇನ್ನು, ದಿಲ್ಲಿಗೆ ಹೋದಾಗ ಹಾಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲು ಸಿದ್ದರಾಮಯ್ಯ ಬಯಸಿದ್ದಾರೆ. ವಾಸ್ತವವಾಗಿ ಈ ಹಿಂದೆ ಲಿಂಗಾಯತ ನಾಯಕರೊಬ್ಬರನ್ನು ಕೆಪಿಸಿಸಿ ಪಟ್ಟಕ್ಕೆ ತರಬೇಕು ಅಂತ ಬಯಸಿದ್ದ ಸಿದ್ದರಾಮಯ್ಯ ಅವರು ಇದೇ ಕಾರಣಕ್ಕಾಗಿ ಅಪ್ಪಾಜಿ ನಾಡಗೌಡರ ಹೆಸರನ್ನು ಫ್ರಂಟ್‌ಲೈನಿಗೆ ತರಲು ಹೊರಟಿದ್ದರು.

ಆದರೆ ಸ್ವತಃ ಅಪ್ಪಾಜಿ ನಾಡಗೌಡರಿಗೆ ಕೆಪಿಸಿಸಿ ಪಟ್ಟಕ್ಕಿಂತ ಮಂತ್ರಿಗಿರಿಯೇ ವಾಸಿ ಅನ್ನಿಸಿದೆ. ಹೀಗಾಗಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರುವ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿ ಮಂತ್ರಿ ಮಂಡಲಕ್ಕೆ ಸೇರುವ ಬಗ್ಗೆ ಆಸಕ್ತಿ ತೋರಿಸಿzರೆ. ಪರಿಣಾಮ? ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಿಂದ ಅಪ್ಪಾಜಿ ನಾಡಗೌಡರ ಹೆಸರು ಹಿಂದೆ ಸರಿದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಫ್ರಂಟ್‌ಲೈನಿಗೆ ಬಂದಿದೆ.

ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಆಸೆ ಸಿದ್ದರಾಮಯ್ಯ ಅವರಿಗಿದ್ದರೂ ರಾಹುಲ್ ಗಾಂಧಿ ಅವರ ಮನಸ್ಸು ಅವರಿಗೆ ಅರ್ಥವಾಗಿದೆ. ಅದೆಂದರೆ ಕಂದಾಯ ಸಚಿವ ಕೃಷ್ಣ ಭೈರೇ ಗೌಡರನ್ನು ಭವಿಷ್ಯದ ನಾಯಕ ಅಂತ ರಾಹುಲ್ ಗಾಂಧಿ ಭಾವಿಸಿರುವುದು. ರಾಹುಲ್ ಗಾಂಧಿ ಅವರ ಈ ಮನದಿಂಗಿತ ಅರ್ಥವಾಗಿರುವುದರಿಂದ ಕೃಷ್ಣ ಭೈರೇಗೌಡರು ಕೆಪಿಸಿಸಿ ಅಧ್ಯಕ್ಷರಾಗಲಿ ಅಂತ ಸಿದ್ದು ಕೂಡಾ ಬಯಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣಭೈರೇಗೌಡರ ಹೆಸರನ್ನು ಸೂಚಿಸಿದರೆ ರಾಹುಲ್ ಗಾಂಧಿ ಖುಷಿ ಯಾಗುತ್ತಾರೆ ಎಂಬುದು ಸಿದ್ದು ಲೆಕ್ಕಾಚಾರ. ಇಂಥ ಲೆಕ್ಕಾಚಾರದ ನಂತರ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಪಡೆಯಲಿರುವ ಸಿದ್ದರಾಮಯ್ಯ, ಹಾಲಿ ಮಂತ್ರಿ ಮಂಡಲದಿಂದ ಯಾರನ್ನು ಬಿಡಬೇಕು? ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು? ಎಂಬ ಬಗ್ಗೆ ತಮ್ಮ ಕೈಲಿರುವ ಪಟ್ಟಿಯನ್ನು ವರಿಷ್ಠರಿಗೆ ನೀಡಲಿದ್ದಾರೆ.

ಮೂಲಗಳ ಪ್ರಕಾರ, ಹಾಲಿ ಸಂಪುಟದಲ್ಲಿರುವ ಬಹುತೇಕ ಸೀನಿಯರ್ ಮಂತ್ರಿಗಳು ಸಂಪುಟದಿಂದ ಹೊರಬೀಳಲಿದ್ದು ಅವರ ಜಾಗಕ್ಕೆ ಹಲವು ಮಂದಿ ಹಿರಿಯ ಶಾಸಕರು ಬರಲಿದ್ದಾರೆ. ಇದೇ ರೀತಿ, ಈ ಬಾರಿಯ ದಿಲ್ಲಿ ಭೇಟಿಯ ಸಂದರ್ಭದಲ್ಲಿ ತಮ್ಮ ನಾಯಕತ್ವದ ಅನಿವಾರ್ಯತೆಯ ಬಗ್ಗೆ ಸಿದ್ದರಾ ಮಯ್ಯ ವರಿಷ್ಠರಿಗೆ ಮನದಟ್ಟು ಮಾಡಿಕೊಡಲಿzರೆ ಎಂಬುದು ಅವರ ಪಾಳಯದ ವರ್ತಮಾನ.

ಕುಮಾರಣ್ಣನಿಗೆ ಅಮಿತ್ ಶಾ ಸಿಗ್ನಲ್ಲು

ಈ ಮಧ್ಯೆ, ಕರ್ನಾಟಕದ ರಾಜಕಾರಣದ ಮೇಲೆ ಹೆಚ್ಚೆಚ್ಚು ಗಮನವಿಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರಂತೆ. ಕಾರಣ? ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಗಾಗಿ ನಡೆಯುತ್ತಿರುವ ಶೀತಲ ಸಮರವು ನವೆಂಬರ್ ಮಧ್ಯಭಾಗ ದಿಂದ ತೀವ್ರರೂಪ ಪಡೆಯಲಿದೆ ಎಂಬುದು ಅಮಿತ್ ಶಾ ಅವರ ಲೆಕ್ಕಾಚಾರ.

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಂದ ನಂತರ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರಕ್ಕೆ ಒಪ್ಪಲಿ, ಒಪ್ಪದೆ ಇರಲಿ; ಆದರೆ ಕಾಂಗ್ರೆಸ್ ಪಾಳಯದಲ್ಲಿ ಘಟಸ್ಫೋಟ ಶತಸ್ಸಿದ್ಧ ಎಂಬುದು ಅಮಿತ್ ಶಾ ಅವರ ಲೆಕ್ಕಾಚಾರ. ಹೀಗಾಗಿ ತಲ್ಲಣಗೊಳ್ಳಲಿರುವ ಕಾಂಗ್ರೆಸ್ ಪಾಳಯವನ್ನು ಮತ್ತಷ್ಟು ತಲ್ಲಣಗೊಳಿಸಲು ಸಜ್ಜಾಗುವಂತೆ ಅಮಿತ್ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.

ಹೀಗೆ ಅಮಿತ್ ಶಾ ಅವರಿಂದ ಸೂಚನೆ ಪಡೆದ ಕುಮಾರ ಸ್ವಾಮಿ ಅವರು ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರು, ಸಚಿವರ ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡಲು ಅಣಿಯಾಗುತ್ತಿದ್ದಾರೆ. ಮತ್ತದೇ ಕಾರಣಕ್ಕಾಗಿ ಅವರ ಬಳಿ ಇರುವ ಹಲವು ಮಹತ್ವದ ದಾಖಲೆಗಳು ಬಹಿರಂಗವಾಗಲಿವೆ ಎಂಬುದು ಲೇಟೆಸ್ಟ್ ನ್ಯೂಸು.

ಬಿಜೆಪಿಯಲ್ಲಿ ಜಿಬಿಎ ಕಿರಿಕಿರಿ

ಉಳಿದಂತೆ ರಾಜ್ಯ ಬಿಜೆಪಿ ಪಾಳಯದಲ್ಲಿ ಜಿಬಿಎ ಕಿರಿಕಿರಿ ಶುರುವಾಗಿದೆ. ಕಾರಣ? ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ನಡೆಸಿರುವ ತಯಾರಿ. ಈ ತಯಾರಿಯ ಭಾಗವಾಗಿ ಐದು ಭಾಗಗಳಿಗೆ ಚುನಾವಣಾ ಉಸ್ತುವಾರಿಗಳನ್ನು ಪಕ್ಷ ನೇಮಕ ಮಾಡಿದ ನಂತರ ಪಕ್ಷದಲ್ಲಿ ಒಂದು ಹಾಹಾಕಾರ ಎದ್ದಿದೆ. ಕಾರಣ? ಇಂಥ ಉಸ್ತುವಾರಿ ಗಳನ್ನು ನೇಮಕ ಮಾಡುವಾಗ ಹಿರಿಯ ನಾಯಕರಾದ ಅರವಿಂದ ಲಿಂಬಾವಳಿ, ರವಿ ಸುಬ್ರಹ್ಮಣ್ಯ, ಎನ್.ಅರ್.ರಮೇಶ್ ಅವರ ಹೆಸರುಗಳನ್ನು ಪರಿಗಣಿಸಿಯೇ ಇಲ್ಲ.‌

ಹೀಗಾಗಿ ರಾಜಧಾನಿಯ ಬಿಜೆಪಿ ಪಾಳಯದಲ್ಲಿ ಕಲರವ ಶುರುವಾಗಿದೆಯಲ್ಲದೆ ಇದಕ್ಕೆಲ್ಲ ಬೆಂಗಳೂರಿನ ಒಬ್ಬರು ಲೀಡರೇ ಕಾರಣ ಎಂಬ ಕೂಗೂ ಕೇಳಿಬರುತ್ತಿದೆ. ಕುತೂಹಲದ ಸಂಗತಿ ಎಂದರೆ ಈ ಎಪಿಸೋಡಿನಲ್ಲಿ, ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ಹೆಸರು ತಪ್ಪಿಯೂ ಕೇಳುತ್ತಿಲ್ಲ. ಸ್ವತಃ ಅಸಮಾಧಾನಿತರು ಕೂಡಾ ‘ಜಿಬಿಎ ಎಲೆಕ್ಷನ್‌ಗೆ ಸಂಬಂಧಿಸಿದ ತಯಾರಿಯಲ್ಲಿ ವಿಜಯೇಂದ್ರ ಮೂಗು ತೂರಿಸಿಲ್ಲ. ಯಾಕೆಂದರೆ ಬೆಂಗಳೂರಿನ ರಾಜಕಾರಣದ ವಿಷಯದಲ್ಲಿ ಅವರಿಗೀಗ ಆಸಕ್ತಿಯೂ ಇಲ್ಲ. ಆದರೆ ವಿಜಯೇಂದ್ರ ಅವರ ಈ ನಿರಾಸಕ್ತಿಯ ಲಾಭ ಪಡೆದು ಬೆಂಗಳೂರಿನ ಒಬ್ಬ ನಾಯಕರು ಆಟವಾಡುತ್ತಿದ್ದಾರೆ’ ಎಂದು ಸಿಟ್ಟು ಕಾರಿಕೊಳ್ಳು ತ್ತಿದ್ದಾರೆ. ಮುಂದೇನಾಗುತ್ತದೋ ಕಾದು ನೋಡಬೇಕು.

ಲಾಸ್ಟ್ ಸಿಪ್: ಅಂದ ಹಾಗೆ, ಅಧಿಕಾರ ಹಂಚಿಕೆಯ ವಿಷಯದಲ್ಲಿ ಏನೇ ಕೇಳುತ್ತಿರಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪು ಮಾತ್ರ ಫುಲ್ಲು ಕಾನಿಡೆಂಟ್ ಅಗಿದೆ. ಅದರ ಪ್ರಕಾರ, ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ವರಿಷ್ಠರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಆಹ್ವಾನಿಸಲಿದ್ದಾರೆ. ಈ ಆಹ್ವಾನದ ಮೇರೆಗೆ ವರಿಷ್ಠರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ ಅವರಿಗೆ ಅಧಿಕಾರ ತ್ಯಾಗ ಮಾಡು ವಂತೆ ಸೂಚನೆ ನೀಡಲಾಗುತ್ತದೆ. ಇದಾದ ನಂತರ ಡಿಕೆಶಿ ಸಿಎಂ ಆಗಲು ಅಣಿಯಾಗುತ್ತಾರೆ ಎಂಬುದು ಆ ಕ್ಯಾಂಪಿನ ನಂಬಿಕೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author