ಶಶಾಂಕಣ
ಸರಕಾರಿ ಶಾಲೆಗಳು ಈಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿವೆ ಮಾತ್ರವಲ್ಲ, ಅವುಗಳ ಆತ್ಮವೇ ತಲ್ಲಣಿಸುವಂತಿವೆ! ಏಕೆಂದರೆ, ಕೆಪಿಎಸ್ ಶಾಲೆ ಅಥವಾ ಇನ್ನಾವುದೋ ಇನಿಷಿಯಲ್ಸ್ನಿಂದ ಕರೆಯ ಲ್ಪಡುವ ಶಾಲೆಗಳ ವಿಸ್ತರಣೆಗಾಗಿ, ಈಗಿರುವ ಸರಕಾರಿ ಶಾಲೆಗಳನ್ನು ವಿಲೀನಗೊಳಿಸುವರಂತೆ ಎಂಬ ಸುದ್ದಿ ಹರಿದಾಡುತ್ತಿದೆ; ಇದು ಗಾಳಿಸುದ್ದಿ ಮಾತ್ರ ಎಂದು ಧೈರ್ಯ ಹೇಳುವವರೂ ಉಂಟು!
ಯಾರಿಗೆ ಗೊತ್ತು, ಇಂದು ಬೆಂಗಳೂರಿನಲ್ಲಿ ಕುಳಿತವರು ಒಂದು ಪುಟ್ಟ ಸಹಿ ಹಾಕಿದರೆ ಸಾಕು, ಹಳ್ಳಿ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲೂಬಹುದು ಅಥವಾ ಸಾವಿರಾರು ಶಾಲೆಗಳು ಮುಚ್ಚಲೂಬಹುದು!
ಸರಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ಸುದ್ದಿಯೊಂದಿದೆ; ಮುಚ್ಚಲಾದ ಸರಕಾರಿ ಶಾಲೆ ಗಳಲ್ಲಿ ಎನ್ಜಿಒಗಳು ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂಬ ಇನ್ನೊಂದು ಸುದ್ದಿ!
ಅಂದ ಹಾಗೆ, ಸರಕಾರಿ ಶಾಲೆಯ ಕಟ್ಟಡ ಎನ್ ಜಿಒಗಳಿಗೇಕೆ ಬೇಕು? ಸರಕಾರಿ ಶಾಲೆಗಳ ಕುರಿತು ಇಂಥ ಹಲವು ಸುದ್ದಿಗಳ ಮಹಾಪೂರವೇ ಹರಿದು ಬರುತ್ತಿರುವ ಈ ದಿನಗಳಲ್ಲಿ, ಮಳೆಗಾಲದ ಮಹಾಪೂರದಲ್ಲೂ ತಪ್ಪದೇ ನಡೆದು, ಸರಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ನನ್ನ ಬಾಲ್ಯದ ನೆನಪಾಗುತ್ತಿದೆ.
ಇದನ್ನೂ ಓದಿ: Shashidhara Halady Column: ಈ ಕೀಟಗಳು ಕಡಿದರೆ ಅಪಾಯ ತಪ್ಪಿದ್ದಲ್ಲ!
ಐದನೆಯ ತರಗತಿಯಿಂದ ಏಳನೆಯ ತರಗತಿಯ ತನಕ ನಾನು ಓದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ ಮನೆಯಿಂದ ಸುಮಾರು ಮೂರು ಕಿ.ಮೀ. ದೂರದ ನಡಿಗೆ ದಾರಿ. ದಟ್ಟ ಕಾಡಿನ ಪಕ್ಕದಲ್ಲಿದ್ದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಾಡಿ’ ಇದು ಇದ್ದುದು, ಪಡುಹಾಲಾಡಿ ಯಲ್ಲಿ. ಆ ಶಾಲೆಗೆ ಹೋಗಲು ಮೂರು ದಾರಿಗಳಿದ್ದವು; ಎಲ್ಲವೂ ಕಠಿಣವೇ. ಹಾಗೆ ನೋಡಿದರೆ, ಈಗಿನ ಪೇಟೆಯ ಶಾಲಾ ಮಕ್ಕಳು ಶಾಲೆಗೆ ತೆರಳಲು ಇರುವ ವಾಹನ ಸೌಕರ್ಯ, ರಸ್ತೆಗಳನ್ನು ಗಮನಿಸಿದರೆ ನಮಗಿದ್ದ ಆ ಮೂರು ದಾರಿಗಳು ದಾರಿಗಳೇ ಅಲ್ಲ, ಕಾಡಂಚಿನ ಜಾಡುಗಳು.
ಆಗಿನ ಕಾಲದ ಹೆಚ್ಚಿನ ಹಳ್ಳಿಯ ಹೈದರಿಗೆ ಹೆಚ್ಚು ಕಮ್ಮಿ ಅಂಥದ್ದೇ ಅಥವಾ ಅದಕ್ಕಿಂತ ದುರ್ಗಮ ಎನಿಸುವ ವ್ಯವಸ್ಥೆ ಇದ್ದುದರಿಂದ, ಈಗಿನ ಮಕ್ಕಳ ಸೌಕರ್ಯಕ್ಕೆ ಹೋಲಿಸದೇ, ಆ ಮೂರು ದಾರಿಗಳ ವಿವರ ನೋಡೋಣ. ನಮ್ಮ ಮನೆಯ ಎದುರಿನಲ್ಲಿ, ಉತ್ತರ ದಿಕ್ಕಿಗೆ ಉದ್ದಕ್ಕೂ ಗದ್ದೆಗಳು; ವರ್ಷದ ೮ ತಿಂಗಳುಗಳ ಕಾಲ ನೀರಿನಿಂದ ತುಂಬಿರುತ್ತಿದ್ದ ಆ ಗದ್ದೆಗಳಲ್ಲಿ ಭತ್ತವೇ ಪ್ರಧಾನ ಬೆಳೆ.
ನಮ್ಮ ಮನೆಯ ಪೂರ್ವ ದಿಕ್ಕಿನಲ್ಲೂ, ಒಂದು ಕಿ.ಮೀ. ತನಕ ಗದ್ದೆ ಬೈಲು. ದಕ್ಷಿಣ ದಿಕ್ಕಿನಲ್ಲಿ ಹಾಡಿ, ಹಕ್ಕಲು ಗುಡ್ಡ. ಪಶ್ಚಿಮ ದಿಕ್ಕಿನಲ್ಲೂ ಗದ್ದೆಗಳು; ಅದರಾಚೆ ಸೊಪ್ಪಿನ ಅಣೆ ಮತ್ತು ಹಾಡಿ. ಇಲ್ಲೆಲ್ಲೂ ಯಾವುದೇ ವಾಹನ ಅಥವಾ ಸೈಕಲ್ ಓಡುವ ಅವಕಾಶ ಇರಲಿಲ್ಲ. ಬೆಳಗ್ಗೆದ್ದು, ಗಂಜಿ ಊಟ ಮಾಡಿ, ಅದೇ ಗಂಜಿಯನ್ನು ಬುತ್ತಿ ಕಟ್ಟಿಕೊಂಡು ಹೊರಟರೆ, ಮೊದಲಿಗೆ ಗದ್ದೆ ಬೈಲಿನ ಕಂಟದ (ಅಂಚು, ಬದು) ಮೇಲೆ ನಡೆಯಬೇಕು.
ಸುಮಾರು ಒಂದು ಕಿ. ಮೀ.ನಷ್ಟು ದೂರ ಆ ಬೈಲಿನಲ್ಲಿ ಸಾಗುವಾಗ ಹಲವು ಅನುಭವಗಳು. ಗದ್ದೆಯ ನೀರಿನಲ್ಲಿ ಬೆಳೆಯುವ ಪಾಚಿ, ಗದ್ದೆಯಂಚಿನಲ್ಲಿ ಮಳೆಗಾಲದಲ್ಲಿ ಬೆಳೆಯುವ ದಟ್ಟ ನೇರಳೆ ಬಣ್ಣದ ಹೂವು ಮತ್ತು ಕಾಂಡ ಹೊಂದಿರುವ ಸೋಣೆ ಗಿಡ, ದಾರಿಯುದ್ದಕ್ಕೂ ಹುಲ್ಲು, ಗದ್ದೆಯ ಕಳೆಗಳು, ಅದನ್ನು ಕಿತ್ತು ದಾರಿಯ ಮೇಲೆ ಎಸೆಯುವ ಪರಿಪಾಠ, ಭತ್ತ ಹೊಡೆಯಾಗಿ ಹೂ ಬಿಡುವುದು, ತೆನೆಗಟ್ಟುವುದು, ಆಗ ಬತ್ತದಲ್ಲಿರುವ ಹಾಲು, ಕೆಲವು ಭತ್ತಗಳು ಕೆಂಪು ಹೊದಳಾಗುವುದು, ಬಲಿತಾಗ ಭತ್ತದ ಗಿಡ ಹಳದಿಯಾಗುವುದು, ಅದರ ಕೊಯ್ಲು, ಎರಡು ದಿನ ಗದ್ದೆಯಲ್ಲೇ ಒಣಗಿಸಿ, ಮನೆಯ ಕಣಕ್ಕೆ ತಂದು ಬಡಿಯುವುದು- ಇವೆಲ್ಲವೂ ಪ್ರತಿದಿನ ಆ ದಾರಿಯಲ್ಲಿ ಸಾಗುವ ನಮಗೆ ಪರಿಸರ ಪಾಠಗಳು. ಚಳಿಗಾಲದ ಬೆಳಗಿನ ಹೊತ್ತಿನಲ್ಲಿ ಇಬ್ಬನಿಯಿಂದ ತುಂಬಿ ಗದ್ದೆಯಂಚಿನ ಹುಲ್ಲು, ನಮ್ಮ ಸೊಂಟದ ತನಕ ಒದ್ದೆಮಾಡುವುದೂ ಉಂಟು!
ಮಳೆಗಾಲದಲ್ಲಿ ಸುರಿವ ಮಳೆಯಲ್ಲೇ, ಭತ್ತದ ಗಿಡಗಳನ್ನು ಕಾಲಿಗೆ ತಾಗಿಸಿಕೊಳ್ಳುತ್ತಾ ನಡಿಗೆ! ಆ ಬೈಲುದಾರಿಯ ತುದಿಯಲ್ಲಿ ಒಂದು ತೋಡು. ಅದನ್ನು ದಾಟಲು ೪ ಅಡಿ ಅಗಲದ ಮರದ ಹಲಗೆಗಳನ್ನು ಜೋಡಿಸಿ ಮಾಡಿದ್ದ ಮರದ ಸಾರ. ಅದರ ಒಂದೆರಡು ಹಲಗೆಗಳು ಕಿತ್ತು ಹೋಗಿದ್ದರೂ, ಮಕ್ಕಳು ನಡೆಯಲು ತೊಂದರೆ ಇರಲಿಲ್ಲ. ಆ ಸಂಕ ದಾಟಿ ಒಂದು ಏರುದಾರಿ ಯನ್ನೇರಿದಾಗ, ದಟ್ಟವಾಗಿ ಮರಗಳು ಬೆಳೆದಿದ್ದ ಒಂದು ಹಾಡಿ. ಅದನ್ನು ಪ್ರವೇಶಿಸುವಾಗ, ಎಡಭಾಗದಲ್ಲಿ ಒಂದೆರಡು ಮಕ್ಕಿಗದ್ದೆ, ಅಲ್ಲೊಂದು ಹುಲ್ಲು ಮಾಡಿನ ಪುಟ್ಟ ಮನೆ. ಅಲ್ಲಿದ್ದ ಬಡ ಕೃಷಿಕ ಕಾರ್ಮಿಕರ ಕುಟುಂಬ, ಒಂದು ರಾತ್ರಿ ಸದ್ದಿಲ್ಲದೇ ಮನೆ ಖಾಲಿ ಮಾಡಿ, ಒಂದು ಖಾಲಿ ಮಣ್ಣಿನ ಮಡಕೆಯನ್ನು ಮನೆ ಎದುರಿನ ಅಂಗಳದಲ್ಲಿ ಕವುಚಿ ಹಾಕಿ ಹೋಗಿದ್ದರು! ಅದೊಂದು ಬೇರೆಯೇ ಕಥೆ.
ಈ ಹಾಡಿ ದಾರಿಯು ಹಲವು ಕೌತುಕಗಳ ಆಗರ. ಅಲ್ಲಿ ಒಂದು ರಾಶಿ ಕಾಯಿಕಳ್ಳಗಳಿದ್ದವು (ಓತಿ ಕ್ಯಾತ). ಅವಕ್ಕೆ ಕಲ್ಲು ಹೊಡೆಯುವುದು ಶಾಲಾ ಮಕ್ಕಳ ಹವ್ಯಾಸ. ಮಳೆಗಾಲ ಮುಗಿಯುವ ತನಕ ತಿಳಿನೀರು ಹರಿಯುವ ಒಂದು ತೋಡು ಆ ಹಾಡಿಯ ಇಳುಕಲಿನಲ್ಲಿ ಹರಿಯುತ್ತಿತ್ತು.
ಇಳಿಜಾರಿನ ಕಲ್ಲುಗಳ ನಡುವೆ ಹರಿದುಬರುತ್ತಿದ್ದ ಆ ಪುಟ್ಟ ತೋಡಿನ ನೀರು ಅದೆಷ್ಟು ತಿಳಿಯಾಗಿ ತ್ತೆಂದರೆ, ಶಾಲೆಯಿಂದ ಸಂಜೆ ವಾಪಸಾಗುವಾಗ, ಆ ನೀರನ್ನೇ ನಾವು ಹಲವು ಬಾರಿ ಕುಡಿದದ್ದು ಇದೆ. ಇದೇ ಹಾಡಿಯಲ್ಲಿ ಒಂದು ಮಟ್ಟಸ ಜಾಗದಲ್ಲಿ ಒಂದು ನೀರಿನ ಬುಗ್ಗೆ ಇತ್ತು. ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಅದರಿಂದ ಗುಳುಗುಳು ಎಂದು ನೀರು ಉಕ್ಕಿ ಹರಿಯುವುದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.
ಒಂದು ಸಂಜೆ, ನನ್ನ ಜತೆಗಾರ ಶಾಲಾ ಮಕ್ಕಳು ಆ ಬುಗ್ಗೆಗೆ ಕಲ್ಲು ತುಂಬತೊಡಗಿದರು. ‘ಹಾಗೆ ಮಾಡಬೇಡಿ, ಕಲ್ಲು ತುಂಬಿದರೆ ನೀರಿನ ಬುಗ್ಗೆ ಒಣಗಿ ಹೋಗಬಹುದು’ ಎಂದು ನಾನು ಹೇಳಿದರೂ ಕೇಳದೆ, ೨-೩ ದಿನ ಆ ಬುಗ್ಗೆಯೊಳಗೆ ಕಲ್ಲುಗಳನ್ನು ತುಂಬಿದರು. ಆ ನಂತರ ಆ ಬುಗ್ಗೆ ಕಾಯಂ ಆಗಿ ಒಣಗಿಹೋಯ್ತು!
ಈ ಹಾಡಿದಾರಿಯಲ್ಲಿ ಮಣ್ಣು ರಸ್ತೆಯಿತ್ತು. ಅದರಲ್ಲಿ ಸುಮಾರು ಅರ್ಧ ಕಿ.ಮೀ. ನಡೆದು, ಎಡಭಾಗ ದಲ್ಲಿ ಕಾಣುವ ಮಕ್ಕಿಗದ್ದೆ ಮತ್ತು ಬೈಲುಗದ್ದೆಯಲ್ಲಿ ನಡೆಯಬೇಕು. ಇದು ಹಂದಿಕೊಡ್ಲು. ಇಲ್ಲಿ ಒಂದೆರಡು ಮನೆಗಳು, ಪುಟ್ಟ ಅಡಕೆ ತೋಟ, ತೋಡು ಇದ್ದವು. ಆ ಅಡಕೆ ಮರಗಳು ಅದೆಷ್ಟು ಪುರಾತನವೆಂದರೆ, ಸಣ್ಣ ಗಾಳಿ ಬಂದರೂ, ಬಳುಕುತ್ತಾ ತೇಲಾಡುವಂತೆ ತೂಗುತ್ತಿದ್ದವು.
ಇಲ್ಲಿದ್ದ ಅಡಕೆ ಮರಗಳ ಕಾಂಡ ಎಂದರೆ, ಹಾರುವ ಓತಿಗಳಿಗೆ ಬಹಳ ಇಷ್ಟ. ತಮ್ಮ ಕುತ್ತಿಗೆಯ ಹೊರಭಾಗದಲ್ಲಿದ್ದ ಹಳದಿ ಬಣ್ಣದ ನಾಲಗೆಯನ್ನು ಅಲ್ಲಾಡಿಸುತ್ತಾ, ಒಂದು ಮರದಿಂದ ಇನ್ನೊಂದು ಮರಕ್ಕೆ ಗ್ಲೈಡ್ ಮಾಡುತ್ತಾ ಹಾರಾಡುವ ಹಾರುವ ಓತಿಯನ್ನು ನಮ್ಮೂರಿನವರು ಕರೆಯುತ್ತಿದ್ದು ‘ಓಂತಿ’ ಎಂದು. ಆ ಜಾಗದಲ್ಲಿ ನಾನು ಹಲವು ಬಾರಿ ಹಾರುವ ಓತಿಗಳನ್ನು ಕಂಡಿದ್ದೆ. ಹಂದಿಕೊಡ್ಲು ಬೈಲು ದಾಟಿ, ಒಂದು ಮರದ ಸಂಕದ ಮೇಲೆ ತೋಡೊಂದನ್ನು ದಾಟಿದರೆ, ಮೂಡುಹಾಲಾಡಿಯ ಗೋಳಿಯರ ಅಂಗಡಿ ಹತ್ತಿರ ಟಾರು ರಸ್ತೆಯನ್ನು ಪ್ರವೇಶಿಸುತ್ತಿದ್ದೆವು.
ಅಲ್ಲಿಂದ ಒಂದು ಕಿ.ಮೀ. ರಸ್ತೆಯ ಮೇಲೇ ನೇರವಾಗಿ ಪಶ್ಚಿಮಕ್ಕೆ ನಡೆದರೆ, ಹಾಲಾಡಿಯ ಸಣ್ಣ ಹೊಳೆಯ ಮೇಲಿನ ಸೇತುವೆಯನ್ನು ದಾಟಿ, ಪಡುಹಾಲಾಡಿಯಲ್ಲಿದ್ದ ಶಾಲೆ ತಲುಪುತ್ತಿದ್ದೆವು.
ಈ ಶಾಲೆಗೆ ತಲುಪುವ ಎರಡನೆಯ ದಾರಿ, ಸ್ವಲ್ಪ ಹತ್ತಿರದ ದಾರಿ. ಆರಂಭದ ಗದ್ದೆಬೈಲಿನ ನಡಿಗೆ, ಮರದ ಸಾರ ಮೊದಲಿನ ದಾರಿಯಂತೆಯೇ. ಹಾಡಿಯ ದಾರಿ ಸಿಕ್ಕಾಗ, ಹಂದಿಕೊಡ್ಲಿಗಿಂತ ಮುಂಚೆ, ಎಡಭಾಗದ ಹಾಡಿ ಮತ್ತು ಗುಡ್ಡೆಯನ್ನೇರಿ ಸಾಗಿದರೆ, ಸ್ವಲ್ಪ ದೂರದಲ್ಲಿ ಕುಚ್ಚಾಳು ಬೈಲು ಸಿಗುತ್ತದೆ. ಆದರೆ, ಈ ದಾರಿಯಲ್ಲಿ ಸಿಗುವ ಹಾಡಿ, ಹಕ್ಕಲು ಎಲ್ಲವೂ ದಟ್ಟವಾಗಿ ಗಿಡಮರ ಬೆಳೆದಿರುವ ಜಾಗ. ಕುಚ್ಚಾಳು ಬೈಲಿಗೆ ಇಳಿಯುವ ದಾರಿಯಂತೂ ಸಣ್ಣ ಚಾರಣ ಮಾಡಿದಷ್ಟು ಕಡಿದು. ಅಲ್ಲಿಂದ ಮುಂದೆ ಬೈಲು, ತೋಡು, ಸಂಕಗಳನ್ನು ಹಾದರೆ, ಕುದುರುಮನೆಯ ಹತ್ತಿರ, ಸಣ್ಣ ಸೇತುವೆಗಿಂತ ಸ್ವಲ್ಪ ಮುಂಚೆ, ಟಾರು ರಸ್ತೆಯನ್ನು ಕೂಡಿಕೊಳ್ಳಬಹುದಿತ್ತು.
ಮೊದಲನೆಯ ದಾರಿಗೆ ಹೋಲಿಸಿದರೆ ಈ ದಾರಿ ತುಸು ಕಠಿಣ, ಆದರೆ ತುಸು ಹತ್ತಿರ. ದಾರಿ ಯುದ್ದಕ್ಕೂ ಸಿಗುವ ಗಿಡ ಮರಗಳ ವೈವಿಧ್ಯ, ಬಳ್ಳಿಗಳ ದಟ್ಟಣೆ ಎಲ್ಲವೂ ಹೆಚ್ಚು ಸುಂದರ, ಆಪ್ಯಾಯಮಾನ. ಮಳೆಗಾಲ ಕಳೆದ ನಂತರ ಈ ದಾರಿಯಲ್ಲಿ ಸಾಗುವ ಪರಿಪಾಠ. ಒಂದು ದಿನ ಇದೇ ದಾರಿಯಲ್ಲಿ ವಾಪಸಾಗುವಾಗ, ಮಾವಿನ ಗಿಡವೊಂದರಲ್ಲಿದ್ದ ಮಾವಿನ ಮಿಡಿಗಳನ್ನು ಕೊಯ್ದು, ಕಲ್ಲಿನಿಂದ ಜಜ್ಜಿ ಅಲ್ಲೇ ಸ್ವಾಹಾ ಮಾಡಿದ್ದೆವು. ನನ್ನ ಜತೆಗಾರರು ಇದಕ್ಕೆಂದೇ ಮನೆಯಿಂದ ಉಪ್ಪನ್ನು ಸಹ ತಂದಿದ್ದರು!
ಆ ಸರಕಾರಿ ಶಾಲೆಗೆ ನಮ್ಮ ಮನೆಯಿಂದ ಹೋಗಬಹುದಾದ ಮೂರನೆಯ ದಾರಿ ಇನ್ನೂ ಕಠಿಣ. ಮಳೆಗಾಲದಲ್ಲಿ ಅದನ್ನು ಬಳಸಿದರೆ, ಜೀವಭಯವೂ ಇತ್ತು! ಅದರಲ್ಲಿ ಹೋದರೆ ಚಾರಣ ಮಾಡಿ ದಂಥ ಅನುವಭ!
ಅದೊಂದು ಸಾಹಸಮಿಶ್ರಿತ ದಾರಿ! ಜೀವಭಯ ಇದ್ದದ್ದು ಕೊಯ್ಕಾಡಿ ಬೈಲಿನಲ್ಲಿದ್ದ ಸಂಕದ ಮೇಲೆ ನಡೆಯುವಾಗ! ಮಳೆಗಾಲದಲ್ಲಿ ತುಂಬಿ ಹರಿಯುವ ಆ ಸಣ್ಣ ಹೊಳೆಯನ್ನು ದಾಟಲು ಹಾಕಿದ್ದ, ಏಕೈಕ ಮರದ ಕಾಂಡದ ಮೇಲೆ ನಡೆಯುವ ಐದನೆಯ ತರಗತಿಯ ವಿದ್ಯಾರ್ಥಿಯೊಬ್ಬನು, ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದರೆ, ಜೀವ ಉಳಿಯುವ ಸಾಧ್ಯತೆ ಕಡಿಮೆ. ಹತ್ತಿರ ಮನೆಗಳೂ ಇರಲಿಲ್ಲ. ಆದ್ದರಿಂದಲೇ ಇರಬೇಕು ಈ ದಾರಿಯನ್ನು ನಾವು ಮಕ್ಕಳು ಬಳಸುತ್ತಿದ್ದುದು ಕಡಿಮೆ.
ಈ ದಾರಿ ಹಿಡಿಯಲು, ನಮ್ಮ ಮನೆಯಿಂದ ಉತ್ತರ ದಿಕ್ಕಿನ ಗುಡ್ಡೆಯಲ್ಲಿದ್ದ ಮುದೂರಿ ದೇವಸ್ಥಾನಕ್ಕೆ ಸಾಗುವ ದಾರಿಯಲ್ಲಿ ಸಾಗಿ, ದೇವಸ್ಥಾನದ ಹಿಂಭಾಗದ ಹಾಡಿಯಲ್ಲಿ ನಡೆಯಬೇಕು. ಈ ಹಾಡಿ ಯಂತೂ ದಟ್ಟ ಕಾಡಿನ ಸ್ವರೂಪದ್ದು. ವಿವಿಧ ರೀತಿಯ ಮರಗಳು, ಪೊದೆಗಳು ಅಲ್ಲಿನ ವಿಶೇಷ. ಈ ಹಾಡಿಯಲ್ಲಿ ಪ್ಯಾರಡೈಸ್ - ಕ್ಯಾಚರ್ ಹಕ್ಕಿಗಳು ಜಾಸ್ತಿ ಕಾಣ ಸಿಗುತ್ತಿದ್ದವು.
ಮರಕೆಸು ಸಹ ಅಲ್ಲಿ ಹೆಚ್ಚು. ದಾರಿಯು ಅಲ್ಲಲ್ಲಿ ಕೊರಕಲು ಬಿದ್ದು, ನಡಿಗೆಯ ಅನುಭವಕ್ಕೆ ರೋಚಕತೆಯನ್ನು ತುಂಬುತ್ತಿತ್ತು. ಹಾಡಿ ದಾಟಿ, ಕೊಯ್ಕಾಡಿ ಬೈಲಿನಲ್ಲಿ ಸಾಗುವ ಈ ದಾರಿ, ಅರ್ಧ ಕಿ.ಮೀ. ಸಾಗಿದಾಗ ಒಮ್ಮೆಗೇ ಗಕ್ಕನೆ ನಿಂತುಬಿಡುತ್ತದೆ. ಏಕೆಂದರೆ, ದಾರಿಗಡ್ಡಲಾಗಿ, ಹಾಲಾಡಿ ಸಣ್ಣ ಹೊಳೆ ಹರಿಯುತ್ತಿದೆ! ಸಾಕಷ್ಟು ಅಗಲವಾಗಿದ್ದ ಆ ಹೊಳೆಯನ್ನು ದಾಟಲು ಆಗ ಇದ್ದದ್ದು ಒಂದೇ ಮರದ ಸಂಕ. ಅದರ ಮೇಲೆ ನಡೆಯುವಾಗ, ಆ ಸಂಕವು ನಿಧಾನವಾಗಿ ಅಲ್ಲಾಡುತ್ತಿತ್ತು!
ಐದನೆಯ ತರಗತಿಯಲ್ಲಿದ್ದಾಗ ಮೊದಲ ಬಾರಿ ಅದರ ಮೇಲೆ ನಡೆದಾಗ, ಮಧ್ಯಭಾಗದಲ್ಲಿ ಅದು ಮಾಡಿದ ತೂಗಾಟಕ್ಕೆ ನನ್ನ ಜೀವ ಬಾಯಿಗೆ ಬಂದಿತ್ತು. ಜತೆಗಾರ ಹುಡುಗರು ಕೈ ಹಿಡಿದು ದಾಟಿಸಿದ್ದ ರಿಂದ ಬಚಾವು! ಬೇಸಗೆಯಲ್ಲೂ ಸ್ವಲ್ಪ ನೀರು ಇರುತ್ತಿದ್ದ ಆ ಸಣ್ಣ ಹೊಳೆಯು, ಮಳೆಗಾಲದಲ್ಲಿ ಕೆಂಪನೆಯ ನೀರಿನಿಂದ ತುಂಬಿರುತ್ತಿತ್ತು.
ಆದ್ದರಿಂದ ನಾವು ಮಕ್ಕಳು ಮಳೆಗಾಲದಲ್ಲಿ ಕೊಯ್ಕಾಡಿ ದಾರಿಯಲ್ಲಿ ಹೋಗಿದ್ದೇ ಇಲ್ಲ. ಚಳಿಗಾಲ ಕಳೆದ ನಂತರ ಒಮ್ಮೊಮ್ಮೆ ಈ ದಾರಿಯಲ್ಲಿ ಹೋಗುತ್ತಿದ್ದೆವು. ಏಕೆಂದರೆ, ಶಾಲೆಗೆ ಇದ್ದ ಮೂರು ದಾರಿಗಳ ಪೈಕಿ, ಇದು ಅತಿ ಹತ್ತಿರದ ದಾರಿ. ಕೊಯ್ಕಾಡಿ ಸಂಕ ದಾಟಿದ ನಂತರ, ಬತ್ತದ ಗದ್ದೆಗಳ ನಡುವೆ ಸಾಗುವ ಆ ದಾರಿಯಲ್ಲಿ ಅರ್ಧ ಕಿ.ಮೀ. ನಡೆದರೆ, ಶಾಲೆಗೆ ನೇರ ಎದುರು ಭಾಗದಲ್ಲಿ ಟಾರು ರಸ್ತೆಗೆ ಕೂಡಿಕೊಳ್ಳಬಹುದಿತ್ತು. ಯಾವ ದಾರಿಯಲ್ಲಿ ಸಾಗಿದರೂ, ಮಕ್ಕಳ ಕಾಲಿಗೆ ಕಲ್ಲು ಮುಳ್ಳು ಗಳು ತಾಗುವ ಸಾಧ್ಯತೆ ಇದ್ದೇ ಇತ್ತು!
ಬಹು ಹಿಂದೆ, ಪಡುಹಾಲಾಡಿಯು ಪ್ರಾಮುಖ್ಯವನ್ನು ಪಡೆದಿದ್ದಾಗ, ನಮ್ಮ ಮನೆಯ ಸುತ್ತಮುತ್ತಲಿ ನವರು ಕೊಯ್ಕಾಡಿ ದಾರಿಯಲ್ಲಿ ನಡೆದು, ಆ ತೂಗಾಡುವ ಸಂಕ ದಾಟಿ ಬರುತ್ತಿದ್ದರು. ಹಿಂದೆ ಅಲ್ಲೊಂದು ಮರದ ಸಾರ ಇತ್ತು ಎನಿಸುತ್ತದೆ; ಅದಕ್ಕೆಂದು ಮಾಡಿದ ಕಲ್ಲಿನ ದಿಬ್ಬಗಳು ಆ ಸಣ್ಣ ಹೊಳೆಯ ಎರಡೂ ದಡಗಳಲ್ಲಿ ಇದ್ದವು. ಪಡುಹಾಲಾಡಿಯಲ್ಲಿ ಮಂಗಳವಾರ ಸಂತೆ ನಡೆಯು ತ್ತಿತ್ತು, ಅದಕ್ಕೆ ಸಾಕಷ್ಟು ಜನ ಸೇರುತ್ತಿದ್ದರು.
ಆದರೆ, ಕ್ರಮೇಣ ಒಂದು ಕಿ.ಮೀ. ದೂರದ ಮೂಡುಹಾಲಾಡಿ ಪ್ರವರ್ಧಮಾನಕ್ಕೆ ಬಂದು, ಅಲ್ಲಿ ಸಾಕಷ್ಟು ಅಂಗಡಿಗಳಾದ ನಂತರ, ಪಡುಹಾಲಾಡಿ ಪ್ರಾಮುಖ್ಯವನ್ನು ಕಳೆದುಕೊಂಡಿತು. 1960ರ ಸುಮಾರಿಗೆ, ಅಂದರೆ ಸ್ವಾತಂತ್ರ್ಯ ದೊರಕಿ ಸುಮಾರು 13 ವರ್ಷಗಳ ನಂತರ, ಹಾಲಾಡಿ ಹೊಳೆಗೆ ಹೊಸ ಸೇತುವೆ ನಿರ್ಮಾಣಗೊಂಡ ನಂತರ, ಬಸ್ಸುಗಳು ನೇರವಾಗಿ ಶಿವಮೊಗ್ಗಕ್ಕೆ ಓಡಲು ಆರಂಭಿಸಿ ದವು, ಮೂಡುಹಾಲಾಡಿ ಬೆಳೆಯಿತು. ಆ ಹೊಸ ಸೇತುವೆಯ ಕಾಮಗಾರಿಯಿಂದಾಗಿ, ಪಡುಹಾಲಾಡಿ ಯ ಪ್ರಾಮುಖ್ಯ ಕಡಿಮೆಯಾಯಿತು!
ಶಾಲೆಗೆ ಹೋಗಲು ನಮಗಿದ್ದ ಮೂರು ದಾರಿಗಳ ಪೈಕಿ, ಮನೆ ಎದುರಿನ ಬೈಲಿನಲ್ಲಿ ಸಾಗುವ ದಾರಿಯೇ ಹೆಚ್ಚು ಜನಪ್ರಿಯ. ಆದರೆ, ಮಳೆಬಂದಾಗ ಅಲ್ಲಿ ಹೋಗುವವರು ತುಸು ಜಾಗ್ರತೆ ವಹಿಸಬೇಕು. ಮಳೆಗಾಲದಲ್ಲಿ ನೆರೆ ಸುರಿದಾಗ, ಆ ಬೈಲಿನ ಪೂರ್ವ ದಿಕ್ಕಿನುದ್ದಕ್ಕೂ ಸಾಗಿದ್ದ ತೋಡಿನಲ್ಲಿ ಕೆಂಪನೆಯ ನೀರು ಉಕ್ಕಿಬಂದು, ಬೈಲು ಮತ್ತು ತೋಡು ಒಂದಾಗುತ್ತಿದ್ದವು.
ನಡೆಯುವ ಗದ್ದೆಯ ಅಂಚು ಕಾಣಿಸದಂತೆ, ಅದರ ಮೇಲೆ ಒಂದಡಿ ಕೆಂಪನೆಯ ನೀರು! ಪ್ರತಿದಿನ ಅಲ್ಲಿ ನಡೆದ ಅಂದಾಜಿನ ಮೇಲೆ, ನೀರಿನಲ್ಲಿ ಮುಳುಗಿದ ಆ ಗದ್ದೆಯಂಚಿನ ಮೇಲೆ ನಡೆಯುವ ಅನುಭವ ರೋಚಕ. ಈ ರೀತಿ ನೀರಿನಲ್ಲಿ ಮುಳುಗಿದ್ದ, ಅಗಲಕಿರಿದಾದ ದಾರಿಯ ಮೇಲೆ ನಡೆಯ ಬೇಕಾಗಿದ್ದುದು ಕೇವಲ ನೂರಿನ್ನೂರು ಮೀಟರ್ ಮಾತ್ರ. ನೆರೆ ಬಂದು, ಆ ದಾರಿ ಅರ್ಧ ಅಡಿ ಕೆಂಬಣ್ಣದ ನೀರಿನಲ್ಲಿ ಮುಳುಗಿದ್ದ ಸಮಯದಲ್ಲಿ, ನಾವು ಮಕ್ಕಳು ಕೈ ಕೈ ಹಿಡಿದು ಹೋಗುತ್ತಿದ್ದುದು ಸಾಮಾನ್ಯ. ಇಂಥ ಮೂರು ದಾರಿಗಳ ಆಯ್ಕೆಯಿದ್ದ ಹಾಲಾಡಿ ಶಾಲೆಯಲ್ಲಿ ನಾನು ಮೂರು ವರ್ಷ ಓದಿದೆ.
ನಾರಾಯಣ ಪೈ ಎಂಬ ಮಹನೀಯರು ಮುಖ್ಯೋಪಾಧ್ಯಾಯರಾಗಿದ್ದ ಸಮಯದಲ್ಲಿ, ಏಳನೆಯ ತರಗತಿ ಪಾಸು ಮಾಡಿದೆ. ಈಗ ಆ ಶಾಲೆಯನ್ನು ಅಭಿವೃದ್ಧಿಪಡಿಸಬೇಕೆಂದು ಹಳೆವಿದ್ಯಾರ್ಥಿಗಳು ಒಟ್ಟಾಗಿದ್ದಾರೆ, ಟೊಂಕಕಟ್ಟಿದ್ದಾರೆ. ನೂರಾರು ಸರಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಕಳೆದು ಕೊಂಡು, ಬೇರೆಲ್ಲೋ ವಿಲೀನವಾಗಬೇಕಾಗಿರುವ ಇಂದಿನ ಇಕ್ಕಟ್ಟಿನ ದಿನಗಳಲ್ಲಿ, ನಮ್ಮ ಸರಕಾರಿ ಶಾಲೆ ಅಭಿವೃದ್ಧಿಯಾಗಹೊರಟಿರುವುದು ಸಂತಸದ ಸಂಗತಿಯೇ ಸರಿ!