Roopa Gururaj Column: ಕೋಳೂರಿನ ಚೆನ್ನಮ್ಮನ ಶಿವಭಕ್ತಿ
ಆತಂಕದಿಂದ ಶಿವನನ್ನು ಮತ್ತೆ ಮತ್ತೆ ಬೇಡಿಕೊಳ್ಳತೊಡಗಿದಳು. ಬಹುಶಃ ತಾನು ಎದುರಿಗಿರುವು ದರಿಂದ ಶಿವ ಹಾಲನ್ನು ಕುಡಿಯಲಾರನೆಂದು ಮರೆಗೆ ಹೋಗಿ ನಿಂತಳು. ಪುನಃ ಬಂದು ನೋಡಿದಳು; ಪ್ರಾರ್ಥಿಸಿ ದಳು. ಎಲ್ಲವೂ ವ್ಯರ್ಥವಾದಾಗ ಅವಳ ಸಂಕಟ ಮಿತಿಮೀರಿತು. ತನ್ನ ಭಕ್ತಿಯಲ್ಲೇನೋ ಕುಂದಿರ ಬೇಕೆಂದು ಅನಿಸಿತು.


ಒಂದೊಳ್ಳೆ ಮಾತು
rgururaj628@gmail.com
ಕೋಳೂರಿನಲ್ಲಿ ಶಿವದೇವನೆಂಬ ಭಕ್ತನಿದ್ದ. ಈ ಗ್ರಾಮ ಹಾವೇರಿ ಜಿಲ್ಲೆಯಲ್ಲಿದೆ. ಶಿವದೇವ ಮತ್ತು ಆತನ ಹೆಂಡತಿ ಉತ್ಕಟ ಶಿವಭಕ್ತರಾಗಿದ್ದರು. ಆ ಊರಿನ ಕಲ್ಲೇಶ್ವರಲಿಂಗ ಇವರ ಆರಾಧ್ಯ ದೈವ ವಾಗಿತ್ತು. ಪ್ರತಿನಿತ್ಯವೂ ಅತ್ಯಂತ ಭಕ್ತಿಯಿಂದ ಅದನ್ನು ಪೂಜಿಸಿ ಕಪಿಲವರ್ಣದ ಗೋವಿನ ಹಾಲನ್ನು ನೈವೇದ್ಯ ಮಾಡುವ ನೇಮವನ್ನು ಇವರು ಇಟ್ಟುಕೊಂಡಿದ್ದರು.
ಈ ದಂಪತಿಗಳಿಗೆ ಒಬ್ಬಳೇ ಮಗಳು. ಹೆಸರು ಚೆನ್ನಕ್ಕ. ಭಕ್ತಿಯ ವಾತಾವರಣದಲ್ಲಿಯೇ ಬೆಳೆದ ಈಕೆಯಲ್ಲಿ ಭಕ್ತಿ ಸಹಜವಾಗಿಯೇ ಹೆಚ್ಚಾಗಿತ್ತು. ಏಳು ವರ್ಷಗಳೂ ತುಂಬದ ಈ ಕೂಸು ಅವರ ಸಂಸಾರದ ಸರ್ವಸ್ವವಾಗಿತ್ತು. ಒಮ್ಮೆ ಚೆನ್ನಕ್ಕನ ತಂದೆತಾಯಿಗಳು ಕಾರ್ಯನಿಮಿತ್ತರಾಗಿ ಪರವೂರಿಗೆ ಹೋಗಬೇಕಾಗಿ ಬಂತು.
ಆಗ ಅವರು ಕಲ್ಲೇಶ್ವರನ ಪೂಜೆ ಮತ್ತು ನೈವೇದ್ಯದ ಹೊಣೆಯನ್ನು ಚೆನ್ನಕ್ಕನಿಗೆ ವಹಿಸಿದರಲ್ಲದೆ ಪೂಜೆಯ ಅನಂತರ ಹಾಲನ್ನು ಶಿವನಿಗೆ ತಪ್ಪದೆ ಅರ್ಪಿಸುವಂತೆ ಹೇಳಿಹೋದರು. ಈ ಸುಯೋಗ ಲಭಿಸಿದುದಕ್ಕಾಗಿ ಚೆನ್ನಕ್ಕ ಸಂತೋಷದಿಂದ ಹಿಗ್ಗಿದಳು.
ಇದನ್ನೂ ಓದಿ: Roopa Gururaj Column: ಭಕ್ತಿ ಒಂದಿದ್ದರೆ ಭಗವಂತ ಕೈ ಬಿಡುವುದಿಲ್ಲ
ಸ್ನಾನ ಮಾಡಿ, ಮಡಿಯುಟ್ಟು, ದೇವಾಲಯಕ್ಕೆ ಬಂದಳು. ಶಿವಲಿಂಗವನ್ನು ಭಕ್ತಿಯ ತನ್ಮಯತೆ ಯಿಂದ ಪೂಜಿಸಿದಳು. ಅನಂತರ ಬಳ್ಳದಲ್ಲಿ ತಾನು ತಂದಿದ್ದ ಹಾಲನ್ನು ಶಿವನ ಮುಂದಿಟ್ಟು ಅದನ್ನು ಕುಡಿಯುವಂತೆ ಪ್ರಾರ್ಥಿಸಿದಳು. ಆದರೆ ಇವಳ ಪ್ರಾರ್ಥನೆ ವ್ಯರ್ಥವಾಯಿತು. ಶಿವ ಬಂದು ಹಾಲನ್ನು ಕುಡಿಯಲಿಲ್ಲ. ಭಕ್ತೆಯ ಮುಗ್ಧಸಂಭ್ರಮ ಮರೆಯಾಯಿತು.
ಆತಂಕದಿಂದ ಶಿವನನ್ನು ಮತ್ತೆ ಮತ್ತೆ ಬೇಡಿಕೊಳ್ಳತೊಡಗಿದಳು. ಬಹುಶಃ ತಾನು ಎದುರಿಗಿರುವು ದರಿಂದ ಶಿವ ಹಾಲನ್ನು ಕುಡಿಯಲಾರನೆಂದು ಮರೆಗೆ ಹೋಗಿ ನಿಂತಳು. ಪುನಃ ಬಂದು ನೋಡಿ ದಳು; ಪ್ರಾರ್ಥಿಸಿದಳು. ಎಲ್ಲವೂ ವ್ಯರ್ಥವಾದಾಗ ಅವಳ ಸಂಕಟ ಮಿತಿಮೀರಿತು. ತನ್ನ ಭಕ್ತಿಯಲ್ಲೇನೋ ಕುಂದಿರಬೇಕೆಂದು ಅನಿಸಿತು.
ಕ್ಷಮಿಸಿ ಹಾಲನ್ನು ಕುಡಿಯಬೇಕೆಂದು ಶಿವನನ್ನು ಪ್ರಾರ್ಥಿಸಿದಳು. ಆದರೆ ಎಲ್ಲವೂ ವಿ-ಲವಾದಾಗ ಆ ನಿರಾಶೆಯನ್ನು ತಾಳಲಾರದೆ ಅಲ್ಲಿದ್ದ ಕಲ್ಲಿಗೆ ತನ್ನ ತಲೆಯನ್ನು ಹೊಡೆದುಕೊಳ್ಳುತ್ತ ತನ್ನನ್ನೇ ಅರ್ಪಿಸಿಕೊಳ್ಳಲು ಸಿದ್ಧಳಾದಳು. ಶಿವ ಗತ್ಯಂತರವಿಲ್ಲದೆ ಕೂಡಲೇ ಪ್ರತ್ಯಕ್ಷನಾಗಿ ನೈವೇದ್ಯದ ಹಾಲನ್ನು ಕುಡಿದು ಅವಳನ್ನು ಸಂತೈಸಿದ. ಅಂದಿನಿಂದ ದಿನದಿನವೂ ಇವಳ ಪೂಜೆಯ ಕ್ರಮ ಅದೇ ರೀತಿಯಲ್ಲಿ ಮುಂದುವರಿಯಿತು. ನಿತ್ಯವೂ ಶಿವ ಬಂದು ಹಾಲನ್ನು ಕುಡಿಯುತ್ತಿದ್ದ. ಅನಂತರ ಬರಿಯ ಬಟ್ಟಲನ್ನು ಚೆನ್ನಕ್ಕ ಮನೆಗೆ ತರುತ್ತಿದ್ದಳು.
ಹೀಗೆ ಕೆಲವು ದಿನಗಳು ಕಳೆದಮೇಲೆ ಚೆನ್ನಕ್ಕನ ತಂದೆತಾಯಿಗಳು ಊರಿಗೆ ಹಿಂದಿರುಗಿದರು. ದೇವಾಲಯಕ್ಕೆ ಹೋಗಿ ಬರುತ್ತಿದ್ದ ಮಗಳನ್ನು ಎದುರಿನಲ್ಲಿಯೇ ಸಂಧಿಸಿದರು. ಆಕೆಯ ಕೈಯಲ್ಲಿದ್ದ ಹಾಲಿನ ಪಾತ್ರೆ ಬರಿದಾಗಿದ್ದುದನ್ನು ಗಮನಿಸಿ ಅಚ್ಚರಿಗೊಂಡರು. ಶಿವ ನಿಜವಾಗಿ ಹಾಲು ಕುಡಿಯುವನೇ ಎಂಬುದನ್ನು ಪರೀಕ್ಷಿಸಿ ನೋಡುವ ಮನಸ್ಸಾಯಿತು ಅವರಿಗೆ.
ಮರುದಿನ ಪೂಜೆಯ ಸಮಯ ಬಂತು. ಚೆನ್ನಕ್ಕ ಎಂದಿನಂತೆ ಪೂಜೆ ಮಾಡಿ ಹಾಲನ್ನು ಮುಂದಿಟ್ಟಾಗ ಶಿವ ಅದನ್ನು ಕುಡಿಯಲಿಲ್ಲ. ಮಗಳು ಸುಳ್ಳು ಹೇಳಿದಳು ತಂದೆಗೆ ಕೋಪ ಬಂತು. ಅವಳನ್ನು ದಂಡಿಸುವುದಕ್ಕಾಗಿ ಮುಂದೆ ಬಂದ. ಮುಗ್ಧೆ ಚೆನ್ನಕ್ಕ ಏನೂ ಮಾಡಲಾರದೆ ಶಿವನೇ ಗತಿಯೆಂದು ಓಡಿಹೋಗಿ ಲಿಂಗ ವನ್ನು ತಬ್ಬಿಕೊಂಡಳು. ಶಿವ ಪ್ರತ್ಯಕ್ಷನಾಗಿ ಅವಳನ್ನು ತನ್ನಲ್ಲಿ ಅಡಗಿಸಿಕೊಂಡ.
ಇದನ್ನು ಕಂಡ ತಂದೆಗೆ ಪಶ್ಚಾತ್ತಾಪವಾಯಿತು. ಮಗಳನ್ನು ಕಳೆದುಕೊಳ್ಳಲಾರದೆ ಓಡಿಬಂದು ಶಿವನಲ್ಲಿ ಐಕ್ಯವಾಗುತ್ತಿದ್ದ ಆಕೆಯ ತಲೆಗೂದಲನ್ನು ಹಿಡೆದೆಳೆದ. ಆಗ ಕೂದಲು ಮಾತ್ರ ಹೊರ ಗುಳಿದು ಆಕೆ ಲಿಂಗದಲ್ಲಿ ಐಕ್ಯವಾದಳು. ಕೋಳೂರಿನಲ್ಲಿರುವ ಕಲ್ಲಿನಾಥನ ಲಿಂಗದಲ್ಲಿ ಈಗಲೂ ಕೂದಲ ಗುರುತುಗಳಿವೆ ಎನ್ನುತ್ತಾರೆ. ಅಂದಿನಿಂದ ಭಕ್ತೆ ಚೆನ್ನಕ್ಕ ಕೋಳೂರು ಕೊಡಗೂಸು (ಕೊಡದ ಕೂಸು-ಕನ್ಯೆ) ಎಂದೇ ಪ್ರಸಿದ್ಧಳಾದಳು.
ಮಕ್ಕಳಲ್ಲಿ ನಾವು ಯಾವ ಗುಣಗಳನ್ನು ಬಿತ್ತುತ್ತೇವೋ ಅದನ್ನು ಅವರು ನಿಷ್ಕಲ್ಮಶ ಮನಸ್ಸಿನಿಂದ ಆಚರಿಸುತ್ತಾರೆ. ಅವರ ಮನಸ್ಸು ಹಸಿ ಮಣ್ಣಿನಂತೆ. ನಾವು ಒಳ್ಳೆಯದನ್ನು ಬಿತ್ತಿದರೆ ಅವರು ಒಳ್ಳೆಯದನ್ನೇ ಕಲಿಯುತ್ತಾರೆ. ಆದ್ದರಿಂದಲೇ ಮಕ್ಕಳ ಒಡನಾಟದಲ್ಲಿರುವ ತಂದೆ ತಾಯಿಗಳು ಬರೀ ತಮ್ಮ ಮಾತಿನ ಕಡೆಯಲ್ಲ ತಮ್ಮ ಕೃತಿಯ ಕಡೆ ಕೂಡ ಗಮನ ಕೊಡಬೇಕು. ಮಕ್ಕಳು ನಾವು ಹೇಳಿದ್ದಕ್ಕಿಂತ ನಾವು ಮಾಡಿದ್ದನ್ನು ನೋಡಿ ಕಲಿಯುವುದೇ ಹೆಚ್ಚು. ಮಕ್ಕಳನ್ನು ಬೆಳೆಸುವುದು ಮಕ್ಕಳಾಟವಲ್ಲ.