ಒಂದೊಳ್ಳೆ ಮಾತು
ವನವಾಸಕ್ಕೆ ಹೊರಟ ರಾಮ- ಸೀತೆ ಮತ್ತು ಲಕ್ಷ್ಮಣರು, ಪುಣ್ಯಕ್ಷೇತ್ರಗಳನ್ನೆಲ್ಲಾ ದರ್ಶನ ಮಾಡುತ್ತಾ, ಪವಿತ್ರವಾದ ಗಯಾ ಕ್ಷೇತ್ರಕ್ಕೆ ಬರುತ್ತಾರೆ. ಅಷ್ಟು ಹೊತ್ತಿಗೆ ತಂದೆ ರಾಜಾ ದಶರಥನ ನಿಧನದ ವಾರ್ತೆ ಅವರಿಗೆ ತಲುಪಿರುತ್ತದೆ. ರಾಮ-ಲಕ್ಷ್ಮಣರು ತಂದೆಯಾದ ದಶರಥನಿಗೆ ಪಿಂಡ ಪ್ರದಾನ ಮಾಡುವ ಸಲುವಾಗಿ ಸೀತಾಮಾತೆಯನ್ನು ಗಯಾ ಕ್ಷೇತ್ರದ ಫಲ್ಗುಣಿ ನದಿ ದಡದಲ್ಲಿ ಕುಳಿತಿರಲು ಹೇಳಿ, ಅವರಿಬ್ಬರೂ ಹಣ್ಣುಹಂಪಲುಗಳನ್ನು ತರಲು ಕಾಡಿಗೆ ಹೋಗುತ್ತಾರೆ.
ಸೀತಾಮಾತೆ ಅವರಿಬ್ಬರ ಬರುವನ್ನೇ ಕಾಯುತ್ತಾ ಕುಳಿತಿರುವಾಗ, ಇದ್ದಕ್ಕಿದ್ದಂತೆ ನದಿಯೊಳಗಿಂದ ಕೈಯೊಂದು ಹೊರಗೆ ಬಂದು ಸೀತಾಮಾತೆಯ ಮುಂದೆ ಚಾಚುತ್ತದೆ. ಇದನ್ನು ನೋಡಿ ಹೆದರಿದ ಸೀತೆ ಅಲ್ಲಿದ್ದ ಬಂಡೆಯ ಹಿಂದೆ ನಿಂತು ಚಾಚಿದ ಕೈಯನ್ನೇ ನೋಡುತ್ತಿದ್ದಳು. ಎಲ್ಲಿಂದಲೋ ಒಂದು ಅಶರೀರವಾಣಿ ಕೇಳುತ್ತದೆ.
‘ಸೀತಾ, ನನಗೆ ಹಸಿವಾಗುತ್ತದೆ’ ಎಂದು ಹೇಳಿದಂತಾಯಿತು. ಎರಡು-ಮೂರು ಸಲ ಅದೇ ರೀತಿ ಕೂಗಿದಾಗ ಆ ಧ್ವನಿ ದಶರಥ ಮಹಾರಾಜನದ್ದು ಎಂದು ಅವಳಿಗೆ ತಿಳಿಯುತ್ತದೆ. ಸೀತೆಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಏನಾದರೂ ಮಾಡಲು ಅಲ್ಲಿ ಪದಾರ್ಥಗಳೂ ಇರಲಿಲ್ಲ. ಇದುವರೆಗೂ ಕೇಳಿದವರಿಗೆಲ್ಲ ಯಥೇಚ್ಛವಾಗಿ ಕೊಟ್ಟವಳು ಸೀತಾಮಾತೆ.
ಇದನ್ನೂ ಓದಿ: Roopa Gururaj Column: ಮನಸ್ಸು ಒಮ್ಮೆ ನಿರ್ಧಾರ ಮಾಡಿದರೆ ದೇಹ ಬಾಗಲೇಬೇಕು
ಈಗ ಹಸಿದವರಿಗೆ ಆಹಾರ ಇಲ್ಲ ಎನ್ನುವುದು ಮಹಾಪಾಪ. ಹೀಗಿರುವಾಗ ಏನು ಮಾಡಲಿ ಎಂದು ಚಡಪಡಿಸುತ್ತಿದ್ದಳು. ಹಸಿವು ಎಂದು ಆಹಾರ ಕೇಳುತ್ತಿರುವುದು ಅಯೋಧ್ಯೆಯ ಮಹಾರಾಜ, ಶ್ರೀರಾಮನ ತಂದೆ, ತನ್ನ ಮಾವ. ಯೋಚಿಸಿ ಕೊನೆಗೆ ದಾರಿ ಕಾಣದೆ ನದಿ ದಡದಲ್ಲಿದ್ದ ಮಣ್ಣನ್ನೇ ತೆಗೆದು ಮೂರು ಉಂಡೆ ಮಾಡಿ, ಅದರೊಳಗೆ ಅನ್ನವನ್ನು ಆವಾಹನೆ ಮಾಡಿ ಚಾಚಿದ ಕೈಗಳ ಮೇಲೆ ಇರಿಸುತ್ತಾಳೆ.
ಆ ರೀತಿ ಮಾಡಿದ ಕೆಲಸಕ್ಕೆ ಅಲ್ಲಿಯೇ ಇದ್ದ ಪಲ್ಗುಣಿ ನದಿ, ಒಬ್ಬ ಬ್ರಾಹ್ಮಣ, ತುಳಸಿ ಗಿಡ, ಗೋಮಾತೆ ಮತ್ತು ಅರಳೀಮರ ಅದಕ್ಕೆ ಸಾಕ್ಷಿಯಾಗುತ್ತಾರೆ. ದಶರಥನು ಅದರಿಂದ ಸಂತೃಪ್ತನಾಗಿ ಆಶೀರ್ವದಿಸಿ ಮಾಯವಾಗುತ್ತಾನೆ. ಸ್ವಲ್ಪ ಸಮಯದಲ್ಲಿ ರಾಮ ಮತ್ತು ಲಕ್ಷ್ಮಣ ಹಣ್ಣು ಹಂಪಲುಗಳನ್ನು ಸಂಗ್ರಹಿಸಿಕೊಂಡು ತರುತ್ತಾರೆ. ಅಲ್ಲಿಯ ತನಕ ನಡೆದದ್ದನ್ನೆಲ್ಲಾ ಸೀತೆಯು ಅವರಿಗೆ ಹೇಳುತ್ತಾಳೆ. ಆದರೆ ರಾಮ-ಲಕ್ಷ್ಮಣರು ಅದನ್ನು ನಂಬುವುದಿಲ್ಲ. ಅದನ್ನು ಗ್ರಹಿಸಿದ ಸೀತೆಯು ಸಾಕ್ಷಿಯಾಗಿದ್ದ ಆ ಐವರನ್ನೂ ಸಾಕ್ಷಿ ಹೇಳಲು ಕೇಳಿಕೊಳ್ಳುತ್ತಾಳೆ. ಆಶ್ಚರ್ಯವೆನಿಸುವಂತೆ ಅದರಲ್ಲಿ ಫಲ್ಗುಣಿ ನದಿ, ಹಸು, ಬ್ರಾಹ್ಮಣ, ತುಳಸಿಗಿಡ ಯಾರೂ ಒಂದು ಅಕ್ಷರವನ್ನೂ ಮಾತನಾಡುವುದಿಲ್ಲ. ಅರಳಿಮರ ಮಾತ್ರ ಎಲ್ಲವನ್ನೂ ಬಿಡದಂತೆ ಚೆನ್ನಾಗಿ ವಿವರಿಸಿ ರಾಮನಿಗೆ ನಡೆದ ವಿಷಯ ಹೇಳಿತು.
ರಾಮಲಕ್ಷ್ಮಣರು ಅದನ್ನು ಕೇಳಿ ಸೀತೆಯ ಸಮಯಪ್ರಜ್ಞೆಯನ್ನು ಮೆಚ್ಚಿ ಹೊಗಳಿದರು. ಆಗ ಸಾಕ್ಷಿ ಹೇಳಲು ಹಿಂಜರಿದಂಥ ಪಲ್ಗುಣಿ ನದಿ, ಬ್ರಾಹ್ಮಣ, ಹಸು ಮತ್ತು ತುಳಸಿಗಿಡದ ಮೇಲೆ ಸೀತಾಮಾತೆಗೆ ಸಿಟ್ಟು ಬಂದು ಅವುಗಳಿಗೆ ಶಾಪ ಕೊಡುತ್ತಾಳೆ. ಫಲ್ಗುಣಿ ನದಿಗೆ ಮಳೆಗಾಲದಲ್ಲಿಯೂ ನೀರಿಲ್ಲದೆ ಬರಿದಾಗಿರು ಎಂದು ಶಪಿಸುತ್ತಾಳೆ.
ಎರಡನೆಯದಾಗಿ ಬ್ರಾಹ್ಮಣನಿಗೆ ‘ಹೇ ವಿಪ್ರೋತ್ತಮರೆ, ನೀವು ನಡೆದ ಸತ್ಯವನ್ನು ಹೇಳದೆ ನನಗೆ ಮೋಸ ಮಾಡಿದಿರಿ, ಇದಕ್ಕಾಗಿ ನೀವು ಈ ಕ್ಷೇತ್ರದಲ್ಲಿಯೇ ಇದ್ದು, ಇಲ್ಲಿಗೆ ಬರುವ ಯಾತ್ರಾರ್ಥಿ ಗಳನ್ನು ಕೇಳಿ, ಅವರು ಕೊಡುವ ದಾನದ ಆದಾಯದಿಂದ ಜೀವನ ನಡೆಸುವಂತಾಗಲಿ’ ಎಂದು ಶಾಪ ಕೊಡುತ್ತಾಳೆ. ಮೂರನೆಯದಾಗಿ ಹಸುವಿಗೆ, ‘ನೋಡು ಗೋಮಾತೆ, ಸತ್ಯವಂತೆಯಾದ ನೀನೂ ನನ್ನ ಪರವಾಗಿ ಸಾಕ್ಷಿ ಹೇಳಲು ಹಿಂಜರಿದೆ, ಆದ್ದರಿಂದ ನೀನೂ ಸಹ ಈ ಕ್ಷೇತ್ರದಲ್ಲಿಯೇ ಇದ್ದು, ಯಾತ್ರಾರ್ಥಿಗಳು ಬಂದು ಪಿತೃಕಾರ್ಯಕ್ಕಾಗಿ ಇಡುವ ಪಿಂಡಗಳನ್ನೇ ನೀನು ಆಹಾರವಾಗಿ ತಿನ್ನಬೇಕು, ಅದರಿಂದ ಎಂದಿಗೂ ನಿನ್ನ ಹೊಟ್ಟೆ ತುಂಬದಿರಲಿ’ ಎಂದು ಶಪಿಸುತ್ತಾಳೆ.
ಇನ್ನು ನಾಲ್ಕನೆಯದಾಗಿ ತುಳಸಿಗಿಡಕ್ಕೆ, ‘ಎಷ್ಟೊಂದು ಪವಿತ್ರಳಾದವಳು, ಪುಣ್ಯವಂತೆ, ಎಂದು ಕೊಂಡಿದ್ದೆ. ಆದರೆ ನೀನು ಸಹ ನಿಜವನ್ನು ಹೇಳಲಿಲ್ಲ. ಆದ್ದರಿಂದ ನೀನು ಎಲ್ಲೆಂದರಲ್ಲಿ ಹುಟ್ಟಿ ಬೆಳೆಯುವಂತಹ ಗಿಡವಾಗು’ ಎಂದು ಶಾಪ ಕೊಟ್ಟಳು. ಸೀತೆಯು ಕೊಟ್ಟ ಶಾಪದಂತೆ ಗಯಾ ಕ್ಷೇತ್ರದಲ್ಲಿರುವ ಫಲ್ಗುಣಿ ನದಿ ಬತ್ತಿದೆ. ನದಿ ತೀರದಲ್ಲಿ ಇರುವ ಹಸುಗಳಿಗೆ ಅವರಿವರು ಇಡುವ ಪಿಂಡದ ಅನ್ನವೇ ಆಹಾರವಾಗಿದೆ.
ಉಳಿದಂತೆ ಬ್ರಾಹ್ಮಣನಿಗೆ ಯಾತ್ರಾರ್ಥಿಗಳು ಕೊಡುವ ಪುಡಿಗಾಸುಗಳೇ ಬದುಕಿಗೆ ಆದಾಯವಾಗಿದೆ. ಕೊನೆಯದಾಗಿ ತನ್ನ ಪರವಾಗಿ ರಾಮ-ಲಕ್ಷ್ಮಣರಿಗೆ ಸತ್ಯವನ್ನೇ ಹೇಳಿದ ಅರಳಿಮರದ ಕಾರ್ಯವನ್ನು ಮೆಚ್ಚಿ ವರ ಕೊಡುತ್ತಾಳೆ. ‘ಅರಳಿ ಮರವೇ, ಇಂದಿನಿಂದ ನೀನು ಎಂದೆಂದೂ ಬಾಡದಂತೆ ಹಚ್ಚ ಹಸಿರಾಗಿರು, ಭೂಲೋಕದಲ್ಲಿ ದೇವ ವೃಕ್ಷವಾಗಿ ಎಲ್ಲರಿಂದ ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡು’ ಎಂದು ಹರಸಿದಳು.
ಕೆಲವೊಮ್ಮೆ ಸತ್ಯದ ಪರ ನಿಲ್ಲಲು ನಮಗೆ ಧೈರ್ಯವೇ ಸಾಲದಾಗುತ್ತದೆ.. ಇದರಿಂದ ಮತ್ತೇನೋ ಅವಘಡವಾಗುತ್ತದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತದೆ. ಆದರೆ ಒಬ್ಬರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಸತ್ಯ ನುಡಿಯುವುದರಲ್ಲಿ ಅವರನ್ನು ಕೆಟ್ಟವರಿಂದ ರಕ್ಷಿಸುವಲ್ಲಿ ನಾವು ಧೈರ್ಯ ತಂದುಕೊಳ್ಳಬೇಕು, ಸತ್ಯವಂತರೊಡನೆ ಭಗವಂತನೂ ಇರುತ್ತಾನೆ.