ಈರಣ್ಣಾ ಎಚ್. ಹುಲ್ಲೂರ ಯರಗಟ್ಟಿ
ಈಗಲೂ ಸವದತ್ತಿ ತಾಲೂಕು ಕಚೇರಿಗೆ ಜನರ ಅಲೆದಾಟ
ಸಿಬ್ಬಂದಿ ನೇಮಕಾತಿ ಆಗದೆ ಕಚೇರಿಗಳು ಆರಂಭಗೊಂಡಿಲ್ಲ
ನೂತನ ಯರಗಟ್ಟಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷಗಳ ಕಳೆದರೂ ಬಾರದ ಸರಕಾರಿ ಕಚೇರಿ ಗಳು ಸಾರ್ವಜನಿಕರಿಗೆ ತಪ್ಪದ ಕಿರಿಕಿರಿ. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಪ್ರತಿಯೊಬ್ಬ ರಿಗೂ ಸರಕಾರಿ ಸೌಲಭ್ಯ ಮುಟ್ಟಿಸುವುದು, ಜನರಿಗೆ ಎಲ್ಲ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ರಚನೆಗೊಂಡಿರುವ ಯರಗಟ್ಟಿ ತಾಲೂಕು ಕಚೇರಿಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ.
ಎರಡು ದಶಕಗಳ ಹೋರಾಟದ ಫಲವಾಗಿ 2018ರಲ್ಲಿ ಸವದತ್ತಿ ತಾಲೂಕಿನಿಂದ ಪ್ರತ್ಯೇಕಗೊಳಿಸಿ ಯರಗಟ್ಟಿ ಹೊಸ ತಾಲೂಕು ಎಂದು ಸರಕಾರ ಘೋಷಿಸಿತ್ತು. ಆದರೆ, ಇಲ್ಲಿಯವರೆಗೂ ಯರಗಟ್ಟಿ ಪಟ್ಟಣದಲ್ಲಿ ಯಾವುದೇ ಇಲಾಖೆಯ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಈಗಲೂ ಸರಕಾರದ ಎಲ್ಲ ಇಲಾಖೆಗಳ ದಾಖಲೆಗಳಲ್ಲಿ ಸವದತ್ತಿ ತಾಲೂಕು ಎಂದೇ ಉಲ್ಲೇಖವಿದೆ.
ಪರಿಣಾಮ ರೈತರು, ಜನಸಾಮಾನ್ಯರು ದೂರದ ಸವದತ್ತಿ ನಗರದಲ್ಲಿರುವ ತಾಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. 2022ರಲ್ಲೇ ಸರಕಾರ ಯರಗಟ್ಟಿ ಪಟ್ಟಣದಲ್ಲಿ ಶಿಕ್ಷಣ, ನೀರಾವರಿ, ಲೋಕೋ ಪಯೋಗಿ, ಗ್ರಾಮೀಣ ಕುಡಿಯುವ ನೀರು ಸಬರಾಜು ಇಲಾಖೆಗಳನ್ನು ಹೊರತು ಪಡಿಸಿ ಕಂದಾಯ, ಸಮಾಜ ಕಲ್ಯಾಣ, ಪಶುಪಾಲನೆ, ಕೃಷಿ, ತೋಟಗಾರಿಕೆ, ಆರ್ಟಿಒ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ, ಕೆಆಐಡಿಎಲ್, ಮೀನುಗಾರಿಕೆ, ಅಗ್ನಿಶಾಮಕ ಸೇರಿ ಇತರ ಇಲಾಖೆಗಳಿಗೆ ಒಟ್ಟು ೨೫ ತಾಲೂಕು ಮಟ್ಟದ ಕಚೇರಿ ಆರಂಭಿಸುವಂತೆ ನಿರ್ದೇಶನ ನೀಡಲಾಗಿತ್ತು.
ಇದನ್ನೂ ಓದಿ: Cherkady Sachhidanand Shetty Column: ವಾರಸುದಾರರಿಲ್ಲದ ಹಣದ ನಿರ್ವಹಣೆ ಹೇಗೆ ಗೊತ್ತೇ ?
ಸ್ಥಳದ ಅಭಾವ, ಸಿಬ್ಬಂದಿ ನೇಮಕಾತಿ ಆಗದಿರುವುದು ಹಾಗೂ ಅನುದಾನ ಕೊರತೆಯಿಂದಾಗಿ ಇಲ್ಲಿಯವರೆಗೆ ಕಚೇರಿಗಳು ಆರಂಭಗೊಂಡಿಲ್ಲ. ಪಟ್ಟಣದಲ್ಲಿರುವ ತಹಸೀಲ್ದಾರ್ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಭೂಮಿ, ಬೆಳೆಹಾನಿ ತಂತ್ರಾಂಶ ಸೇರಿ ಸರಕಾರದ ವಿವಿಧ ಇಲಾಖೆಗಳ ತಂತ್ರಾಅಶದಲ್ಲಿ ಹೊಸ ತಾಲೂಕುಗಳ ಹೆಸರು ಬರುತ್ತಿಲ್ಲ.
ಹಳೆಯ ತಾಲೂಕಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ ಎಂದು ರೈತರು, ಸಾರ್ವಜನಿಕರು, ವ್ಯಾಪಾರಿಗಳು ದೂರಿದ್ದಾರೆ. ಹಳೇ ಕಟ್ಟಡದಲ್ಲಿ ಕಚೇರಿ ಆರಂಭಕ್ಕೆ ಸಿದ್ಧತೆ ಯರಗಟ್ಟಿಯಲ್ಲಿ ಹೊಸದಾಗಿ ತಾಲೂಕು ಪಂಚಾಯಿತಿ ಕಚೇರಿಗಳನ್ನು ಆರಂಭಿಸಿ, ಸಿಬ್ಬಂದಿ ನಿಯೋಜನೆ ಮಾಡುವಂತೆ 2025 ಜುಲೈನಲ್ಲಿ ಆದೇಶಿಸಲಾಗಿತ್ತು.
ಸ್ಥಳದ ಅಭಾವ, ಸಿಬ್ಬಂದಿ ಹಾಗೂ ಅನುದಾನ ಕೊರತೆಯಿಂದಾಗಿ ಇನ್ನೂವರೆಗೂ ಕಚೇರಿ ಆರಂಭಿ ಸಿಲ್ಲ. ಯರಗಟ್ಟಿ ಎಪಿಎಂಸಿ ಆವರಣದಲ್ಲಿರುವ ಕಟ್ಟಡದಲ್ಲೇ ತಾತ್ಕಾಲಿಕವಾಗಿ ತಾಪಂ ಕಚೇರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದರು ಇದುವರೆಗೂ ಯಾವುದೇ ಕಛೇರಿ ಆರಂಭವಾಗಿಲ್ಲ.
ಕಳೆದ ಸೆಪ್ಟೆಂಬರ್೧೮ ರಂದು ರಾಜ್ಯ ಸರ್ಕಾರ ಯರಗಟ್ಟಿ ಉಪ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಆದೇಶ ಹೊರಡಿಸಿತ್ತು ನವೆಂಬರ್ತಿಂಗಳಲ್ಲಿ ನೂತನ ಪೊಲೀಸ್ ಠಾಣೆಯನ್ನು ಪ್ರಾರಂಭಿಸುವುದಾಗಿ ಹೇಳಿದರು ಅದು ಕೂಡಾ ಯಾವುದೇ ರೀತಿಯ ಕಾಮಗಾರಿ ಪ್ರಾರಂಭವಾಗಿಲ್ಲ.
ಶೀಘ್ರದಲ್ಲಿ ಯರಗಟ್ಟಿಯಲ್ಲಿ ತಾಲೂಕು ಮಟ್ಟದ ಕಚೇರಿ ಆರಂಭಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಎಪಿಎಂಸಿ ಆವರಣದಲ್ಲಿರುವ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತಾಪಂ ಕಚೇರಿ ಆರಂಭಿಸಲು ಸೂಚನೆ ನೀಡಿದ್ದೇನೆ. ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತರಲು ಪ್ರಯತ್ನ ಸುತ್ತಿದ್ದೇನೆ. ಯರಗಟ್ಟಿ ಉಪ ಪೊಲೀಸ್ ಠಾಣೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಸಿದ್ದೆನೆ.
-ವಿಶ್ವಾಸ ವೈದ್ಯ, ಶಾಸಕ ಸವದತ್ತಿ
ನೂತನ ಯರಗಟ್ಟಿ ತಾಲೂಕಿಗೆ ೩೫ ಹಳ್ಳಿಗಳು ೧೨ ಗ್ರಾಮ ಪಂಚಾಯತಿಗಳು, ೨ ಹೋಬಳಿಗಳು ಹಾಗೂ ೧ ಪಟ್ಟಣ ಪಂಚಾಯತಿ ಹೊಂದಿದೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅತಿವೇಗವಾಗಿ ಬೇಳೆಯುತ್ತಿದೆ ಆದರಿಂದ ಶಾಸಕರು ಹಾಗೂ ರಾಜ್ಯ ಸರಕಾರ ಯರಗಟ್ಟಿಯಲ್ಲಿ ತಾಲೂಕು ಮಟ್ಟದ ಕಚೇರಿಗಳನ್ನು ಶೀಘ್ರದಲ್ಲಿ ಆರಂಭಿಸಬೇಕು
-ಅಜೀತಕುಮಾರ ದೇಸಾಯಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಯರಗಟ್ಟಿ
ಪಟ್ಟಣದಲ್ಲಿ ತಾಲೂಕು ಕಚೇರಿ ಆರಂಭಿಸುವಂತೆ ಐದು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ತ್ವರಿತವಾಗಿ ತಾಲೂಕು ಪಂಚಾಯಿತಿ ಕಚೇರಿ ಆರಂಭಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ.
-ರಫೀಕ ಡಿ.ಕೆ., ಕರವೇ ತಾಲೂಕು ಅಧ್ಯಕ್ಷ