ವಿನಾಯಕ ಮಠಪತಿ ಬೆಳಗಾವಿ
ಸರಕಾರಿ ಕಚೇರಿಗಳಲ್ಲಿ ನಡೆಯುವ ಗಣ್ಯರ ದಿನಾಚರಣೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಫೋಟೊ ಪೂಜೆಗೆ ಮಾತ್ರ ಸೀಮಿತ ಆಗಿವೆ. ಆದರೆ ಬೆಳಗಾವಿ ಜಿಲ್ಲಾ ಪಂಚಾಯಿತಿ ವಿನೂತನ ಪ್ರಯತ್ನದ ಮೂಲಕ ಯಶಸ್ವಿ ಆಗಿದೆ. ಬೃಹತ್ ರಕ್ತದಾನ ಶಿಬಿರದ ಮೂಲಕ ಶಿಕ್ಷಕರ ದಿನಾಚರಣೆ ಯನ್ನು ರಾಜ್ಯದಲ್ಲೇ ಮಾದರಿಯಾಗಿ ಆಚರಣೆ ಮಾಡಿದೆ. ಜಿಲ್ಲೆಯ 15 ತಾಲೂಕು ಕೇಂದ್ರಗಳಲ್ಲಿ 22 ಸ್ಥಳಗಳಲ್ಲಿ ರಕ್ತ ಸಂಗ್ರಹಿಸಲಾಗಿದ್ದು, ದಾಖಲೆ ಪ್ರಮಾಣ ದಲ್ಲಿ ರಕ್ತ ಸಂಗ್ರಹ ಆಗಿದೆ. ಶಿಬಿರದಲ್ಲಿ ಜಿಲ್ಲೆಯ ಸರಕಾರಿ ನೌಕರರು ಶಿಕ್ಷರು, ಜನಸಾಮಾನ್ಯರು ಸೇರಿ 5 ಸಾವಿರ ಮಂದಿ ರಕ್ತದಾನ ಮಾಡಿದ್ದಾರೆ.
ಶಿಂಧೆ ಅವರ ಅದ್ಭುತ ಚಿಂತನೆ: ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಅದ್ಭುತ ಚಿಂತನೆ ಫಲವಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲೆಯ ಅಧಿಕಾರಿಗಳು ಹಾಗೂ ಸಾರ್ವ ಜನಿಕರಿಗೆ ರಕ್ತದಾನದ ಕುರಿತು ಜಾಗೃತಿ ಮೂಡಿ ಸುವ ಕೆಲಸ ಮಾಡಲಾಗಿತ್ತು. ಸಪ್ಟೆಂಬರ್ 3 ರಂದು ಬೆಳಗಾವಿ ಜಿಲ್ಲೆಯಾದ್ಯಂತ ನಡೆದ ಬೃಹತ್ ರಕ್ತ ದಾನ ಶಿಬಿರ ಯಶಸ್ವಿಯಾಗಿ ನಡೆದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಬರೆಯುವ ಹಂತದಲ್ಲಿದೆ ಈ ಅಭಿಯಾನ.
ದಾಖಲೆ ರೂಪದಲ್ಲಿ ರಕ್ತ ಸಂಗ್ರಹ: ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ರಕ್ತದಾನ ಮಾಡಲು ಜಿಲ್ಲಾದ್ಯಂತ ಒಟ್ಟು 9123 ಜನ ನೋಂದಣಿ ಮಾಡಿಕೊಂಡಿದ್ದರು. ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ ಎಲ್ಲರ ಸ್ಕ್ರೀನಿಂಗ್ ಮಾಡಿದ್ದು ಅವರಲ್ಲಿ ರಕ್ತಹೀನತೆ, ರಕ್ತದೊತ್ತಡ, ಮದುಮೇಹ, ಥೈರಾಯಿಡ್ ಸಂಬಂಧಿತ ರೋಗಗಳ ಕಾರಣಗಳಿಂದ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ 4489 ಜನರಿಗೆ ರಕ್ತದಾನ ಮಾಡದಂತೆ ಸಲಹೆ ನೀಡಲಾಗಿತ್ತು. ಅವರನ್ನು ಹೊರತುಪಡಿಸಿ ಜಿಲ್ಲಾದ್ಯಂತ ಒಟ್ಟು 4634 ಯುನಿಟ್ ರಕ್ತ ಸಂಗ್ರಹಣೆಯಾಗಿದೆ.
ಇಂಡಿಯಾ ಬುಕ್ ಆಪ್ ರೆಕಾರ್ಡ್?: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿದ್ದು ಒಟ್ಟು 4634 ಯುನಿಟ್ ರಕ್ತ ಸಂಗ್ರಹಣೆಯಾಗಿದ್ದು ರಾಜ್ಯದಲ್ಲೇ ದಾಖಲೆಯಾಗಿದೆ. ಇದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾಹಿತಿ ನೀಡಿದರು.
ಸಿಇಒ ಶಿಂಧೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ತಮ್ಮ ವಿಭಿನ್ನ ಆಲೋಚನೆ ಮೂಲಕ ಆಡಳಿತಾತ್ಮಕವಾಗಿ ಜನಮನ್ನಣೆ ಗಳಿಸಿರುವ ಬೆಳಗಾವಿ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಶಿಕ್ಷಕರ ದಿನಾಚರಣೆ ಯನ್ನು ವಿಭಿನ್ನವಾಗಿ ಆಚರಿಸಬಹುದು ಎಂಬ ಪರಿಕಲ್ಪನೆಯನ್ನು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಪ್ರತಿದಿನ ರಕ್ತದ ಅಭಾವದಿಂದ ರೋಗಿಗಳು ಸಾವಿಗೀಡಾಗುವ ಪರಿಸ್ಥಿತಿ ಇದ್ದು ಈ ಸಂದರ್ಭದಲ್ಲಿ ಜಿಲ್ಲೆಯ ಜನರನ್ನು ಹಾಗೂ ಅಧಿಕಾರಿ ವರ್ಗದವರನ್ನು ರಕ್ತದಾನ ಮಾಡುವಂತೆ ಜಾಗೃತಗೊಳಿಸಿರುವ ಸಿಇಒ ಕಾರ್ಯವನ್ನು ಜನ ಶ್ಲಾಘಿಸಿದ್ದಾರೆ.
![]()
ಜಿಲ್ಲೆಯಲ್ಲಿ ರೋಗಿಗಳಿಗೆ ಪ್ರತಿ ತಿಂಗಳಿಗೆ 4 ಸಾವಿರ ಯೂನಿಟ್ ರಕ್ತ ಬೇಕು. ಅದರಲ್ಲೂ ಕ್ಯಾನ್ಸರ್ ರೋಗಿ ಗಳಿಗೇ 2 ಸಾವಿರ ಯೂನಿಟ್ ರಕ್ತದ ಅಗತ್ಯ ಇದೆ. ರಕ್ತ ಸಿಗದೇ ಇರುವವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದ್ದೇವೆ. ಸಂಗ್ರಹವಾಗುವ ರಕ್ತ ವನ್ನು ಜಿಲ್ಲೆಯ ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸಿಟ್ಟು, ಅವಶ್ಯಕತೆ ಇರುವವರಿಗೆ ಉಚಿತವಾಗಿ ವಿತರಿಸಲಾಗುತ್ತದೆ.
ರಾಹುಲ್ ಶಿಂಧೆ, ಬೆಳಗಾವಿ ಜಿಪಂ ಸಿಇಒ