ಮಂಜು ಕಲಾಲ ವಿಜಯಪುರ
ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆ
ಬೆಳೆಗಾರಿಗೆ ತುಂಬಲಿದೆ ಜಿಐ ಟ್ಯಾಗ್ ಆನೆಬಲ
ಜಿಲ್ಲೆಯ ಇಂಡಿ ಭಾಗದಲ್ಲಿ ಬೆಳೆಯುವ ಲಿಂಬೆಗೆ ಜಿಐ ಟ್ಯಾಗ್ ದೊರಕಿದೆ. ಇನ್ನೂ ಅನೇಕ ದೇಶಗಳಿಗೆ ರಫ್ತಾಗುವ ಒಣದ್ರಾಕ್ಷಿಗೂ ಜಿಐ ಟ್ಯಾಗ್ ದೊರಕುವ ದಿನಗಳು ದೂರವಿಲ್ಲ. ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾದ ಒಣದ್ರಾಕ್ಷಿಗೆ ಜಿಐ ಟ್ಯಾಗ್ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಶರವೇಗದಿಂದ ನಡೆಯುತ್ತಿದ್ದು, ಜಿಐ ಟ್ಯಾಗ್ ದೊರಕಿದರೆ ರೈತರ ಸಂತಸ ಮತ್ತಷ್ಟು ಹೆಚ್ಚಾಗಲಿದೆ.
ಅನೇಕ ಉಪ ಉತ್ಪನ್ನಗಳಿಗೆ ಒಣದ್ರಾಕ್ಷಿ ಅದರಲ್ಲೂ ವಿಜಯಪುರ ಒಣ ದ್ರಾಕ್ಷಿಯೇ ಆಧಾರ ವಾಗಿದ್ದು, ಈ ಟ್ಯಾಗ್ ದೊರಕಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇನ್ನಷ್ಟೂ ವಿಸ್ತರಣೆ ಯಾಗಲಿದ್ದು, ಬೆಳೆಗಾರರಿಗೆ ಆನೆ ಬಲ ತರಲಿದೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿವಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ.ಫಕ್ರುದ್ದೀನ್ ನೇತೃತ್ವದ 9 ಸದಸ್ಯರ ಸಮಿತಿಯು ವಿಜಯಪುರದ ಒಣದ್ರಾಕ್ಷಿಗೆ ಜಿಐ ಟ್ಯಾಗ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಾಗುತ್ತಿದೆ. ಜಿಲ್ಲಾದ್ಯಂತ 17 ಸಾವಿರ ಹೆಕ್ಟೆರ್ ದ್ರಾಕ್ಷಿ ಬೆಳೆ ಇದೆ. 5 ಲಕ್ಷ ಟನ್ಗೂ ಹೆಚ್ಚು ಒಣದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ಜಿಐ ಟ್ಯಾಗ್ ಸಿಕ್ಕರೆ ವಿಜಯಪುರ ದ್ರಾಕ್ಷಿಗೆ ಜಾಗತಿಕ ಮಾರುಕಟ್ಟೆ ಸಂಪರ್ಕ ದೊರೆತು ರೈತರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...
ಸವಣೂರಿನ ವೀಳದ್ಯೆಲೆ, ಕುಮುಟಾದ ಈರುಳ್ಳಿ, ತೆಂಗು, ತಿಪಟೂರಿನ ತೆಂಗು, ಕೊಬ್ಬರಿ, ಗೌರಿಬಿದನೂರಿನ ಮೆಣಸಿನ ಕಾಯಿ ಸೇರಿದಂತೆ 23 ಬೆಳೆಗಳಿಗೆ ಜಿಐ ಟ್ಯಾಗ್ ಕೊಡಿಸುವ ಪ್ರಯತ್ನ ನಡೆದಿದೆ. ಇದರ ಜತೆಗೆ ಈ ಒಣದ್ರಾಕ್ಷಿಗೂ ಸಹ ಟ್ಯಾಗ್ ದೊರಕುವ ಸಾಧ್ಯತೆ ದಟ್ಟವಾಗಿದೆ.
ಹಣ್ಣು ವಿಜ್ಞಾನ, ಅರ್ಥಶಾಸ್ತ್ರ, ಮಾರುಕಟ್ಟೆ, ಜೀವ ರಸಾಯನ ಶಾಸ್ತ್ರ, ತಳಿಶಾಸ್ತ್ರ, ತೋಟ ಗಾರಿಕೆ ತಜ್ಞರನ್ನೊಳಗೊಂಡ ಸಮಿತಿಯು ಜಿಐ ಟ್ಯಾಗ್ ಪ್ರಸ್ತಾವನೆ ಸಿದ್ಧಪಡಿಸಲು ಕಳೆದ 6 ತಿಂಗಳಿಂದ ವಿಜಯಪುರದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಮೇಲೆ ಅಧ್ಯಯನ ಕೈಗೊಂಡಿದೆ.
ಈ ಭಾಗದ ದ್ರಾಕ್ಷಿಯು ವೈಜ್ಞಾನಿಕವಾಗಿ ಹಾಗೂ ಐತಿಹಾಸಿಕವಾಗಿ ಇತರೆ ಭಾಗದ ದ್ರಾಕ್ಷಿಗಿಂತ ವಿಭಿನ್ನ, ವಿಶೇಷತೆ ಹೊಂದಿದೆ ಎಂಬುದರ ಬಗ್ಗೆ ದಾಖಲೆ ಸಮೇತ ಮಾಹಿತಿ ಕಲೆಹಾಕುತ್ತಿದೆ.
ವಿಜಯಪುರ ದ್ರಾಕ್ಷಿಯು ಇತರೆ ಭಾಗದ ದ್ರಾಕ್ಷಿಗಿಂತ ವಿಶೇಷತೆ ಹೊಂದಿದ್ದರ ಬಗ್ಗೆ ತಾಂತ್ರಿಕ ವಾಗಿ ಹಾಗೂ ಐತಿಹಾಸಿಕ ದಾಖಲೆ ಒದಗಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ತಂಡವು ರೈತರಿಂದ ಮಾಹಿತಿ ಸಂಗ್ರಹ ಹಾಗೂ ಈ ಭಾಗದಲ್ಲಿದ್ರಾಕ್ಷಿ ಬೆಳೆ ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದರ ಬಗ್ಗೆ ಐತಿಹಾಸಿಕ ದಾಖಲೆಗಳನ್ನು ಹುಡುಕುತ್ತಿದೆ ಎಂದು ಸಮಿ ತಿಯ ಮುಖ್ಯಸ್ಥ ಡಾ.ಫಕ್ರುದ್ದೀನ್ ತಿಳಿಸಿದರು.
ಒಣದ್ರಾಕ್ಷಿಯಲ್ಲಿನ ಪೌಷ್ಟಿಕಾಂಶ ಹಾಗೂ ಅದರಲ್ಲಿನ ಉಳಿದುಕೊಳ್ಳುವ ರಾಸಾಯನಿಕ ಅಂಶದ ಬಗ್ಗೆ ಪರೀಕ್ಷೆ ಆಗಬೇಕಿದೆ. ಇದು ಮಧ್ಯಪ್ರಾಚ್ಯ, ಯುರೋಪ್ ಹಾಗೂ ಉತ್ತರ ಅಮೆರಿಕ ರಾಷ್ಟ್ರಗಳಿಗೆ ರಫ್ತು ಮಾಡಲು ಸಹಕಾರಿಯಾಗಲಿದೆ. ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಆಗಾಗ್ಗೆ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ತೋಟಗಾರಿಕೆ ವಿವಿ, ಸರಕಾರಿ ಸಂಸ್ಥೆಗಳು ಹಾಗೂ ರೈತ ಉತ್ಪಾದಕ ಕಂಪನಿಗಳ ಸಹಯೋಗದಲ್ಲಿಸಾವಯವ ದ್ರಾಕ್ಷಿ ಬೆಳೆಯಲು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯ ಪ್ರಗತಿಯಲ್ಲಿದೆ.
ವಿಜಯಪುರ ಜಿಲ್ಲೆಯಾದ್ಯಂತ 17 ಸಾವಿರ ಹೆಕ್ಟೆರ್ ದ್ರಾಕ್ಷಿ ಬೆಳೆ
ವಾರ್ಷಿಕ 5 ಲಕ್ಷ ಟನ್ಗೂ ಹೆಚ್ಚು ಒಣದ್ರಾಕ್ಷಿ ಉತ್ಪಾದನೆ
ಈಗಾಗಲೇ ಜಿಐ ಮಾನ್ಯತೆ ಪಡೆದಿರುವ ರಾಜ್ಯದ 23 ಬೆಳೆಗಳು
![]()
ವಿಜಯಪುರದ ದ್ರಾಕ್ಷಿ ಹಾಗೂ ಒಣದ್ರಾಕ್ಷಿಗೆ ಜಿಐ ಟ್ಯಾಗ್ ಪಡೆದುಕೊಳ್ಳಲು ತಜ್ಞರ ಸಮಿತಿ ಯಿಂದ ಅಧ್ಯಯನ, ತಾಂತ್ರಿಕ ಹಾಗೂ ಐತಿಹಾಸಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತಾವನೆಗೆ ಸಿದ್ಧತೆ ಕೈಗೊಳ್ಳಲಾಗಿದೆ.
-ಡಾ.ಬಿ.ಫಕ್ರುದ್ದಿನ್, ಸಂಶೋಧನಾ ನಿರ್ದೇಶಕ, ತೋಟಗಾರಿಕೆ ವಿವಿ, ಬಾಗಲಕೋಟೆ