ವೀರಣ್ಣ ಕಲಕೇರಿ ಕೆಂಭಾವಿ
ಬರ ಘೋಷಣೆಗೆ ಹೆಚ್ಚಿದ ಒತ್ತಡ
ವರುಣನ ಕಣ್ಣಾಮುಚ್ಚಾಲೆ
ಮುಂಗಾರು ಕೈ ಕೊಡುವ ಆತಂಕ
ಜಿಲ್ಲೆಯು ಸೇರಿದಂತೆ ಬಹುತೇಕ ಕಲ್ಯಾಣ ಕರ್ನಾ ಟಕದ ಭಾಗದಲ್ಲಿ ಜುಲೈ ಮಾಹೆ ಮುಗಿಯುತ್ತಾ ಬರುತ್ತಿದ್ದರೂ ವರುಣದೇವ ಮಾತ್ರ ಕರುಣೆ ತೋರುತ್ತಿಲ್ಲ. ಮುಂಗಾರು ಹಂಗಾಮಿನ ಆರಂಭದಲ್ಲೇ ಮಳೆಯ ತೀವ್ರ ಕೊರತೆ ಎದುರಾಗಿದ್ದು, ಅನ್ನದಾತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಭೂಮಿಯನ್ನು ಹಸನುಗೊಳಿಸಿ, ಸಾಲ-ಸೋಲ ಮಾಡಿ ಬೀಜ-ಗೊಬ್ಬರ ಹಾಕಿ ಬಿತ್ತನೆ ಮಾಡಿದ ಕೃಷಿಕರು ಈಗ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್ ಆರಂಭದಲ್ಲಿ ಬಿದ್ದ ಅಲ್ಪ-ಸ್ವಲ್ಪ ಮಳೆಯನ್ನು ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ, ಹತ್ತಿ ಇತ್ಯಾದಿ ಬೀಜ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದರು.
ಬಿತ್ತನೆ ಮುಗಿದು ಸಸಿಗಳು ಮೊಳಕೆ ಯೊಡೆದು ಮೇಲೇಳುವ ಈ ನಿರ್ಣಾಯಕ ಸಮಯದಲ್ಲಿ ಮಳೆ ಸಂಪೂರ್ಣ ಕೈ ಕೊಟ್ಟಿದು. ಭೂಮಿಯ ತೇವಾಂಶ ಕೊರತೆಯಿಂದಾಗಿ ಮೊಳಕೆಯೊಡೆದ ಸಸಿಗಳು ಭೂಮಿ ಯಲ್ಲೇ ಒಣಗಿ ಕಪ್ಪಾಗಲು ಪ್ರಾರಂಭಿಸಿವೆ. ರೈತಾಪಿಗಳು ಕ್ರೋಢೀಕರಿಸಿದ ಹಣವೆಲ್ಲ ಗೊಬ್ಬರ-ಬೀಜಕ್ಕೆ ಸುರಿದಿ ದ್ದೇವೆ, ಈಗ ಆಕಾಶ ನೋಡುತ್ತಾ ಕುಳಿತು ಕೊಳ್ಳುವುದರ ಹೊರತು ಬೇರೆ ದಾರಿಯಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Yadgir News: ತಂದೆ ಸಾವಿನ ದುಃಖದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!
ಅಂತರ್ಜಲ ಕುಸಿತದ ಭೀತಿ; ಸ್ಪ್ರಿಂಕ್ಲರ್ ಮೊರೆ ಹೋದ ಅನ್ನದಾತ: ಅನ್ನದಾತರು ತಮ್ಮ ಕಣ್ಣೆದುರೇ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನಿವಾರ್ಯ ಎಂಬಂತೆ ತೀವ್ರ ಸಾಹಸ ಪಡುತ್ತಿದ್ದಾರಾದರೂ ನಿರೀಕ್ಷೆ ಮಾಡು ವಂತಿಲ್ಲ. ಸಾಂಪ್ರದಾಯಿಕ ನೀರಾವರಿ ಸಾಧ್ಯವಾಗದ ಕಡೆಗಳಲ್ಲಿ ಸ್ಪ್ರಿಂಕ್ಲರ್(ತುಂತುರು ನೀರಾವರಿ) ಪೈಪ್ಗಳನ್ನು ಬಾಡಿಗೆಗೆ ತಂದು ಅಥವಾ ಇದ್ದ ಹಳೆ ಪೈಪ್ಗಳನ್ನು ಜೋಡಿಸಿ ಬೆಳೆಗಳಿಗೆ ಜೀವದಾನ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಈ ತಾತ್ಕಾಲಿಕ ಉಪಾಯಕ್ಕೂ ಈಗ ಪ್ರಕೃತಿ ಸಾಥ್ ನೀಡುತ್ತಿಲ್ಲ. ತುಂತುರು ನೀರಾವರಿ ಪದ್ಧತಿ ಬಳಸಬೇಕಾದರೂ ಕನಿಷ್ಠ ನೀರಿನ ಆಸರೆ ಇರಬೇಕು.
ಆದರೆ ಹೆಚ್ಚುಕಮ್ಮಿ ಬಹುತೇಕ ಹಲವುಕಡೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಾಣುತ್ತಿದೆ ಎನ್ನುತ್ತಿದ್ದಾರೆ ರೈತರು. ಹಲವು ಕಡೆ ಕೃಷಿ ಬಾವಿಗಳು, ಬೋರ್ವೆಲ್ ಗಳಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತಿದ್ದು, ಇದರಿಂ ದಾಗಿ ಕಣ್ಣೆದುರೇ ಬೆಳೆ ಒಣಗುತ್ತಿದ್ದರೂ ನೀರುಣಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ರೈತರಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಕ್ಕೂ ಮುನ್ನುಡಿ ಬರೆದಿದೆ ಎನ್ನಬಹುದು.
ಇದೀಗ ಜುಲೈ ತಿಂಗಳು ಅರ್ಧ ಕಳೆದರೂ ಮುಂಗಾರು ಚುರುಕಾಗದಿರುವುದು ಬಹುತೇಕ ಕಲ್ಯಾಣ ಕರ್ನಾಟಕದ ಕೃಷಿ ವಲಯದ ಬೆನ್ನೆಲುಬನ್ನೇ ಮುರಿದಂ ತಾಗಿದೆ. ಸರಕಾರ ಕೇವಲ ವರದಿಗಳಿಗಾಗಿ ಕಾಯದೇ, ತಕ್ಷಣವೇ ಸಮೀಕ್ಷೆ ನಡೆಸಿ ರೈತರ ನೆರವಿಗೆ ಧಾವಿಸಬೇಕಿದೆ. ಇಲ್ಲದಿದ್ದರೆ, ಈ ಭಾಗದ ಅನ್ನದಾತರು ಸಾಲದ ಸುಳಿಗೆ ಸಿಲುಕಿ ಮತ್ತಷ್ಟು ಕಂಗಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿವೆ ರೈತಪರ ಸಂಘಟನೆಗಳು. ಒಟ್ಟಿನಲ್ಲಿ ಮಳೆಯಿಲ್ಲದೆ ಹೈರಾಣಾಗಿರುವ ಅನ್ನದಾತ ಈಗ ಸರಕಾರದ ನಿರ್ಧಾರದತ್ತ ಮುಖ ಮಾಡಿದ್ದಾನೆ. ಸರಕಾರ ಯಾವಾಗ ಬರಗಾಲ ಘೋಷಣೆ ಮಾಡುತ್ತೆ ಅಂತ ಕಾದು ನೋಡಬೇಕಿದೆ.
ಬರಪೀಡಿತ ಘೋಷಣೆಗೆ ರೈತಸಂಘ ಒತ್ತಾಯ ಮುಂಗಾರು ಕೈಕೊಟ್ಟಿರುವುದರಿಂದ ಈ ವರ್ಷ ಭೀಕರ ಕ್ಷಾಮ ತಲೆದೋರುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ವಿವಿಧೆಡೆ ರೈತಪರ ಸಂಘಟನೆಗಳು, ಸರಕಾರಕ್ಕೆ ಮನವಿ, ಪ್ರತಿಭಟನೆ ನಡೆಸಿ ಬರಗಾಲ ಘೋಷಣೆಗೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸು ತ್ತಿವೆ.
![]()
ಈ ವರ್ಷ ಮುಂಗಾರು ಮಳೆ ನಂಬಿ ರೈತರು ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ಡರು. ಆದರೆ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಶುರುವಾಗುತ್ತಿದೆ. ಸರಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳದೆ ತಕ್ಷಣವೇ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು, ಜಾನುವಾರುಗಳ ರಕ್ಷಣೆಗಾಗಿ ತಕ್ಷಣವೇ ಮುಂದಾಗಿ ಮೇವು ಬ್ಯಾಂಕ್ಗಳನ್ನು ತೆರೆಯ ಬೇಕು.
-ಎಚ್.ಆರ್.ಬಡಿಗೇರ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ
![]()
ಕಲ್ಯಾಣ ಕರ್ನಾಟಕದಲ್ಲಿ ಮಳೆ ಕೊರತೆಯಾಗಿರುವುದರಿಂದ ಇಲ್ಲಿನ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕು. ಗ್ರಾಮೀಣ ಜನರ ವಲಸೆ ತಡೆಯಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಿ, ಬಾಕಿ ಇರುವ ಕೂಲಿಯನ್ನು ತಕ್ಷಣ ಪಾವತಿಸಬೇಕು. ಕಳೆದ ವರ್ಷದ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡುವುದರ ಜತೆಗೆ, ಈ ವರ್ಷದ ನಷ್ಟಕ್ಕೆ ಸರಕಾರವು ಹೆಕ್ಟೇರ್ಆಧಾರಿತ ತುರ್ತು ಪರಿಹಾರ ವಿತರಿಸಬೇಕೆಂದು ಒತ್ತಾಯಿಸುತ್ತೇನೆ.
-ಶರಣಗೌಡ ಗೂಗಲ, ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ