ಬೆಂಗಳೂರು: ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ʼದುನಿಯಾʼ ಚಿತ್ರದಲ್ಲಿ ʼಲೂಸ್ ಮಾದʼ ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ಪಾತ್ರಕ್ಕೆ ನೋಡುಗರು ಫಿದಾ ಆದರು ಅಂದಿನಿಂದಲೂ ʼಲೂಸ್ ಮಾದʼ ಯೋಗೇಶ್ ಅಂತಲೇ ಯೋಗೇಶ್ ಜನಪ್ರಿಯರಾದರು. ಈಗ ʼಲೂಸ್ ಮಾದʼ ಚಿತ್ರದ (Loose Maada Movie) ಶೀರ್ಷಿಕೆಯಾಗಿದೆ. ಈ ಚಿತ್ರದ ನಾಯಕನಾಗಿ ಯೋಗೇಶ್ ಅವರೇ ಅಭಿನಯಿಸುತ್ತಿದ್ದಾರೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಯೋಗೇಶ್ ಅವರ ತಂದೆ, ನಿರ್ಮಾಪಕ ಟಿ.ಪಿ. ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರದ ನಿರ್ಮಾಪಕ ಧರ್ಮೇಂದ್ರ ಅವರೇ ಕ್ಯಾಮೆರಾ ಚಾಲನೆ ಮಾಡಿದರು. ಉದಯ್ ಶೆಟ್ಟಿ, ಉಮೇಶ್ ಶೆಟ್ಟಿ, ರಘು ಗುಜ್ಜಲ್ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಯೋಗೇಶ್ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಸಿನಿಮಾ ಮುಹೂರ್ತದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

ನಾನು ಮೂಲತಃ ಮಂಗಳೂರಿನವನು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಎಂದು ಮಾತನಾಡಿದ ನಿರ್ಮಾಪಕ ಧರ್ಮೇಂದ್ರ, ಸಿನಿಮಾರಂಗ ನನಗೆ ಹೊಸತು. ಕೆಲವು ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿ ಅಂತ ಹೇಳಿದರು. ನಿರ್ದೇಶಕರು ಹೇಳಿದ ಕಥೆಯೂ ಇಷ್ಟವಾಯಿತು. ಜತೆಗೆ ನಾನು ಲೂಸ್ ಮಾದ ಯೋಗೇಶ್ ಅವರ ಅಭಿಮಾನಿ. ಅವರೆ ನಮ್ಮ ಚಿತ್ರದ ನಾಯಕರಾಗಿರುವುದು ಖುಷಿಯಾಗಿದೆ. ಇಂದಿನ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ʼಲೂಸ್ ಮಾದʼ ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರಕ್ಕೆ ʼThe Wolfʼ ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ. ಯೋಗೇಶ್ ಅವರು ಹಲವು ವರ್ಷಗಳ ಪರಿಚಯ. ಅವರಿಗೆ ಈ ಚಿತ್ರದ ಕಥೆ ಹೇಳಿದೆ. ನಾಯಕನಾಗಿ ನಟಿಸಲು ಒಪ್ಪಿಕೊಂಡರು. ಧರ್ಮೇಂದ್ರ ಅವರು ನಿರ್ಮಾಣಕ್ಕೆ ಮುಂದಾದರು. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ. ಕಿಶೋರ್ ಅವರು ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದಿ ಲೋಕೇಶ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನನ್ನ ಸ್ನೇಹಿತರ ಮೂಲಕ ನಿರ್ಮಾಪಕ ಧರ್ಮೇಂದ್ರ ಅವರು ಪರಿಚಯವಾದರು. ನಿರ್ದೇಶಕರು ಹೇಳಿದಂತೆ ನನಗೆ ಅವರು ಬಹಳ ವರ್ಷಗಳ ಪರಿಚಯ. ಈ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ʼಕಂಸʼ ಎಂಬ ಸಿನಿಮಾ ಆರಂಭವಾಗಬೇಕಿತ್ತು. ಕಾರಣಾಂತರದಿಂದ ಆ ಸಿನಿಮಾ ವಿಳಂಬವಾಯಿತು. ಈಗ ʼಲೂಸ್ ಮಾದʼ ಸಿನಿಮಾ ಶುರುವಾಗಿದೆ. ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ. ʼದುನಿಯಾʼ ಸಿನಿಮಾದ ಲೂಸ್ ಮಾದ ನ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ. ನೋಡುಗರಿಗೆ ಒಂದೊಳ್ಳೆ ಸಿನಿಮಾ ಕೊಡಬೇಕು. ಹಾಗಾಗಿ ಇಡೀ ತಂಡದ ಸಹಕಾರ ಮುಖ್ಯ. ನಮ್ಮ ಚಿತ್ರಕ್ಕೆ ಅಂತಹ ಉತ್ತಮ ತಂಡ ಸಿಕ್ಕಿದೆ. ಪ್ರದೀಪ್ ರೆಡ್ಡಿ ಛಾಯಾಗ್ರಹಣ, ರಂಜನ್ ಸಂಕಲನ, ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಚಿನ್ ಪೂಜಾರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕಿಶೋರ್, ಆದಿ ಲೋಕೇಶ್, ಅಚ್ಯುತಕುಮಾರ್ ಮೊದಲಾದ ಅನುಭವಿ ಕಲಾವಿದರ ತಾರಾಬಳಗವಿರುವ ʼಲೂಸ್ ಮಾದʼ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡುವುದು ಖಂಡಿತ ಎಂದು ನಾಯಕ ಲೂಸ್ ಮಾದ ಯೋಗೇಶ್ ತಿಳಿಸಿದರು.
ಯೋಗೇಶ್ ಜತೆಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ ಎಂದರು ನಟ ಆದಿ ಲೋಕೇಶ್.
ಈ ಸುದ್ದಿಯನ್ನೂ ಓದಿ | Shravana Fashion 2025: ಶ್ರಾವಣ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಅತ್ಯಾಕರ್ಷಕ ಎಥ್ನಿಕ್ವೇರ್ಸ್
ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ಛಾಯಾಗ್ರಾಹಕ ಪ್ರದೀಪ್ ರೆಡ್ಡಿ, ಸಂಕಲನಕಾರ ರಂಜನ್, ಕಾರ್ಯಕಾರಿ ನಿರ್ಮಾಪಕ ಪವನ್ ಕುಮಾರ್ ಉಡುಪಿ ಹಾಗೂ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿವಾನ್ ಆಕರ್ಷ್, ರಿತೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.