ನವದೆಹಲಿ: ಗೃಹ ಬಳಕೆಯ ಅಡುಗೆ ಅನಿಲ (domestic cooking gas) ಹೊಂದಿರುವವರು ಇ-ಕೆವೈಸಿ ( e-KYC) ಕಡ್ಡಾಯಗೊಳಿಸಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ( Pradhan Mantri Ujjwala Yojana) ಸಿಗುವ ಸಬ್ಸಿಡಿಗೆ (LPG subsidy) ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಉಜ್ವಲ ಯೋಜನೆಯಡಿ ಸುಮಾರು 105.1 ಮಿಲಿಯನ್ಗಿಂತಲೂ ಹೆಚ್ಚು ಫಲಾನುಭವಿಗಳು ಸಬ್ಸಿಡಿ ಪಡೆಯುತ್ತಿದ್ದು, ಇವರ ಸಬ್ಸಿಡಿಗೆ ಅಡಚಣೆಯಾಗದೇ ಇರಲು ವಾರ್ಷಿಕ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಮಾಡಲೇಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
ಅಡುಗೆಗೆ ಬಳಸುವ ಅನಿಲ ಅಥವಾ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ)ದ 330 ಮಿಲಿಯನ್ಗಿಂತಲೂ ಹೆಚ್ಚು ಗೃಹಬಳಕೆದಾರರು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಮಾಡಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಪೆಟ್ರೋಲಿಯಂ ಸಚಿವಾಲಯ, ಎಲ್ಲಾ ದೇಶೀಯ ಎಲ್ಪಿಜಿ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದನ್ನು ಮನೆಯಿಂದಲೇ ಮಾಡಬಹುದು. ಇದಕ್ಕಾಗಿ ತೈಲ ಮಾರ್ಕೆಟಿಂಗ್ ಕಂಪನಿಯ (ಒಎಂಸಿ) ಮೊಬೈಲ್ ಅಪ್ಲಿಕೇಶನ್ ಮತ್ತು ಆಧಾರ್ ಫೇಸ್ಆರ್ಡಿ ಅಪ್ಲಿಕೇಶನ್ ಬಳಸುವಂತೆ ಸೂಚಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 105.1 ಮಿಲಿಯನ್ಗಿಂತಲೂ ಹೆಚ್ಚು ಫಲಾನುಭವಿಗಳಿಗೆ ಸಬ್ಸಿಡಿ ಪಡೆಯಲು ವಾರ್ಷಿಕ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯವಾಗಿದೆ. ಇ-ಕೆವೈಸಿ ಇಲ್ಲದೆ ಒಬ್ಬ ಫಲಾನುಭವಿಯು ಒಂದು ಹಣಕಾಸು ವರ್ಷದಲ್ಲಿ ಏಳು ಎಲ್ಪಿಜಿ ಮರುಪೂರಣಗಳನ್ನು ಪಡೆಯಬಹುದು. ಇ-ಕೆವೈಸಿ ಮಾಡದೇ ಇದ್ದರೆ ಮರುಪೂರಣ ಪೂರೈಕೆಗೆ ಅಡ್ಡಿಯಾಗಲಿದೆ. ಪಿಎಂಯುವೈ ಫಲಾನುಭವಿಯು ಒಂದು ಹಣಕಾಸು ವರ್ಷದಲ್ಲಿ ಒಮ್ಮೆ ಇ-ಕೆವೈಸಿ ಮಾಡಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಬಡ ಕುಟುಂಬದ ಮಹಿಳೆಯರಿಗೆ ಅನುಕೂಲವಾಗುವಂತೆ ಠೇವಣಿ ಉಚಿತ ಎಲ್ಪಿಜಿ ಸಂಪರ್ಕ ನೀಡಲು 2016ರಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿ ಗೊಳಿಸಿತ್ತು. 2022 ರಲ್ಲಿ ಸರ್ಕಾರವು ಪಿಎಂಯುವೈ ಗ್ರಾಹಕರಿಗೆ 14.2 ಕೆಜಿ ಸಿಲಿಂಡರ್ಗೆ 200 ರೂ. ಸಬ್ಸಿಡಿಯನ್ನು ಪ್ರಾರಂಭಿಸಿತು. ಬಳಿಕ ಅದನ್ನು 300 ರೂ. ಗೆ ಹೆಚ್ಚಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಇದು ಗೃಹ ಬಳಕೆಯ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಮಾರ್ಚ್ 7 ರಂದು ಒಎಂಸಿಗಳು ಅಡುಗೆ ಅನಿಲದ ಬೆಲೆಯನ್ನು 14.2 ಕೆಜಿ ಸಿಲಿಂಡರ್ಗೆ 60 ರೂ. ಹೆಚ್ಚಿಸಿದ್ದು, ದೆಹಲಿಯಲ್ಲಿ ದೇಶೀಯ ಎಲ್ ಪಿಜಿ ಸಿಲಿಂಡರ್ಗಳ ಬೆಲೆ 913 ರೂ. ಗೆ ಏರಿಕೆಯಾಗಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು 613 ರೂ. ಪಾವತಿಸಬೇಕಾಗುತ್ತದೆ.
ವಾಹನ ಮಾಲಕರ ಗಮನಕ್ಕೆ... ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಹೊಸ ದರ ಪಟ್ಟಿ ಇಲ್ಲಿದೆ
ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾತನಾಡಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು 2025-26ನೇ ಹಣಕಾಸು ವರ್ಷದಲ್ಲಿ ವಾರ್ಷಿಕ 14.2 ಕೆ.ಜಿ. ಸಿಲಿಂಡರ್ಗಳ 9 ಮರುಪೂರಣದ ಪ್ರತಿ ಸಿಲಿಂಡರ್ಗೆ 300 ರೂ. ಸಬ್ಸಿಡಿಯನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕೇಂದ್ರ ಸಚಿವ ಸಂಪುಟವು 2025-26 ರ ಅವಧಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೀಡಲಾಗುವ ಸಬ್ಸಿಡಿಗಾಗಿ 12,000 ಕೋಟಿ ರೂ. ವೆಚ್ಚ ಮಾಡಿತ್ತು ಎಂದು ಅವರು ಹೇಳಿದ್ದರು.