ಬೆಂಗಳೂರು: ದೇಶದ ಕೋಟ್ಯಾಂತರ ಉದ್ಯೋಗಿಗಳು ಪಡೆಯುವ ಭವಿಷ್ಯ ನಿಧಿಯ ನಿಯಮದಲ್ಲಿ (Employee's Provident Fund) ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು ಇದು ನಿವೃತ್ತಿ ವೇಳೆ ಪಡೆಯುವ ಭವಿಷ್ಯ ನಿಧಿ ಮೊತ್ತದ ಮೇಲೆ ನೇರವಾಗಿ ಪರಿಣಾಮ ಬೀಳಲಿದೆ ಎನ್ನುತ್ತಾರೆ ಕೇಶವ್ ಪ್ರಸಾದ್. 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್ ಚಾನೆಲ್ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಇಪಿಎಫ್ ಸ್ಕೀಮ್ 1952ರಿಂದ ಚಾಲ್ತಿಯಲ್ಲಿದ್ದ ಇಪಿಎಫ್ ನಿಯಮವನ್ನು ಬದಲಾಯಿಸಿದೆ ಎಂದು ಹೇಳಿದರು.
ಹೊಸ ಇಪಿಎಫ್ ಸ್ಕೀಮ್ 2026ರ ಪ್ರಕಾರ ಪಿಎಫ್ ಕಡಿತ, ಸ್ವಯಂಪ್ರೇರಿತ ಕೊಡುಗೆಗಳು, ಆಂಶಿಕ ಹಣ ಹಿಂಪಡೆಯುವಿಕೆ ಮತ್ತು ಗುತ್ತಿಗೆ ಕಾರ್ಮಿಕರ ಹಕ್ಕುಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಇದು ನಿವೃತ್ತಿ ನಿಧಿ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಮೂಲ ವೇತನ 15 ಸಾವಿರ ರೂ. ಇರುವವರು ಕಡ್ಡಾಯವಾಗಿ 1,800 ರೂ. ಅನ್ನು ಇಪಿಎಫ್ ಗೆ ನೀಡಬೇಕು. ಇದಕ್ಕಿಂತ ಹೆಚ್ಚಿನ ವೇತನವಿದ್ದರೆ ಸ್ವಯಂ ಪ್ರೇರಿತವಾಗಿ ನಿರ್ದಿಷ್ಟ ಮೊತ್ತವನ್ನು ಇಪಿಎಫ್ ಗೆ ನೀಡಬಹುದಾಗಿದೆ. ಈ ಮೂಲಕ ನಿವೃತ್ತಿ ನಿಧಿ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ಅವರು.
ಒಂದು ವೇಳೆ ಪಿಎಫ್ ಮೊತ್ತದಲ್ಲಿ ಹೆಚ್ಚುವರಿ ಕೊಡುಗೆ ನೀಡಲು ಇಚ್ಛೆ ಇಲ್ಲದೇ ಇದ್ದರೆ ಬೇರೆ ಕಡೆ ಹೂಡಿಕೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಹೊಸ ನಿಯಮಗಳ ಪ್ರಕಾರ ಪಿಎಫ್ ನಿಧಿಯಲ್ಲಿ ತುರ್ತು ಸಂದರ್ಭ ಎಂದರೆ ಅನಾರೋಗ್ಯ, ಶಿಕ್ಷಣ, ವಿಶೇಷ ಸಂದರ್ಭಗಳಲ್ಲಿ ಆಂಶಿಕವಾಗಿ ಹಿಂಪಡೆಯಲು ಅವಕಾಶವಿದೆ. ಇದು ನಿವೃತ್ತಿ ಭದ್ರತೆ ಮೊತ್ತ ಕನಿಷ್ಠ 25ರಷ್ಟು ಉಳಿಸಿಕೊಂಡು ಉಳಿದ ಮೊತ್ತವನ್ನು ಹಿಂಪಡೆಯಬಹುದಾಗಿದೆ ಎಂದರು.
ಆಂಶಿಕವಾಗಿ ಹಣವನ್ನು ಮೂರು ದಿನ ಮತ್ತು ಪಿಂಚಣಿ ಮೊತ್ತವನ್ನು ೨೦ ದಿನಗಳ ಒಳಗೆ ಉದ್ಯೋಗಿಗಳಿಗೆ ಪಾವತಿ ಮಾಡಬೇಕು. ಇದರಲ್ಲಿ ವಿಳಂಬವಾದರೆ ವರ್ಷಕ್ಕೆ ೧೨ರಷ್ಟು ಬಡ್ಡಿಯನ್ನು ಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಒಟ್ಟಿನಲ್ಲಿ ಪಿಎಫ್ ನಿಯಮಗಳಲ್ಲಿ ಮಾಡಿರುವ ಈ ಬದಲಾವಣೆಯು ನಮ್ಮ ಆರ್ಥಿಕ ಗುರಿ, ಶಿಸ್ತು, ಕಂಪೆನಿಯ ನಿಯಮಗಳ ಮೇಲೆ ನಿರ್ಧರಿತವಾಗಿರುತ್ತದೆ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳದಿದ್ದರೆ ಇದು ದೀರ್ಘಾವಧಿಯಲ್ಲಿ ಹೆಚ್ಚಿನ ಮೊತ್ತ ಪಡೆಯುವಲ್ಲಿ ಭಾರಿ ನಷ್ಟವನ್ನು ಉಂಟು ಮಾಡುತ್ತದೆ.
ಡಿಜಿಟಲ್ ಭಾರತದ ಮತ್ತೊಂದು ಮೈಲಿಗಲ್ಲು: ಪ್ರತಿದಿನ 75 ಕೋಟಿ ಯುಪಿಐ ವ್ಯವಹಾರ, 107 ಕೋಟಿ ಇಂಟರ್ನೆಟ್ ಸಂಪರ್ಕ
ಹೆಚ್ಚಿನ ಸಂಬಳದ ನಿರ್ದಿಷ್ಟ ಮೊತ್ತವನ್ನು ವಿಪಿಎಫ್ ಮೂಲಕ ಸುರಕ್ಷಿತವಾಗಿರಿಸಬಹುದು. ಇದರಲ್ಲಿ ತೆರಿಗೆ ಪ್ರಯೋಜನ ಕೂಡ ಇದೆ. ಇದು ಸ್ವಯಂ ಪ್ರೇರಿತ ಭವಿಷ್ಯ ನಿಧಿಯಾಗಿದ್ದು, ಇದರಲ್ಲಿ 8.2ರಷ್ಟು ಬಡ್ಡಿಯನ್ನು ಕೂಡ ಪಡೆಯಬಹುದಾಗಿದೆ. ಇದು ಸುರಕ್ಷಿತ ಯೋಜನೆಯಾಗಿದ್ದು, ಯಾವುದೇ ಮಾರುಕಟ್ಟೆ ಅಪಾಯವಿರುವುದಿಲ್ಲ ಎಂದರು.