ಹೈದರಾಬಾದ್, ಏ. 4: ಭಾರತದಲ್ಲಿ ಪುತ್ರ ವ್ಯಾಮೋಹದ ಪಿಡುಗು ಇನ್ನೂ ತೊಲಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ತೆಲಂಗಾಣದ (Telangana) ಕರೀಂನಗರದಲ್ಲಿ ನೀಚ ತಂದೆಯೊಬ್ಬ ತನ್ನ ನಾಲ್ಕು ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಹತ್ಯೆಗೈದಿದ್ದಾನೆ. ಪುತ್ರ ವ್ಯಾಮೋಹವನ್ನು ಹೊಂದಿದ್ದ ಆರೋಪಿಯು ಪುತ್ರಿಯರನ್ನು ಕೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ (Crime News).
ಕರೀಂನಗರ ಗ್ರಾಮೀಣ ಪ್ರದೇಶದ ಜುಬಿಲಿ ನಗರದ ನಿವಾಸಿ, ಆರೋಪಿ ಕಚ್ಚು ಶ್ರೀಶೈಲಂ ಆರು ವರ್ಷಗಳ ಹಿಂದೆ ಮೌನಿಕಾ ಎಂಬುವವರನ್ನು ವಿವಾಹವಾಗಿದ್ದ. ದಂಪತಿಗೆ ನಾಲ್ಕು ವರ್ಷದ ಗೀತಾಂಶಿ ಮತ್ತು ಗೀತಾನ್ವಿಕಾ ಎಂಬ ಅವಳಿ ಹೆಣ್ಣು ಮಕ್ಕಳಿದ್ದರು.
ಪೊಲೀಸರು ಮತ್ತು ಕುಟುಂಬ ಸದಸ್ಯರ ಪ್ರಕಾರ, ಆರೋಪಿ ಶ್ರೀಶೈಲಂ ಮಕ್ಕಳು ಹುಟ್ಟಿದಾಗಿನಿಂದ ಅತೃಪ್ತನಾಗಿದ್ದ. ಏಕೆಂದರೆ ಆತನಿಗೆ ಇಬ್ಬರೂ ಹೆಣ್ಣುಮಕ್ಕಳಾಗಿದ್ದರು. ಅವನಿಗೆ ಗಂಡು ಮಗು ಬೇಕಿತ್ತು. ಇದು ದಂಪತಿ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು.
10 ರುಪಾಯಿ ನೀಡದ್ದಕ್ಕೆ ಅಂಗವಿಕಲನನ್ನು ಕೊಂದೇ ಬಿಟ್ಟ ಪಾಪಿ
ಶುಕ್ರವಾರ (ಏ. 3) ಸಂಜೆ ಪತ್ನಿಯೊಂದಿಗೆ ಜಗಳವಾಡಿದ ನಂತರ, ಆರೋಪಿ ಶ್ರೀಶೈಲಂ ಮಕ್ಕಳನ್ನು ಗ್ರಾಮದ ಹೊರವಲಯದಲ್ಲಿರುವ ಹೊಲದತ್ತ ಕರೆದೊಯ್ದಿದ್ದಾನೆ ಎನ್ನಲಾಗಿದೆ. ನಂತರ ಮಕ್ಕಳನ್ನು ಹತ್ತಿರದ ಬಾವಿಯಲ್ಲಿ ಮುಳುಗಿಸಿ ಕೊಂದಿದ್ದಾನೆ ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ.
ಗೀತಾಂಶಿಯ ಮೃತದೇಹವನ್ನು ಆರಂಭದಲ್ಲಿ ಬಾವಿಯಿಂದ ಹೊರತೆಗೆಯಲಾಗಿದೆ. ಆದರೆ ಗೀತಾನ್ವಿಕಾ ನಾಪತ್ತೆಯಾಗಿದ್ದಳು. ಕೆಲವು ಗಂಟೆಗಳ ಕಾಲ ಹುಡುಕಾಟದ ನಂತರ ಆಕೆಯ ಮೃತದೇಹವೂ ಬಾಯಿಯಲ್ಲಿ ಪತ್ತೆಯಾಯ್ತು.
ಘಟನೆಯ ಬಗ್ಗೆ ತಿಳಿದ ಕೂಡಲೇ ಗ್ರಾಮಸ್ಥರು ಆರೋಪಿ ಶ್ರೀಶೈಲಂನನ್ನು ಹಿಡಿದು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಕ್ಕಳನ್ನು ಬಾವಿಗೆ ತಳ್ಳುವ ಮೊದಲು ವಿಷಪ್ರಾಶನ ಏನಾದರೂ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಗುವಿನ ಪಾಲನೆಗಾಗಿ ವಿವಾದ: ತಮಿಳುನಾಡಿನಲ್ಲಿ ಮಾವನನ್ನು ಗುಂಡಿಕ್ಕಿ ಕೊಂದ ಅಳಿಯ
ಕರೀಂನಗರ ಗ್ರಾಮೀಣ ವೃತ್ತ ನಿರೀಕ್ಷಕ ಎ. ನಿರಂಜನ್ ರೆಡ್ಡಿ ಮಾತನಾಡಿ, ಪ್ರಾಥಮಿಕ ತನಿಖೆಯ ಪ್ರಕಾರ ದಂಪತಿ ಮಧ್ಯೆ ಪದೇ ಪದೆ ಕೌಟುಂಬಿಕ ಕಲಹಗಳು ನಡೆಯುತ್ತಿತ್ತು. ಹೆಣ್ಣುಮಕ್ಕಳ ಜನನದ ನಂತರವೇ ಕಲಹ ಹೆಚ್ಚಾಯಿತು ಎಂಬುದು ತಿಳಿದು ಬಂದಿದೆ. ಪೊಲೀಸರು ಎಲ್ಲ ರೀತಿಯಲ್ಲೂ ಪರಿಶೀಲಿಸುತ್ತಿದ್ದು, ಮಕ್ಕಳನ್ನು ಬಾವಿಗೆ ತಳ್ಳುವ ಮುನ್ನ ವಿಷಪ್ರಾಶನ ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರದೇಶದಲ್ಲಿ ಭಾರಿ ಪೊಲೀಸ್ ನಿಯೋಜನೆ ಮಾಡಲಾಗಿದೆ.