Actor Darshan: ದರ್ಶನ್ ಬೇಲ್ ರದ್ದು, ರೇಣುಕಾ ಸ್ವಾಮಿ ಕುಟುಂಬದ ಫಸ್ಟ್ ರಿಯಾಕ್ಷನ್ ಹೇಗಿತ್ತು?
Supreme Court: ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್, ದರ್ಶನ್ ಅವರ ಬೇಲ್ ಸುಪ್ರೀಂ ಕೋರ್ಟ್ನಲ್ಲಿ ರದ್ದಾಗಿರುವುದರಿಂದ ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದಿದ್ದಾರೆ. ಕಾನೂನಿನಲ್ಲಿ ಯಾವ ರೀತಿ ಶಿಕ್ಷೆ ಆಗಬೇಕು ಅದನ್ನು ಕೊಡಲಿ ಅನ್ನೋದಷ್ಟೇ ನಮ್ಮ ಪ್ರಾರ್ಥನೆ ಎಂದು ರೇಣುಕಾ ಸ್ವಾಮಿ ಪತ್ನಿ ಹೇಳಿದರು.


ಚಿತ್ರದುರ್ಗ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy murder Case) ನಟ ದರ್ಶನ್ (Actor Darshan) ಮತ್ತು ಗ್ಯಾಂಗ್ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ (Supreme court) ರದ್ದುಪಡಿಸಿ ಬಿಗ್ ಶಾಕ್ ನೀಡಿದೆ. ಪವಿತ್ರಾ ಗೌಡ (Pavithra Gowda) ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka high court) ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ದರ್ಶನ್ ಸೇರಿದಂತೆ ಪ್ರಕರಣದ 7 ಆರೋಪಿಗಳಿಗೆ ಮತ್ತೆ ಜೈಲೇ ಗತಿಯಾಗಿರುವ ಹಿನ್ನೆಲೆಯಲ್ಲಿ, ಮೃತ ರೇಣುಕಾ ಸ್ವಾಮಿ ಕುಟುಂಬ ಸಂತಸ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್, ದರ್ಶನ್ ಅವರ ಬೇಲ್ ಸುಪ್ರೀಂ ಕೋರ್ಟ್ನಲ್ಲಿ ರದ್ದಾಗಿದೆ. ಆರೆಸ್ಟ್ ಮಾಡಲು ಆದೇಶ ಆಗಿದೆ. ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೈಕೋರ್ಟ್ ಬೇಲ್ ಕೊಟ್ಟಾಗ ಆತಂಕ ಆಗಿತ್ತು. ಸರ್ಕಾರ ಸುಪ್ರೀಂ ಕೋರ್ಟ್ಗೆ ಅಪೀಲ್ ಮಾಡಿದ್ದರು. ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಈ ತೀರ್ಪು ಬಂದಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ಹೆಚ್ಚು ನಂಬಿಕೆ ಹುಟ್ಟಿದೆ, ಈ ಕೇಸ್ನಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಪತಿಯನ್ನು ಕಳೆದುಕೊಂಡು ನೊಂದಿರುವ ಸೊಸೆಗೆ ಸರ್ಕಾರ ಉದ್ಯೋಗವನ್ನು ನೀಡಬೇಕು ಎಂದು ಮನವಿ ಮಾಡಿರುವ ಶಿವನಗೌಡರ್ ಅವರು, ಪ್ರಕರಣದ ಬಗ್ಗೆ ಕೆಳ ಹಂತದ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆ ಆಗಬೇಕು. ಯಾರೇ ದೊಡ್ಡವರು ತಪ್ಪು ಮಾಡಿದರೂ ಕಾನೂನು ಒಂದೇ ಎಂದು ಸಾಬೀತು ಆಗಿದೆ. ನಿತ್ಯವೂ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಇಂದು ಕೂಡ ಪೂಜೆ ಮಾಡುವ ವೇಳೆ ನನ್ನ ಪತ್ನಿ ಬಂದು ಬೇಲ್ ವಜಾ ಆಗಿರುವ ಮಾಹಿತಿ ನೀಡಿದರು. ನಮ್ಮ ಮನೆಯ ಪೂಜೆ ಸಲ್ಲಿಕೆ ವೇಳೆ ಅರ್ಜಿ ವಜಾ ಆಯ್ತು. ಗುರುಗಳು, ದೇವರ ಆಶೀರ್ವಾದದಿಂದ ಬೇಲ್ ಅರ್ಜಿ ವಜಾ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಕಾನೂನಿನ ಪ್ರಕಾರ ಶಿಕ್ಷೆ ಆಗಲಿ
ರೇಣುಕಾಸ್ವಾಮಿ ಪತ್ನಿ ಸಹನಾ ಪ್ರತಿಕ್ರಿಯೆ ನೀಡಿದ್ದು, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಿದೆ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂದು ಗೊತ್ತಾಗಿದೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ಕಾನೂನಿನಲ್ಲಿ ಯಾವ ರೀತಿ ಶಿಕ್ಷೆ ಆಗಬೇಕು ಅದನ್ನು ಕೊಡಲಿ ಅನ್ನೋದಷ್ಟೇ ನಮ್ಮ ಪ್ರಾರ್ಥನೆ ಎಂದು ಹೇಳಿದರು.
ಕೋರ್ಟ್ ತೀರ್ಪಿನಿಂದ ನಂಬಿಕೆ ಬಂದಿದೆ
ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮಾತನಾಡಿ, ಕೋರ್ಟಿಗೆ ತಲೆ ಬಾಗಲೇ ಬೇಕು, ನಮಗೆ ನ್ಯಾಯ ಸಿಕ್ಕಿದೆ. ಟ್ರಯಲ್ ಇನ್ನೂ ಕೂಡಾ ನಡೆಯಬೇಕಿದೆ. ನಮ್ಮ ಮನೆಯವರು ಪೂಜೆಗೆ ಕೂತಾಗ ಹೇಳಿದ್ದೇನೆ. ನಮಗೆ ಇದೀಗ ಸಂತೋಷ ವಾಗಿದೆ. ಕಾನೂನಿನಲ್ಲಿ ಏನು ತೀರ್ಪು ಬರುತ್ತೋ ಅದರ ಬಗ್ಗೆ ನಂಬಿಕೆ ಇದೆ. ಇವತ್ತಿನ ಕೋರ್ಟ್ ತೀರ್ಪಿನಿಂದ ನಂಬಿಕೆ ಬಂದಿದೆ ಎಂದರು.
ಇದನ್ನೂ ಓದಿ: Actor Darshan: ದರ್ಶನ್ಗೆ ಮತ್ತೆ ಜೈಲು; ಡೆವಿಲ್ ಸಾಂಗ್ ರಿಲೀಸ್ ಕಥೆಯೇನು?