ರಾಣೆಬೆನ್ನೂರು: ಸಹೋದರಿಯೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ವ್ಯಕ್ತಿಯನ್ನು ತಮ್ಮ ಕೊಲೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಬಳಿಕ ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ. ದಿಲೀಪ್ ಹಿತ್ತಲಮನಿ (47) ಎಂಬಾತನನ್ನು ರಾಜು ಅಲಿಯಾಸ್ ರಾಜಯ್ಯ ಕೊಲೆ ಮಾಡಿದ್ದಾನೆ. ಸಹೋದರಿ ಮತ್ತು ದಿಲೀಪ್ ಒಟ್ಟಿಗೆ ಇರುವುದನ್ನು ನೋಡಿ ಸಿಟ್ಟುಗೊಂಡ ರಾಜಯ್ಯ ಕೈಗೆ ಸಿಕ್ಕಿದ ವಸ್ತುಗಳನ್ನು ದಿಲೀಪ್ ಮೇಲೆ ಎಸೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ದಿಲೀಪ್ ಸ್ಥಳದಲ್ಲಿ ಸಾವನ್ನಪ್ಪಿದ್ದು, ಬಳಿಕ ರಾಜಯ್ಯ ಪೊಲೀಸರ ಮುಂದೆ ಶರಣಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ದಿಲೀಪ್ ಹಿತ್ತಲಮನಿಗೆ ಹಲವಾರು ಬಾರಿ ರಾಜಯ್ಯ ಎಚ್ಚರಿಕೆ ನೀಡಿದ್ದ. ಆದರೂ ದಿಲೀಪ್ ಮತ್ತು ರಾಜಯ್ಯನ ಸಹೋದರಿ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇದರಿಂದ ಆಕ್ರೋಶಗೊಂಡು ರಾಜಯ್ಯ ಆತನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಚಳಕೇರಿ ಗ್ರಾಮದ ಉಮಾ ಹಾಗೂ ರೈಲ್ವೆ ಇಲಾಖೆ ನೌಕರನಾಗಿದ್ದ ದಿಲೀಪ್ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದರು. ಉಮಾ ಬೇರೆ ಮದುವೆಯಾಗಿದ್ದರೂ ಆತನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ಇದಕ್ಕೆ ದಿಲೀಪ್ ಜೊತೆ ಉಮಾಳ ತಮ್ಮ ರಾಜಯ್ಯ ಜಗಳವಾಡುತ್ತಿದ್ದ. ಆತ ನನ್ನ ಸಹೋದರಿಗೆ ಮದುವೆಯಾಗಿದೆ ಬಿಟ್ಟು ಬಿಡು ಎಂದು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದ. ಆದರೆ ದಿಲೀಪ್ ಕೇಳಿರಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿರುವುದಾಗಿ ರಾಜಯ್ಯ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ದಿಲೀಪ್ ಕೊಲೆಯಾದ ಸುದ್ದಿ ತಿಳಿದು ಚಳಗೇರಿ ಗ್ರಾಮಕ್ಕೆ ಬಂದ ಆತನ ಮನೆಯವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ರಾಜಯ್ಯ ಮತ್ತು ದಿಲೀಪ್ ನಡುವೆ ಹಣಕಾಸು ವಿಚಾರದಲ್ಲಿ ಗಲಾಟೆಯಾಗಿದ್ದು, ಇದಕ್ಕಾಗಿ ಆತನನ್ನು ಕೊಲೆ ಮಾಡಿರುವುದಾಗಿ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ಯುವತಿಯ ಡಾನ್ಸ್- ಈಕೆಯ ಹುಚ್ಚಾಟವನ್ನೊಮ್ಮೆ ನೋಡಿ