ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಸಮೀಪ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 250ಕ್ಕೂ ಅಧಿಕ ಗೋಧಿ ಚೀಲಗಳನ್ನು ತುಂಬಿದ್ದ ಕ್ಯಾಂಟರ್ ವಾಹನವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Chinthamani Crime: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!
ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದಿಂದ ಹೊಸಕೋಟೆ ಕಡೆಗೆ ಎಚ್ ಕ್ರಾಸ್–ಜಂಗಮಕೋಟೆ ಮಾರ್ಗವಾಗಿ ಗೋಧಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ಆನಂದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸುನಿಲ್ ಕುಮಾರ್ ನೇತೃತ್ವದ ತಂಡ ವಾಹನವನ್ನು ತಡೆದು ಪರಿಶೀಲನೆ ನಡೆಸಿತು. ಪರಿಶೀಲನೆಯ ವೇಳೆ ಸುಮಾರು 14 ಟನ್ ತೂಕದ 250ಕ್ಕೂ ಅಧಿಕ ಗೋಧಿ ಚೀಲಗಳು ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ ಸಾಗುತ್ತಿರುವುದು ಪತ್ತೆಯಾಯಿತು.
ಬೀದರ್ ಮೂಲದ ರಾಮ ವಿಲಾಸ್ ಹಾಗೂ ಚೇಳೂರು ಮೂಲದ ನಾರಾಯಣಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಹಾರ ಇಲಾಖೆಯ ನಿರೀಕ್ಷಕಿ ವೆಂಕಟಲಕ್ಷ್ಮೀ ಅವರ ಸಮ್ಮುಖ ದಲ್ಲಿ ಗೋಧಿ ಚೀಲಗಳು ಮತ್ತು ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಿ ಮಹಜರು ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಅಕ್ರಮ ಸಾಗಾಣಿಕೆಯ ಹಿಂದಿನ ಜಾಲದ ಕುರಿತು ತನಿಖೆ ಮುಂದುವರಿಸಿದ್ದಾರೆ.