ಚಿಕ್ಕಮಗಳೂರು, ಮಾ.27: ಪಿಯುಸಿ ಓದುತ್ತಿರುವ ಹುಡುಗ (PUC Boy) ಹಾಗೂ ಎಸ್ಎಸ್ಎಲ್ಸಿ ಹುಡುಗಿ (SSLC Girl) ಯ ಪ್ರೇಮ ಪ್ರಸಂಗವೊಂದು ಪೊಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿದೂರು ದಾಖಲಾಗುವ ಮಟ್ಟಕ್ಕೆ ಬಂದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ (Mudigere) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುಡುಗ ಮುಸ್ಲಿಂ ಹಾಗೂ ಹುಡುಗಿ ಹಿಂದೂ ಆಗಿದ್ದು, ಲವ್ ಜಿಹಾದ್ (Love Jihad) ಆರೋಪ ಕೇಳಿ ಬಂದಿದೆ. ಹುಡುಗಿಯಿಂದ ಹುಡುಗ ನಮಾಜ್ ಕೂಡ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಹುಡುಗ ಹಾಗೂ ಹುಡುಗಿ ಮೂಡಿಗೆರೆ ಪಟ್ಟಣಕ್ಕೆ ಓದಲು ಬರುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ಇದು ಲವ್ ಜಿಹಾದ್ ಎಂದು ಆರೋಪಿಸಿ ಅಪ್ರಾಪ್ತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಅಪ್ರಾಪ್ತ ಯುವಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೂರು ನೀಡಿದ್ದು, ಹಿಂದೂ ಸಂಘಟನೆ ಕಾರ್ಯಕರ್ತ ಸುದೇವ್ ಸೇರಿ ಮೂವರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ವಿಚಾರ ಮೂಡಿಗೆರೆ ಪಟ್ಣಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣಕ್ಕೆ ಕಾರಣವಾಗಿದೆ. ಇತ್ತ ಅಪ್ರಾಪ್ತ ಬಾಲಕಿಯ ತಂದೆ ಕೂಡ ಅಪ್ರಾಪ್ತ ಪ್ರೇಮಿ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತರ ನಡುವಿನ ಸಂಬಂಧವಾಗಿರುವುದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಘಟನೆ ಸಂಬಂಧ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.
Love Jihad: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ಡ್ ವಿವಾಹ, ಲವ್ ಜಿಹಾದ್ ಆರೋಪ, ಹೆತ್ತವರ ದೂರು
ವಿದ್ಯಾರ್ಥಿನಿಯಿಂದ ರಂಜಾನ್ ಉಪವಾಸ, ನಮಾಜ್!
ವಿದ್ಯಾರ್ಥಿನಿ, ಆತ ಹೇಳಿದ ಎಂದು ದೇವಸ್ಥಾನಕ್ಕೂ ಹೋಗದೇ ಮನೆಯಲ್ಲೇ ಉಪವಾಸವಿದ್ದು ರಂಜಾನ್ (Ramzan) ಆಚರಿಸಿ, ನಮಾಜ್ (Namaz) ಮಾಡುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈಗ ಹುಡುಗಿಯ ಪೋಷಕರು ಹಿಂದೂ ಸಂಘಟನೆ ಕಾರ್ಯಕರ್ತರ ಬಳಿ ಈ ವಿಚಾರ ಹೇಳಿಕೊಂಡಿದ್ದಾರೆ.
10ನೇ ತರಗತಿ ವಿದ್ಯಾರ್ಥಿನಿ ಪ್ರಿಯಕರ ಹೇಳಿದ ಎಂದು ಮನೆಯಲ್ಲಿ ಒಂದು ತಿಂಗಳು ರಂಜಾನ್ ವೇಳೆ ಉಪವಾಸ ಮಾಡಿದ್ದಾಳೆ. ಪ್ರತಿದಿನ ಮನೆಯಲ್ಲಿ ನಮಾಜ್ ಮಾಡುತ್ತಿದ್ದಳು. ಪೋಷಕರು ದೇವಸ್ಥಾನಕ್ಕೆ ಕರೆದರೆ ಹೋಗದೆ ಮನೆಯಲ್ಲಿ ನಮಾಜ್ ಮಾಡುತ್ತಿದ್ದಳು. ಬಾಲಕಿಗೆ ಆತ ಮದುವೆಗೂ ಮುನ್ನವೇ ಮತಾಂತರವಾಗಬೇಕು ಎಂದು ತಾಕೀತು ಮಾಡಿದ್ದ. ನಾನು ಹೇಳಿದಂತೆ ನೀನು ಕೇಳಬೇಕು, ಇಲ್ಲವಾದರೆ ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಬಾಲಕಿಗೆ ಹೆದರಿಸಿದ್ದನಂತೆ. ಬಾಲಕಿ ತಂದೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಆಕೆಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಎಲ್ಲಾ ವಿಚಾರವನ್ನು ಸಂಘಟನೆಯವರ ಬಳಿ ಹೇಳಿಕೊಂಡಿದ್ದರು.
ಇದೀಗ ಹುಡುಗನ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಆತ ಇನ್ಸ್ಟಾಗ್ರಾಮ್ನಲ್ಲಿ ನನ್ನನ್ನ ಯಾರು ಏನು ಮಾಡಲು ಆಗುವುದಿಲ್ಲ ಎಂದು ಪೋಸ್ಟ್ ಹಾಕಿದ್ದಾನೆ. ಕೂಡಲೇ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.