ನವದೆಹಲಿ: ಕಾಕ್ರೋಚ್ ಜನತಾ ಪಕ್ಷಕ್ಕೆ (Cockroach Janata Party) ಸೇರಲು ಮೊಬೈಲ್ ಗೆ ಬರುವ ಯಾವುದೇ ಲಿಂಕ್ (CJP scam) ಅನ್ನು ತೆರೆಯಬೇಡಿ. ಇದು ಹಣ ದೋಚಲು ಮಾಡಿರುವ ಬಹುದೊಡ್ಡ ಸಂಚು ಎಂದು ಪಂಜಾಬ್ ಪೊಲೀಸರು (Punjab police) ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗಷ್ಟೇ ಹುಟ್ಟಿ ಜನಪ್ರಿಯತೆ ಪಡೆದ ಈ ಪಕ್ಷದ ಹೆಸರಿನಲ್ಲಿ ವಂಚಕರು ಫೋನ್ ಹ್ಯಾಕ್ ಮಾಡಿ ಹಣವನ್ನು ಮೋಸದಿಂದ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂತಹ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಶನಿವಾರ ಹೇಳಿಕೆ ನೀಡಿರುವ ಪೊಲೀಸರು, ಸಾಮಾಜಿಕ ಮಾಧ್ಯಮಗಳ ಮೂಲಕ ಬಹುದೊಡ್ಡ ಪಕ್ಷವಾಗಿ ಗುರುತಿಸಿಕೊಂಡ ಕಾಕ್ರೋಚ್ ಜನತಾ ಪಕ್ಷದ ಹೆಸರಿನಲ್ಲಿ ಈಗ ವಂಚಕರು ಹಣ ಲೂಟಿ ಮಾಡುವ ಸಂಚು ರೂಪಿಸಿದ್ದಾರೆ. ಜನರ ಮೊಬೈಲ್ ಫೋನ್ಗಳನ್ನು ಹ್ಯಾಕ್ ಮಾಡಿ, ಹಣ ಪಡೆಯಲು ಮಾಹಿತಿ ಕದಿಯಲು ವಾಟ್ಸ್ ಆಪ್ ನಲ್ಲಿ ಫಿಶಿಂಗ್ ಲಿಂಕ್ಗಳನ್ನು ಕಳುಹಿಸುತ್ತಿದ್ದಾರೆ. ಪಕ್ಷದ ಜನಪ್ರಿಯತೆಯನ್ನು ವಂಚನೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾಕ್ರೋಚ್ ಜನತಾ ಪಕ್ಷದ ಹೆಸರಿನಲ್ಲಿ ಬರುವ ಲಿಂಕ್ ಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಯಾವುದೇ ಕಾರಣಕ್ಕೂ ಸದಸ್ಯತ್ವ ನೀಡುವುದಾಗಿ ಹೇಳಿಕೊಳ್ಳುವ ಲಿಂಕ್ಗಳನ್ನು ತೆರೆಯಬೇಡಿ ಎಂದು ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗದ ಕುರಿತಾಗಿ ಹೇಳಿಕೆ ನೀಡಿದ ಬಳಿಕ ಸಾಮಾಜಿಕ ವಿಮಾಧ್ಯಮಗಳಲ್ಲಿ ವಿಡಂಬನಾತ್ಮಕ ಚಳುವಳಿಯಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಕಾಕ್ರೋಚ್ ಜನತಾ ಪಕ್ಷವು ಹುಟ್ಟಿಕೊಂಡಿತ್ತು. ಇದರಲ್ಲಿ ಫಾಲೋವರ್ಸ್ ಗಳ ಸಂಖ್ಯೆ ಆಶ್ಚರ್ಯಕರ ರೀತಿಯಲ್ಲಿ ಏರಿಕೆಯಾಗಿ ವಿಶ್ವದ ಗಮನವನ್ನು ಸೆಳೆದಿತ್ತು. ಇದರ ಫಾಲೋವರ್ಸ್ ಗಳ ದೇಶದ ಅತೀ ದೊಡ್ಡ ಪಕ್ಷವಾದ ಬಿಜೆಪಿ ಅನುಯಾಯಿಗಳ ಸಂಖ್ಯೆಯನ್ನು ಮೀರಿಸಿತ್ತು. ಇದನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ವಂಚಕರು ಈಗ ವಾಟ್ಸ್ ಆಪ್ ನಲ್ಲಿ ವಂಚನೆಯ ನಕಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಹಲವು ಮಂದಿ ವಂಚನೆಗೊಳಗಾಗಿದ್ದರಿಂದ ಈ ಎಚ್ಚರಿಕೆ ನೀಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕಾಕ್ರೋಚ್ ಪಕ್ಷದ ಹೆಸರಿನಲ್ಲಿ ಬರುವ ಲಿಂಕ್ ಗಳ ಮೂಲಕ ಫೋನ್ ಅನ್ನು ಹ್ಯಾಕ್ ಮಾಡಲಾಗುತ್ತದೆ. ಅಂತಹ ನಕಲಿ ಲಿಂಕ್ಗಳ ಮೇಲೆ ಕ್ಲಿಕ್ಮಾಡಬೇಡಿ. ಜಾಗರೂಕರಾಗಿರಿ ಎಂದು ಪಂಜಾಬ್ ನ ಲುಧಿಯಾನ ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ವೇದಿಕೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಲುಧಿಯಾನದ ಪೊಲೀಸ್ ಅಧಿಕಾರಿಯೊಬ್ಬರು, ಅನೇಕರು ಕಾಕ್ರೋಚ್ ಜನತಾ ಪಕ್ಷ ಸೇರಲು ಉತ್ಸಾಹ ತೋರಿಸಿದ್ದಾರೆ.ಇದನ್ನು ಸ್ಕ್ಯಾಮರ್ಗಳು ಬಳಸಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ಮೂಲಕ ಫಿಶಿಂಗ್ ಲಿಂಕ್ಗಳನ್ನು ಕಳುಹಿಸುತ್ತಿದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿದರೆ ಬ್ಯಾಂಕ್ ವಿವರಗಳು ವಂಚಕರ ಕೈ ಸೇರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಕಾಕ್ರೋಚ್ ಜನತಾ ಪಕ್ಷವನ್ನು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ಸ್ಥಾಪಿಸಿದರು. ಅವರು ಈ ಹಿಂದೆ ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. ವಾರದ ಹಿಂದೆ ಸ್ಥಾಪನೆಯಾದ ಈ ಪಕ್ಷ ಇನ್ಸ್ಟಾಗ್ರಾಮ್ನಲ್ಲಿ 20 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ.
ಎಕ್ಸ್ನಲ್ಲಿನ ಅದರ ಖಾತೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಇದು ಡಿಜಿಟಲ್ ಹಕ್ಕುಗಳ ಗುಂಪು ಇಂಟರ್ನೆಟ್ ಫ್ರೀಡಂ ಫೌಂಡೇಶನ್ನಿಂದ ಟೀಕೆಗೆ ಗುರಿಯಾಗಿದೆ. ಸಿಜೆಪಿಯ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಅದರ ವೆಬ್ಸೈಟ್ ಅನ್ನು ತೆಗೆದುಹಾಕಲಾಗಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಪಂಕಜ್ ಅತುಲ್ಕರ್, ಅಭಿಜೀತ್ ದೀಪ್ಕೆ ಅವರಿಗೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅವರ ನಿವಾಸಕ್ಕೆ ರಕ್ಷಣೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಅವರ ನಿವಾಸಕ್ಕೆ ದಿನದ 24 ಗಂಟೆಗಳ ಕಾಲ ಸಾಮಾನ್ಯ ಪೊಲೀಸ್ ರಕ್ಷಣೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.