ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬಿದ್ದಿದ್ದು, ಜೂನ್ 18 ರಂದು (Pune Murder Case) ಲೋಹಗಡ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಅವರನ್ನು ಕೊಲ್ಲುವ ಮೊದಲು ಸಿಯಾ ಗೋಯಲ್ ಮತ್ತು ಆಕೆಯ ಗೆಳೆಯ ಚೇತನ್ ಚೌಧರಿ ಅವರನ್ನು ಕೊಲ್ಲಲು ಆನ್ಲೈನ್ನಲ್ಲಿ ಮಾರ್ಗಗಳನ್ನು ಹುಡುಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯಲ್ಲಿ ಆರೋಪಿಗಳ ಮೊಬೈಲ್ ಹಾಗೂ ಸರ್ಚಿಂಗ್ ಹಿಸ್ಟರಿ ಪರಿಶೀಲಿಸಿದಾಗ ಈ ಸತ್ಯ ಬೆಳಕಿಗೆ ಬಂದಿದೆ.
ಈ ವರ್ಷದ ಜನವರಿಯಿಂದ ಜೂನ್ ವರೆಗೆ ಇಬ್ಬರ ನಡುವೆ ವಿನಿಮಯವಾದ 2,004 ಕರೆಗಳ ದಾಖಲೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿದರು. ವಿಶ್ಲೇಷಣೆಯು ಅವರು ಆರು ತಿಂಗಳ ಅವಧಿಯಲ್ಲಿ ಪರಸ್ಪರ ಮಾತನಾಡುತ್ತಾ ಒಟ್ಟು 238 ಗಂಟೆಗಳ ಕಾಲ ಕಳೆದಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ಕೊಲೆಯನ್ನು ಮೊದಲೇ ಯೋಜಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಇಬ್ಬರೂ ನಿಯಮಿತ ಕರೆಗಳು, ವಾಟ್ಸಾಪ್ ಕರೆಗಳು ಮತ್ತು ಫೇಸ್ಟೈಮ್ ಮೂಲಕ ಸಂವಹನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. "ಘಟನೆಯ ದಿನ, ಗೋಯಲ್ ಮತ್ತು ಚೌಧರಿ ಲೋಹಗಡ್ ಕೋಟೆಗೆ ಹೋಗುವ ಮೊದಲು ಕೆಫೆಯೊಂದರಲ್ಲಿ ಭೇಟಿಯಾಗಿ ಅಗರ್ವಾಲ್ ಅವರನ್ನು ಹತ್ಯೆ ಮಾಡುವ ಯೋಜನೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಪೊಲೀಸರು ತಿಳಿಸಿದ್ದಾರೆ. "ಇಬ್ಬರ ನಡುವೆ ದೀರ್ಘಾವಧಿಯವರೆಗೆ ಸಾವಿರಾರು ಕರೆಗಳು ವಿನಿಮಯವಾಗಿರುವುದು ಕಂಡುಬಂದಿದೆ, ಇದರಲ್ಲಿ ಗಂಟೆಗಟ್ಟಲೆ ನಡೆದ ಹಲವಾರು ಸಂಭಾಷಣೆಗಳು ಸೇರಿವೆ" ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾವೀ ಪತಿಯನ್ನು ಕೊಲ್ಲುವ ಮುನ್ನ ಇನ್ಸ್ಟಾಗ್ರಾಂ ಪೋಸ್ಟ್; ಉದ್ಯಮಿ ಕೊಲೆ ನಡೆದಿದ್ದೇಗೆ?
ಚೇತನ್ ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು, ಅಲ್ಲಿ ಸಿಯಾ ಅವರ ಕುಟುಂಬ ವ್ಯವಹಾರವಿದೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಜೂನ್ 16 ಮತ್ತು 17 ರಂದು ಕೊಲೆ ಯೋಜನೆಯನ್ನು ಇಬ್ಬರು ಅಂತಿಮಗೊಳಿಸಿದ್ದರು. ಪೊಲೀಸರ ಪ್ರಕಾರ ಮೇ 31 ರಂದೇ ಮೊದಲ ಕೊಲೆ ಯತ್ನ ನಡೆದಿತ್ತು. ನಂತರ ಜೂನ್ 14 ರಂದು ಸಿಯಾ ಕೋಟೆಯ ಮೇಲಿಂದ ತಳ್ಳಿದಾಗ ಕೇತನ್ ಪೊದೆಯನ್ನು ಹಿಡಿದು ಬದುಕುಳಿದಿದ್ದ. ಆಗ ಸಿಯಾ, ಹಾವಿನಿಂದ ನಿನ್ನನ್ನು ರಕ್ಷಿಸಲು ತಳ್ಳಿದೆ ಎಂದು ನಂಬಿಸಿದ್ದಳು. ಕೊನೆಗೂ ಜೂನ್ 18 ರಂದು ಪ್ರಿಯಕರ ಚೇತನ್ ಜೊತೆ ಸೇರಿ ಆಕೆಯನ್ನು ಕಂದಕಕ್ಕೆ ತಳ್ಳಿದ್ದಾಳೆ.