ಜೈಪುರ: ಹವಾನಿಯಂತ್ರಿತ ಕೊಠಡಿಯೊಂದರಲ್ಲಿ ನಾಲ್ಕು ತಿಂಗಳ ಮಗುವಿನ ಶವವೊಂದು ಪತ್ತೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆಘಾತಕಾರಿ ಸಂಗತಿ ಎಂದರೆ ಆ ಮಗುವನ್ನು ಹೆತ್ತ ತಾಯಿಯೇ ಕತ್ತು ಹಿಸುಕಿ ಕೊಂದಿದ್ದಾಳೆ ಎನ್ನಲಾಗಿದೆ. ಮನೆಯಲ್ಲಿ ಮಲಗಿದ್ದ ನಾಲ್ಕು ತಿಂಗಳ ಹೆಣ್ಣು ಮಗುವೊಂದು ನಾಪತ್ತೆಯಾದ ಘಟನೆ ನಡೆದಿತ್ತು. ಕೊನೆಗೆ ರಾಜಸ್ಥಾನದ ಜೈಪುರದಲ್ಲಿರುವ (Jaipur) ಸುಭಾಷ್ ನಗರದ ಬಹುಮಹಡಿ ಮನೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ತಾಯಿ ನೇಹಾ ಗೋಯಲ್ಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆ ವಿವರ
ನಾಲ್ಕು ತಿಂಗಳ ಹಸುಗೂಸು ಮಾಹಿ ಮಧ್ಯಾಹ್ನ ಇದ್ದಕ್ಕಿದ್ದಂತೆ ತನ್ನ ಹಾಸಿಗೆಯಿಂದ ಕಾಣೆಯಾಗಿದ್ದಳು. ಆಕೆಯ ತಾಯಿ ನೇಹಾ ಗೋಯಲ್, ಮಗುವಿಗೆ ಹಾಲುಣಿಸಿದ ಗಂಟೆಗಳ ನಂತರ, ಸಂಜೆ 4 ಗಂಟೆ ಸುಮಾರಿಗೆ ಮಗು ಕಾಣೆಯಾಗಿದೆ ಎಂಬುದನ್ನು ಕುಟುಂಬಸ್ಥರು ಗಮನಿಸಿದ್ದಾರೆ. ಕುಟುಂಬ ಸದಸ್ಯರು ಮನೆಯಲ್ಲೆಲ್ಲಾ ಹುಡುಕಿದ್ದಾರೆ. ಕೊನೆಗೆ ನೇಹಾಳ ಅತ್ತಿಗೆ ಮಾಹಿಯನ್ನು ಕಂಡುಹಿಡಿದಿದ್ದಾರೆ. ಹವಾನಿಯಂತ್ರಣ ಕೊಠಡಿಯೊಳಗೆ ಕೆಂಪು ಕಂಬಳಿಯಲ್ಲಿ ಮಗುವನ್ನು ಸುತ್ತಿಡಲಾಗಿತ್ತು. ಮಗುವಿನ ಕುತ್ತಿಗೆಯ ಮೇಲೆ ಗಾಯಗಳು ಕಂಡುಬಂದಿದ್ದು, ಮಾಹಿ ಮೇಲೆ ಹಿಂಸಾತ್ಮಕ ಕೃತ್ಯ ನಡೆದಿದೆ ಎಂಬುದನ್ನು ಇದು ಸೂಚಿಸಿದೆ. ಕುಟುಂಬವು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ.
ಈ ಆಘಾತಕಾರಿ ಘಟನೆಯಿಂದಾಗಿ ಅಧಿಕಾರಿಗಳು ಮನೆಯ ಪ್ರತಿಯೊಬ್ಬ ಸದಸ್ಯರನ್ನು, ಹಾಲಿ ಮತ್ತು ಮಾಜಿ ಸೇವಕರನ್ನು ಸೇರಿದಂತೆ ಎಲ್ಲರನ್ನೂ ಪ್ರಶ್ನಿಸಬೇಕಾಯಿತು. ತನಿಖೆಯು 13 ದಿನಗಳ ಕಾಲ ನಡೆಯಿತು. ಶಿಶುವಿನ ಸಾವಿನ ಹಿಂದಿನ ಕರಾಳ ಸತ್ಯವು ತನಿಖೆಯಿಂದ ಬಹಿರಂಗಗೊಂಡಿದ್ದು, ಸಮುದಾಯವನ್ನು ದಿಗ್ಭ್ರಮೆಗೊಳಿಸಿತು. ಕುಟುಂಬಗಳಲ್ಲಿನ ಸಾಮಾಜಿಕ ಒತ್ತಡಗಳು ಮತ್ತು ಲಿಂಗ ಪಕ್ಷಪಾತಗಳ ಬಗೆಗಿನ ಗೊಂದಲದ ಪ್ರಶ್ನೆಗಳನ್ನು ಇದು ಹುಟ್ಟುಹಾಕಿತು (Viral News).
ವಿಡಿಯೊ ವೀಕ್ಷಿಸಿ:
ವಿಚಾರಣೆಯ ಸಮಯದಲ್ಲಿ, ತಾಯಿ ನೇಹಾ ಆಗಸ್ಟ್ 18 ರಂದು ರಕ್ಷಾ ಬಂಧನದ ಸಮಯದಲ್ಲಿ ಮಗು ಮಾಹಿಯನ್ನು ಕೊಲ್ಲಲು ನಿರ್ಧರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಏಕೆಂದರೆ ಮಗನಿಲ್ಲದೆ ತನ್ನ ಕುಟುಂಬ ಅಪೂರ್ಣವಾಗುತ್ತದೆ ಎಂದು ಅವಳು ಭಾವಿಸಿದ್ದಳು. ಮರುದಿನ, ಅವಳು ತನ್ನ ಮಗಳನ್ನು ಕತ್ತು ಹಿಸುಕಲು ಪ್ರಯತ್ನಿಸಿದಳು, ಆದರೆ ವಿಫಲಳಾದಳು.
ರಕ್ಷಾ ಬಂಧನವನ್ನು ಆಚರಿಸುವಾಗ, ಅವಳು ಕುಟುಂಬದ ಇತರ ಗಂಡು ಮಕ್ಕಳನ್ನು ನೋಡಿದಳು. ತನಗೆ ಗಂಡು ಮಗುವೇ ಬೇಕಿತ್ತು ಈ ಹೆಣ್ಣು ಮಗು ಬೇಡ ಎಂದು ನಿರ್ಧರಿಸಿದಳು. ತನ್ನ ನಾಲ್ಕು ತಿಂಗಳ ಮಗಳು ಮಾಹಿಯನ್ನು ಕೊಲ್ಲುವ ನಿರ್ಧಾರ ಮಾಡಿದಳು. ಮರುದಿನ ಅವಳು ಮಾಹಿಯನ್ನು ಕತ್ತು ಹಿಸುಕಲು ಪ್ರಯತ್ನಿಸಿದಳು ಆದರೆ ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಕಷ್ಟು ಧೈರ್ಯ ಸಾಲಲಿಲ್ಲ.
ಕೊಲ್ಲು ಪ್ರಯತ್ನ ವಿಫಲವಾದರೂ ಮಗು ಮಾಹಿಗೆ ಗಂಭೀರ ನರವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಂಡವು. ಮಗುವಿನ ಅಜ್ಜ ಮತ್ತು ತಂದೆ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ನೇಹಾಳನ್ನು ಹೊರತುಪಡಿಸಿ, ಇಡೀ ಕುಟುಂಬವು ಶಿಶುವಿನ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ಅಜ್ಜ ಹಿರಿಯ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆಯಲ್ಲಿಯೇ ಇದ್ದರು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಜೈಪುರ ಉತ್ತರ) ಮೀಲ್ ಹೇಳಿದರು.
ತಾಯಿ ನೇಹಾಳು ಮಾಹಿ ಜೊತೆ ಭಾವನಾತ್ಮಕ ಬಾಂಧವ್ಯವನ್ನು ತೋರಿಸಲಿಲ್ಲ. ಆಕೆಯ ದೈನಂದಿನ ಆರೈಕೆಯನ್ನು ಶಾಂತನು ಎಂಬ ಸೇವಕಿಗೆ ವಹಿಸಲಾಯಿತು. ಆಕೆ ಮಗುವಿನ ಮೇಲೆ ತುಂಬಾ ಬಾಂಧವ್ಯ ಬೆಳೆಸಿಕೊಂಡಿದ್ದಳು. ಸೇವಕಿ ಶಾಂತನು ಮಗುವನ್ನು ತುಂಬಾ ಹಚ್ಚಿಕೊಂಡಿದ್ದಳು. ಮಾಹಿಯ ಹತ್ಯೆಯಾಗಿದೆ ಎಂದು ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಳು, ಆಕೆಯನ್ನು ಸಂತೈಯಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಕೃಷ್ಣ ಜನ್ಮಾಷ್ಟಮಿ ಆಚರಣೆಗಳು ಮತ್ತು ಮನೆಯಲ್ಲಿನ ಗದ್ದಲದ ಲಾಭವನ್ನು ಪಡೆದುಕೊಂಡು, ನೇಹಾ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದಳು. ಮಗುವಿನ ಗಂಟಲು ಸೀಳಿ ಪಾಪಿ ತಾಯಿ ಕೊಂದೇ ಬಿಟ್ಟಳು. ತನಿಖೆ ವೇಳೆ, ನೇಹಾ ತನ್ನ ಫೋನ್ನಲ್ಲಿ ಗಂಡು ಮಗುವನ್ನು ಗರ್ಭಧರಿಸುವ ವಿಧಾನಗಳನ್ನು ಸಂಶೋಧಿಸಿದ್ದಳು. ಗಂಡು ಮಗುವಿಗೆ ಮನೆಮದ್ದುಗಳು ಮತ್ತು ಗಂಡು ಜನನಕ್ಕೆ ಔಷಧ ಮುಂತಾದ ಪದಗಳನ್ನು ಹುಡುಕುತ್ತಿದ್ದಳು ಎಂದು ಪೊಲೀಸರಿಗೆ ತಿಳಿದುಬಂದಿದೆ.
ಕೊಲೆಯಾದ 12 ದಿನಗಳ ನಂತರ ನೇಹಾಳನ್ನು ಬಂಧಿಸಲಾಯಿತು. ಕೃತ್ಯಕ್ಕೆ ಬಳಸಿಕೊಳ್ಳಲಾದ ಚಾಕುವನ್ನು ವಶಪಡಿಸಿಕೊಳ್ಳಲಾಯಿತು. ನಂತರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನೇಹಾಳನ್ನು ದೋಷಮುಕ್ತಗೊಳಿಸಿತು. ಆಕೆಯನ್ನು ಅಪರಾಧಿ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಉಲ್ಲೇಖಿಸಿತು.
ಈ ದುರಂತ ಪ್ರಕರಣವು ಲಿಂಗ ಪಕ್ಷಪಾತ ಮತ್ತು ಸಾಮಾಜಿಕ ಒತ್ತಡದ ವಿನಾಶಕಾರಿ ಪರಿಣಾಮಗಳನ್ನು ಎತ್ತಿ ತೋರಿಸಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ, ಒಬ್ಬ ತಾಯಿಯಾಗಿ ತನ್ನಿಂದ ಜನ್ಮ ಪಡೆದ ಮಗುವನ್ನು ಹತ್ಯೆ ಮಾಡಲು ಹೇಗೆ ಮನಸ್ಸು ಬಂತು? ಆಕೆಯ ಹೃದಯ ಅಷ್ಟೊಂದು ಕಠೋರವಾಯ್ತೆ ಎಂದೆಲ್ಲಾ ಚರ್ಚೆಗಳು ಶುರುವಾಗಿದೆ.
ಇದನ್ನೂ ಓದಿ: Viral News: ಗರ್ಭಿಣಿಯರಿಗೆ ಈ ರೆಸ್ಟೋರೆಂಟ್ ನೀಡುತ್ತಂತೆ ಪಾರ್ಟಿ! ಅಷ್ಟೇ ಅಲ್ಲ ಹಣವೂ ಕೊಡ್ತಾರಂತೆ!