ರಾಜಸ್ಥಾನ: ಇತ್ತೀಚೆಗೆ ರಾಜಸ್ಥಾನದಲ್ಲಿ (Rajasthan) ನಡೆದಿರುವ ನೀಟ್ ಪ್ರಶ್ನೆ ಪತ್ರಿಕೆ (NEET paper leak case) ಸೋರಿಕೆ ಸಂಬಂಧ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ. ನೀಟ್ (NEET) ಪತ್ರಿಕೆಗಾಗಿ ಅವರು ಗುರುಗ್ರಾಮ (Gurugram) ವೈದ್ಯರೊಂದಿಗೆ 30 ಲಕ್ಷ ರೂ. ಒಪ್ಪಂದ ಮಾಡಿಕೊಂಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ರಾಜಸ್ಥಾನದ ಜಾಮ್ವಾ ರಾಮಗಢದ ಇಬ್ಬರು ಸಹೋದರರಾದ ಮಂಗಿಲಾಲ್ ಮತ್ತು ದಿನೇಶ್ ಬಿವಾಲ್ ಅವರನ್ನು ಬಂಧಿಸಿದ ಮೇಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿದೆ. ಅವರಿಬ್ಬರು ಏಪ್ರಿಲ್ 26 ರಂದು ನೀಟ್-ಯುಜಿ ಪತ್ರಿಕೆಯನ್ನು 30 ಲಕ್ಷ ರೂ. ಗೆ ಖರೀದಿ ಮಾಡಿದ್ದರು ಎನ್ನುವುದನ್ನು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.
ಜೈಪುರದ ಜಾಮ್ವಾ ರಾಮಗಢದಿಂದ ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ ದೂರದಲ್ಲಿರುವ ಸಿಕಾರ್ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಂಗಿಲಾಲ್ ಮತ್ತು ದಿನೇಶ್ ಬಿವಾಲ್ ಅವರು ಪತ್ರಿಕೆಯನ್ನು ಖರೀದಿ ಮಾಡಿ ಸಿಕಾರ್ನಲ್ಲಿರುವ ಎಂಬಿಬಿಎಸ್ ಕೌನ್ಸೆಲಿಂಗ್ ಏಜೆಂಟ್ ರಾಕೇಶ್ ಕುಮಾರ್ ಮಾಂಡವಾರಿಯಾ ಅವರಿಗೆ ಮಾರಾಟ ಮಾಡಿದ್ದಾರೆ. ನಗರದ ಪ್ರಮುಖ ಕೋಚಿಂಗ್ ಸಂಸ್ಥೆಗಳ ಹೊರಗೆ ಕಾರ್ಯನಿರ್ವಹಿಸುತ್ತಿದ್ದ ರಾಕೇಶ್ ಅದನ್ನು ಸಿಕಾರ್ನ ಕೇರಳದಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗೆ 30,000 ರೂ.ಗೆ ಮಾರಾಟ ಮಾಡಿದ್ದಾನೆ. ಪರೀಕ್ಷೆಗೆ ಒಂದು ದಿನ ಮೊದಲು ವಿದ್ಯಾರ್ಥಿಯು ಸಿಕಾರ್ನಲ್ಲಿರುವ ಪಿಜಿ ಆಪರೇಟರ್ ಆಗಿರುವ ತನ್ನ ತಂದೆಗೆ ಪತ್ರಿಕೆಯನ್ನು ಕಳುಹಿಸಿದ್ದಾನೆ.
West Bengal Blection 2026: ʼಜಿರಳೆ ಮೀಸೆ ತಂತ್ರಗಾರಿಕೆʼ ಬಳಸದೆ ಬಿಜೆಪಿ ಗೆದ್ದಿದ್ದು ಬಂಗಾಳದಲ್ಲಿ ಮಾತ್ರ!
ಇದಕ್ಕೆ ಸಂಬಂಧಿಸಿ ತಂದೆಗೆ ಸಂದೇಶವನ್ನು ಕಳುಹಿಸಿರುವ ಆತ, ಅಪ್ಪಾ, ಸಿಕಾರ್ನ ಸ್ನೇಹಿತ ಇದನ್ನು ನನಗೆ ಕಳುಹಿಸಿದ್ದಾನೆ. ದಯವಿಟ್ಟು ನಿಮ್ಮ ಹಾಸ್ಟೆಲ್ನಲ್ಲಿರುವ ಹುಡುಗಿಯರಿಗೆ ಇದನ್ನು ನೀಡಿ. ನಾಳೆಯ ಪರೀಕ್ಷೆಯಲ್ಲಿ ಇದೇ ಬರುತ್ತದೆ ಎಂದು ಹೇಳಿದ್ದಾನೆ. ಆತನ ತಂದೆ ಬಳಿಕ ಅದನ್ನು ಹಾಸ್ಟೆಲ್ ಹುಡುಗಿಯರಿಗೆ ನೀಡಿದ್ದಾನೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಗುರುಗ್ರಾಮ್ ವೈದ್ಯರೊಬ್ಬರು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಗುರುಗ್ರಾಮ್ ಅಧ್ಯಕ್ಷ ಡಾ. ರಾಜೇಶ್ ಕಟಾರಿಯಾ ಅವರು ನಿರಾಕರಿಸಿದ್ದಾರೆ. ಪತ್ರಿಕೆಯನ್ನು ನಾಸಿಕ್ ಮುದ್ರಣಾಲಯದಲ್ಲಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತನಿಖಾ ಸಂಸ್ಥೆಯು ಗುರುಗ್ರಾಮ್ನ ವೈದ್ಯನ ಬಗ್ಗೆ ಹೇಳಿಕೊಂಡಿಲ್ಲ. ಇದಕ್ಕೆ ಸಂಬಂಧಿಸಿ ಯಾರೂ ಕೂಡ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ದಿನೇಶ್ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ವಿಷಯವ ಅವರಿಗೆ ಒಂದು ತಿಂಗಳ ಮೊದಲೇ ತಿಳಿದಿತ್ತು. ಅವರ ಕುಟುಂಬದ ನಾಲ್ಕು ಮಕ್ಕಳು ಕೂಡ ಕಳೆದ ವರ್ಷ ನೀಟ್ನಲ್ಲಿ ಉತ್ತೀರ್ಣರಾಗಿದ್ದರು ಎನ್ನಲಾಗಿದೆ.
ಸಿಕಾರ್ನ ವಿದ್ಯಾರ್ಥಿಗಳು ಮತ್ತು ಕೋಚಿಂಗ್ ಕಾಲೇಜು ನಿರ್ವಾಹಕರು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗುಂಪುಗಳನ್ನು ರಚಿಸಿದ್ದು, ಇದರಲ್ಲಿ ಪ್ರಶ್ನೆ ಪತ್ರಿಕೆಯನ್ನು ಹಂಚಿಕೊಳ್ಳಲಾಗಿದೆ. ನಾಸಿಕ್ ಮುದ್ರಣಾಲಯದಿಂದ ಹೊರಹೋಗಿರುವ ಪತ್ರಿಕೆಯು ಹರಿಯಾಣ ಮತ್ತು ಜಾಮ್ವಾ ರಾಮಗಢ ಮೂಲಕ ರಾಜಸ್ಥಾನದ ಸಿಕಾರ್ ತಲುಪಿ ಅಲ್ಲಿಂದ ಜಮ್ಮು ಮತ್ತು ಕಾಶ್ಮೀರ, ಬಿಹಾರ, ಕೇರಳ ಮತ್ತು ಉತ್ತರಾಖಂಡವನ್ನು ತಲುಪಿದೆ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಡೆಹ್ರಾಡೂನ್ನಲ್ಲಿ ಬಂಧನಕ್ಕೆ ಒಳಗಾಗಿರುವ ರಾಕೇಶ್ ಕುಮಾರ್ ಮಾಂಡವಾರಿಯಾ ಸುಮಾರು 700 ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಮಾರಾಟ ಮಾಡಿದ್ದಾರೆ. ಪಿಡಿಎಫ್ ಮತ್ತು ಮುದ್ರಿತ ರೂಪದಲ್ಲಿ ಪತ್ರಿಕೆಯನ್ನು ಮಾರಾಟ ಮಾಡಿರುವ ಆರೋಪದಲ್ಲಿ ಯಶ್ ಯಾದವ್ ಎಂಬವರನ್ನು ಕೂಡ ಬಂಧಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ಬಳಿಕ ಮೇ 3ರಂದು ನಡೆಯಬೇಕಾಗಿದ್ದ ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಸಮಗ್ರ ತನಿಖೆಗೆ ಆದೇಶಿಸಿ ಸಿಬಿಐ ಎಫ್ಐಆರ್ ದಾಖಲಿಸಿದೆ. ಪರೀಕ್ಷೆ ನಡೆಸಲು ಹತ್ತು ದಿನದೊಳಗೆ ಹೊಸ ದಿನಾಂಕ ನಿಗದಿಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.
ಪರೀಕ್ಷೆ ರದ್ದುಗೊಂಡಿರುವುದು ದೇಶಾದ್ಯಂತ ವೈದ್ಯಕೀಯ ಆಕಾಂಕ್ಷಿಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದ್ದೂ, ಅನೇಕರು ಪರೀಕ್ಷೆ ನಡೆಸಲು ಒತ್ತಾಯಿಸಿದರು. ಇನ್ನು ಕೆಲವರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.