ಹೈದರಾಬಾದ್, ಆ. 29: ಮನೆಯ ಪಕ್ಕದಲ್ಲಿರುವ ಬೇವಿನ ಮರಕ್ಕಾಗಿ ಎರಡೂ ಕುಟುಂಬಗಳ ನಡುವಿನ ಜಗಳ, ಹಿಂಸಾತ್ಮಕವಾಗಿ ಮಾರ್ಪಟ್ಟು, ಇಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ (Crime news). ತೆಲಂಗಾಣದ (Telangana) ಸೂರ್ಯಪೇಟೆ ಜಿಲ್ಲೆಯ ಎರ್ರಗಡ್ಡ ತಾಂಡದಲ್ಲಿ ಈ ದುರಂತ ಸಂಭವಿಸಿದೆ. ಅಲ್ಲದೆ ಮೆಲ್ಲಚೆರುವು ಸಬ್-ಇನ್ಸ್ಪೆಕ್ಟರ್ ನವೀನ್ ಕುಮಾರ್ ಗಾಯಗೊಂಡಿದ್ದಾರೆ. ಎರಡು ಕುಟುಂಬಗಳ ನಡುವಿನ ವಿವಾದ ಸುಮಾರು 25 ವರ್ಷಗಳಿಂದಲೂ ಇದೆ ಎನ್ನಲಾಗಿದೆ. ಮನೆಯ ಗಡಿಯಲ್ಲಿ ಇರುವ ಬೇವಿನ ಮರದ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಇದು ಆಗಾಗ ಜಗಳಕ್ಕೆ ಕಾರಣವಾಗುತ್ತಿತ್ತು. ಆದರೆ ಈ ಬಾರಿ ಪ್ರಾಣವನ್ನೇ ಕಸಿದಿದೆ.
ಶನಿವಾರ (ಆ. 29) ಬೆಳಗ್ಗೆ 62 ವರ್ಷದ ಮಾಂಧ ವೆಂಕಟೇಶ್ವರಲು ಯಾದವ್ ಮರ ಕಡಿಯಲು ಕಾರ್ಮಿಕರನ್ನು ಕರೆಸಿದ್ದರು. ಇದು ನೆರೆಮನೆಯವರೊಂದಿಗೆ ಜಗಳಕ್ಕೆ ಕಾರಣವಾಯಿತು. ಎರಡೂ ಕಡೆಯವರು ಕೊಡಲಿ ಮತ್ತು ಇತರ ಆಯುಧಗಳಿಂದ ಪರಸ್ಪರ ದಾಳಿ ಮಾಡಿದರು.
ಘರ್ಷಣೆಯ ಸಮಯದಲ್ಲಿ, ಭುಕ್ಯಾ ರಾಮು ಎಂಬಾತ ವೆಂಕಟೇಶ್ವರಲು ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ವೆಂಕಟೇಶ್ವರಲು ಸ್ಥಳದಲ್ಲೇ ಮೃತಪಟ್ಟರು. ಮಧ್ಯ ಪ್ರವೇಶಿಸಿದ ತನ್ನ ತಂದೆ 58 ವರ್ಷದ ಭುಕ್ಯಾ ಸೈದಾ ಅವರ ಮೇಲೂ ರಾಮು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸೈದಾ ಗಂಭೀರವಾಗಿ ಗಾಯಗೊಂಡು ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ಅಸುನೀಗಿದರು. ಬೇವಿನ ಮರದ ವಿಷಯವಾಗಿ ಇದ್ದ ಕಲಹ ಕೊನೆಯಲ್ಲಿ ಹತ್ಯೆಯಲ್ಲಿ ಅಂತ್ಯವಾಗಿದೆ.
ಸಾಕು ನಾಯಿಯೊಂದಿಗೆ ಜಗಳವಾಡಿದ ಬೀದಿ ನಾಯಿಯನ್ನು ಕೊಂದೇ ಬಿಟ್ಟ ಪಾಪಿ
ಜೋಡಿ ಹತ್ಯೆಯ ನಂತರ, ಸ್ಥಳೀಯರು ಉದ್ರೇಕಗೊಂಡು ಭುಕ್ಯಾ ರಾಮು ಮನೆಯ ಬಳಿ ಜಮಾಯಿಸಿದರು. ಮತ್ತಷ್ಟು ಹಿಂಸಾಚಾರವನ್ನು ತಡೆಯಲು ಪೊಲೀಸರು ಗ್ರಾಮಕ್ಕೆ ಧಾವಿಸಿ ಭುಕ್ಯಾ ರಾಮುವನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದರು. ಪೊಲೀಸರ ಮಧ್ಯ ಪ್ರವೇಶದ ಸಮಯದಲ್ಲಿ, ಎಸ್ಐ ನವೀನ್ ಕುಮಾರ್ ಅವರ ತಲೆಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಹುಜೂರ್ನಗರ ಪ್ರದೇಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಸದ್ಯ ಅಪರಾಧಿ ರಾಮು ಪೊಲೀಸ್ ವಶದಲ್ಲಿದ್ದಾನೆ. ಎರ್ರಗಡ್ಡ ತಾಂಡಾದಲ್ಲಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಪ್ರತೀಕಾರದ ಹಿಂಸಾಚಾರವನ್ನು ತಡೆಗಟ್ಟಲು ಭದ್ರತೆಯನ್ನು ಕಾಯ್ದುಕೊಂಡಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಸಾಕ್ಷಿಗಳನ್ನು ಪ್ರಶ್ನಿಸುವುದನ್ನು ಮತ್ತು ಘಟನಾ ಸ್ಥಳವನ್ನು ಪರಿಶೀಲಿಸುವುದನ್ನು ಮುಂದುವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.