ಚಂಡೀಗಢ, ಏ. 7: ಉತ್ತರ ಪ್ರದೇಶದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕಾರು ಅಪಘಾತವೊಂದು ಅಪಹರಣ ಪ್ರಕರಣವನ್ನು ಬಯಲಿಗೆಳೆದಿದೆ (Uttar Pradesh News). ಅಲ್ಲದೆ ಅಪಹರಣಕಾರರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ವಿಶೇಷ ಎಂದರೆ ಅಪಹರಣಕ್ಕೊಳಗಾದ ಮೂವರು ಪಾರಾಗಿದ್ದಾರೆ. ಭಾನುವಾರ (ಏಪ್ರಿಲ್ 5) ರಾತ್ರಿ ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಪೊಲೀಸರ ಸಮ್ಮುಖದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಉತ್ತರ ಪ್ರದೇಶದ ಬರೇಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಅಪಹರಣಕ್ಕೊಳಗಾಗಿದ್ದ ಗುರುಗ್ರಾಮ ಮೂಲದ ವ್ಯಕ್ತಿ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಅದಾಗ್ಯೂ ಅಪಹರಣಕ್ಕೆ ಯತ್ನಿಸಿದ ಮೂವರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಅಪಘಾತ:
ʼʼಹರಿಯಾಣದ ಗುರುಗ್ರಾಮ ಮೂಲದ ಸಂತ್ರಸ್ತರನ್ನು ಅಪಹರಿಸಿ ಬರೇಲಿ ಮೂಲಕ ಕರೆದೊಯ್ಯಲಾಗುತ್ತಿತ್ತು. ಲಖನೌ-ದೆಹಲಿ ಹೆದ್ದಾರಿಯ ಬರೇಲಿ-ರಾಂಪುರದಲ್ಲಿ ಅವರು ಪ್ರಯಾಣಿಸುತ್ತಿದ್ದ ಎಸ್ಯುವಿ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅಪಹರಣಕಾರರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಪಹರನಕಾರರ ಗುಂಪಿನ ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ವಿವರ
ಪೊಲೀಸರ ಪ್ರಕಾರ ಗುರುಗ್ರಾಮ ಮೂಲದ ಮನೋಜ್ ಮತ್ತು ಅವರ ಇಬ್ಬರು ಮಕ್ಕಳು ಅಪಹರಣಕ್ಕೊಳಗಾದವರು. ಹೊಸದಾಗಿ ಖರೀದಿಸಿದ ಬೊಲೆರೊ ವಾಹನದಲ್ಲಿ ಮನೋಜ್ ಮತ್ತು ಮಕ್ಕಳು ಪ್ರಯಾಣಿಸುತ್ತಿದ್ದರು. ಈ ವೇಳೆ ನಾಲ್ವರು ಅಪಹರಣಕಾರರು ಬಲವಂತದಿಂದ ಕಾರು ಹತ್ತಿ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಬಳಿಕ ಕಾರು ಟ್ಯಾಂಕರ್ ಗುದ್ದಿತು. ಘಟನೆಯಲ್ಲಿ ಬೊಲೆರೊ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೂವರು ಅಪಹರಣಕಾರರು ಸ್ಥಳದಲ್ಲೇ ಮೃತಪಟ್ಟಿದ್ದು, ಮನೋಜ್ ಮತ್ತು ಮಕ್ಕಳು ಪವಾಡಸದೃಶವಾಗಿ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ಮನೋಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ರಹಸ್ಯ ಭೇದಿಸಿದ ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲ್
ಮೂವರು ಸಾವು, ಓರ್ವನ ಸ್ಥಿತಿ ಗಂಭೀರ
ಮೃತರನ್ನು ಬರೇಲಿ ಮೂಲದ ಮನಮೋಹನ್, ಪಿಲಿಭಿಟ್ನ ಸಿಕಂದರ್ ಮತ್ತು ರಾಮ್ಪುರದ ವಿಶೇಷ್ ಯಾದವ್ ಎಂದು ಗುರುತಿಸಲಾಗಿದೆ. ನಾಲ್ಕನೇ ಆರೋಪಿ ಪ್ರಿನ್ಸ್ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪಹರಣಕ್ಕೆ ಕಾರಣವೇನು?
ವೈಯಕ್ತಿಕ ಕಾರಣದಿಂದ ಈ ಅಪಹರಣ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮನೋಜ್ನ ದೂರದ ಸಂಬಂಧಿ ಈ ಮನಮೋಹನ್. ಮನೋಜ್ ಕುಟುಂಬಕ್ಕೆ ಸೇರಿದ ಯುವತಿಯನ್ನು ಮನಮೋಹನ್ ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗಲೂ ಬಯಸಿದ್ದ. ಆದರೆ ಮನೋಜ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮನಮೋಹನ್ ಕೆರಳಿ ಮನೋಜ್ನನ್ನು ಅಪಹರಿಸಲು ಯತ್ನಿಸಿದ್ದ ಎನ್ನಲಾಗಿದೆ. ಅದರಂತೆ ಮನೋಜ್ ತೆರಳುತ್ತಿದ್ದ ಕಾರಿಗೆ ತನ್ನ ಸಂಗಡಿಗರೊಂದಿಗೆ ಹತ್ತಿದ್ದ.
ತನಿಖೆ ಆರಂಭ
ಅಪಘಾತದ ನಂತರ ಹಿರಿಯ ಪೊಲೀಸ್ ಅಧಿಕಾರಿ ಮನುಷ್ ಪರೀಕ್ ನೇತೃತ್ವದ ಬರೇಲಿ ಪೊಲೀಸರು ಪ್ರಕರಣವನ್ನು ಭೇದಿಸಿ ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಿದರು. ಅಪಹರಣವು ಗುರುಗ್ರಾಮ್ನಲ್ಲಿ ನಡೆದಿರುವುದರಿಂದ ಹರಿಯಾಣದ ತಂಡವೊಂದು ಬರೇಲಿಗೆ ತಲುಪಿದ್ದು, ಹೆಚ್ಚಿನ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ.
ಮತ್ತಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.