ಚಂಡೀಗಡ: ಹರಿಯಾಣದ (Haryana) ಜಿಂದ್ ಜಿಲ್ಲೆಯ 26 ವರ್ಷದ ಕಪಿಲ್ (Kapil) ಎಂಬ ಯುವಕ ಶನಿವಾರ ಕ್ಯಾಲಿಫೋರ್ನಿಯಾದ (California) ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮೂತ್ರವಿಸರ್ಜನೆ ಮಾಡುತ್ತಿರುವುದನ್ನು ಕಂಡು ತಡೆಯಲು ಮುಂದಾಗಿದ್ದಕ್ಕೆ ಗುಂಡೇಟಿಗೆ ಬಲಿಯಾಗಿದ್ದಾನೆ(Haryana Man Killed in US). ಘಟನೆಯಿಂದಾಗಿ ಕಪಿಲ್ನ ಕುಟುಂಬ ಮತ್ತು ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಕಪಿಲ್, ಬರಾಹ್ ಕಲಾನ್ ಗ್ರಾಮದ ಇಶ್ವರ್ ಎಂಬುವವರ ಮಗನಾಗಿದ್ದು, ಎರಡೂವರೆ ವರ್ಷಗಳ ಹಿಂದೆ “ಡಾಂಕಿ ರೂಟ್” ಮೂಲಕ ಯುಎಸ್ಗೆ ತೆರಳಿದ್ದ. ಸುಮಾರು 45 ಲಕ್ಷ ರೂ. ಖರ್ಚು ಮಾಡಿ ಮಗನನ್ನು ವಿದೇಶಕ್ಕೆ ಕಳುಹಿಸಿದ ಕುಟುಂಬ ಸದ್ಯ ಶೋಕದಲ್ಲಿ ಮುಳುಗಿದ್ದು, ಕಪಿಲ್ ಅಮೆರಿಕಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಶನಿವಾರ, ಕರ್ತವ್ಯದಲ್ಲಿದ್ದಾಗ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡುತ್ತಿದ್ದುದನ್ನು ಕಪಿಲ್ ತಡೆಯಲು ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಆರೋಪಿಯು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಗ್ರಾಮದ ಸರಪಂಚ್ ಸುರೇಶ್ ಕುಮಾರ್ ಗೌತಮ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ನೇಪಾಳದ ಅತಿ ದೊಡ್ಡ ಧಾರ್ಮಿಕ ಹಬ್ಬ ಇಂದ್ರ ಜಾತ್ರೆ; ಕುಮಾರಿ ದೇವತೆ ವಿಶಿಷ್ಟ ಆಚರಣೆಯೇ ಪ್ರಮುಖ ಆಕರ್ಷಣೆ
ಈ ಹಿಂದೆ ಪನಾಮಾದ ಕಾಡುಗಳ ಮೂಲಕ ಮೆಕ್ಸಿಕೋ ಗಡಿಯನ್ನು ದಾಟಿದ್ದ ಕಪಿಲ್, ಆರಂಭದಲ್ಲಿ ಬಂಧನಕ್ಕೊಳಗಾದರೂ ಕಾನೂನು ಪ್ರಕ್ರಿಯೆಯ ನಂತರ ಬಿಡುಗಡೆಯಾಗಿದ್ದ. ಆದರೀಗ ಅನ್ಯಾಯವಾಗಿ ಪ್ರಾಣ ತೆತ್ತಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.
ಕಪಿಲ್ನ ಸಾವಿನ ಸುದ್ದಿಯನ್ನು ಯುಎಸ್ನಲ್ಲಿ ವಾಸಿಸುವ ಸಂಬಂಧಿಕರೊಬ್ಬರು ಕುಟುಂಬಕ್ಕೆ ತಿಳಿಸಿದ್ದಾರೆ. ಆತನಿಗೆ ಇಬ್ಬರು ಸಹೋದರಿಯರಿದ್ದು, ಒಬ್ಬರದ್ದೂ ವಿವಾಹವಾಗಿದೆ. ಸಧ್ಯ ನಡೆದಿರುವ ಘಟನೆ ಇಡೀ ಗ್ರಾಮವನ್ನೇ ದುಃಖಕ್ಕೀಡುಮಾಡಿದೆ ಎಂದು ಸರಪಂಚ್ ಗೌತಮ್ ಹೇಳಿದ್ದಾರೆ. ಕುಟುಂಬವು ಕಪಿಲ್ನ ಶವವನ್ನು ಭಾರತಕ್ಕೆ ಕರೆತರಲು ಜಿಂದ್ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಯೋಜಿಸಿದೆ.
ಗ್ರಾಮಸ್ಥರು ಮತ್ತು ಕುಟುಂಬವು ಸರಕಾರದಿಂದ ಸಂಪೂರ್ಣ ಬೆಂಬಲವನ್ನು ಆಶಿಸುತ್ತಿದ್ದಾರೆ. “ಕಪಿಲ್ನ ಶವವನ್ನು ಶೀಘ್ರವಾಗಿ ಭಾರತಕ್ಕೆ ಕರೆತರಲು ಸಹಾಯ ಮಾಡಬೇಕೆಂದು ಒತ್ತಾಯಿಸುತ್ತೇವೆ” ಎಂದು ಸರಪಂಚ್ ತಿಳಿಸಿದ್ದಾರೆ. ಈ ಘಟನೆಯು ಯುಎಸ್ನಲ್ಲಿ ಭಾರತೀಯ ವಲಸಿಗರ ಸುರಕ್ಷತೆ ಕುರಿತು ಚರ್ಚೆಗೆ ಕಾರಣವಾಗಿದೆ.