ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಗಿರಿಕೋಟೆಯಲ್ಲಿ ಘಟನೆ
ಚಿಂತಾಮಣಿ: ಬಡ್ಡಿ ಹಣ ಕೊಡದೆ ಇರುವ ಕಾರಣಕ್ಕೆ ಗಂಡ ಹಾಗೂ ಹೆಂಡತಿ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಗಿರಿ ಕೋಟೆಯಲ್ಲಿ ನಡೆದಿದೆ.
ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯ ವಾಸಿ ಆರಿಫ್ ಪಾಷಾ ಬಿನ್ ಚೋಟು ಸಾಬ್(32ವರ್ಷ) ಚಿಂತಾಮಣಿ ಹೊರವಲಯದ ಕರಿಯ ಪಲ್ಲಿಯ ವಾಸಿ ಬಾಬಾಜಾನ್ ರವರಿಂದ 50 ಸಾವಿರ ರೂ.ಸಾಲವಾಗಿ ಪಡೆದುಕೊಂಡು ಪ್ರತಿ ತಿಂಗಳು ಅವರಿಗೆ 1800 ರೂಪಾಯಿ ಹಣವನ್ನು ಬಡ್ಡಿಯ ರೂಪದಲ್ಲಿ ಕೊಡುತ್ತಿದ್ದರು.
ಕಳೆದ ಆರು ತಿಂಗಳಿನಿಂದ ಬಡ್ಡಿ ಹಣ ನೀಡುತ್ತಿಲ್ಲ ಎಂದು ಬಾಬಾಜಾನ್ ಗುಂಪು ಕಟ್ಟಿಕೊಂಡು ಬಂದು ಆರಿಫ್ ಪಾಷಾ ರವರ ಹೆಂಡತಿ ಫರಹನಾ ತಾಜ್(29 ವರ್ಷ)ಎಂಬುವರ ಮೇಲೆ ಹಲ್ಲೆ ನಡೆಸಿ ಅಲ್ಲಿಗೆ ಬಂದ ಪತಿ ಆರಿಫ್ ಪಾಷಾ ರವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಹಲ್ಲೆಗೆ ಒಳಗಾದ ಪತಿ ಪತ್ನಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಗರ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.