ಬೆಂಗಳೂರು: ಚಾರಣಕ್ಕೆಂದು (trekking) ಹೋಗಿದ್ದ ಟೆಕ್ಕಿಯೊಬ್ಬರು ನಾಪತ್ತೆಯಾಗಿರುವ (missing) ಘಟನೆ ಬೆಂಗಳೂರಿನಲ್ಲಿ (bengaluru) ನಡೆದಿದೆ. ಬೇಗೂರು ಪ್ರದೇಶದಲ್ಲಿ ವಾಸವಾಗಿದ್ದ, ವೈಟ್ಫೀಲ್ಡ್ನಲ್ಲಿರುವ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅದ್ವೈತ್ ಉಪಾಧ್ಯಾಯ (31) ನಾಪತ್ತೆಯಾದವರು. ಅವರು ಶಿವಗಂಗೆಗೆ (shivagange) ಏಕಾಂಗಿಯಾಗಿ ಚಾರಣ ಹೋಗುವುದಾಗಿ ಸ್ನೇಹಿತರ ಬಳಿ ಹೇಳಿ ಬಂದಿದ್ದರು. ಆಗಸ್ಟ್ 7 ರಂದು ಚಾರಣ ಹೊರಟ್ಟಿದ್ದ ಅವರು ಬಳಿಕ ಬಳಿಕ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕಾರ್ಯಗಳನ್ನು ನಡೆಸುತ್ತಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಶಿವಗಂಗೆಯ ಪ್ರದೇಶದಲ್ಲಿ ಶವವೊಂದು ಪತ್ತೆಯಾದ ಬಳಿಕ ಅದ್ವೈತ್ ಉಪಾಧ್ಯಾಯ ಅವರು ಸಾವನ್ನಪ್ಪಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಹುಡುಕಾಟ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಆಗಸ್ಟ್ 7 ರಂದು ಅವರು ಏಕಾಂಗಿಯಾಗಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದಾರೆ ಎಂದು ಬುಧವಾರ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಸೀಸನ್ 2 ಹೋರಾಟ ಶೀಘ್ರದಲ್ಲೇ ಪ್ರಾರಂಭ: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಸುಳಿವು
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ್, ಅದ್ವೈತ್ ಉಪಾಧ್ಯಾಯ ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಯುತ್ತಿದೆ. ವೈಟ್ಫೀಲ್ಡ್ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಆಗಸ್ಟ್ 7ರಿಂದ ನಾಪತ್ತೆಯಾಗಿದ್ದಾರೆ. ಬೇಗೂರು ಪ್ರದೇಶದಿಂದ ಶಿವಗಂಗೆಗೆ ಏಕಾಂಗಿಯಾಗಿ ಚಾರಣ ಮಾಡಲು ಬೈಕ್ ಅನ್ನು ಬಾಡಿಗೆಗೆ ಪಡೆದು ಹೋಗಿದ್ದರು. ಬೆಟ್ಟ ಹತ್ತುವುದಕ್ಕೆ ಮೊದಲು ಅವರು ಬಾಡಿಗೆ ಬೈಕ್ ಅನ್ನು ಬೆಟ್ಟದ ತಪ್ಪಲಿನಲ್ಲಿ ಬಿಟ್ಟಿದ್ದಾರೆ. ಹತ್ತಿರದ ಸಿಸಿಟಿವಿ ದೃಶ್ಯಗಳಲ್ಲಿ ಅವರು ಬೆಟ್ಟಗಳನ್ನು ಹತ್ತುತ್ತಿರುವುದು ಕೂಡ ಕಂಡು ಬಂದಿದೆ ಎಂದು ಅವರು ಹೇಳಿದರು.
ಒಬ್ಬಂಟಿಯಾಗಿದ್ದ ಅವರನ್ನು ದರೋಡೆಕೋರರು ಅಪಹರಿಸಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಿವಗಂಗೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಶೋಧ ಕಾರ್ಯಾಚರಣೆಗಾಗಿ ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಯ 70ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಪಾಧ್ಯಾಯ ಅವರ ಮೊಬೈಲ್ ಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಟ್ಟದ ಎತ್ತರದಲ್ಲಿ ಕುಸಿತ, ಕಾಲು ಜಾರಿ ಬೀಳುವ ಅಪಾಯ ಕೂಡ ಇರುವುದರಿಂದ ಈ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಇನ್ಸ್ಪೆಕ್ಟರ್ ಬಿ. ಗೋವರ್ಧನ್, ಕೆಲವು ದಿನಗಳ ಹಿಂದೆ ಅವರು ಕೃತಕ ಬುದ್ದಿ ಮತ್ತೆಯಲ್ಲಿ ಶಿವಗಂಗೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರು. ಮೇಲಿನಿಂದ ಬಿದ್ದರೆ ಯಾವ ರೀತಿಯ ಅಪಾಯಗಳಾಗುತ್ತವೆ ಎಂಬುದು ಕೂಡ ಇದರಲ್ಲಿ ಒಂದು. ಹೀಗಾಗಿ ಇದು ತನಿಖಾ ದೃಷ್ಟಿಕೋನದಿಂದ ಮಹತ್ವದ್ದಾಗಿದೆ ಎಂದರು.
ಉಪಾಧ್ಯಾಯ ಅವರನ್ನು ಹುಡುಕಾಡಲು ಮಧ್ಯಪ್ರದೇಶ ಪೊಲೀಸರು ಕೂಡ ಕರ್ನಾಟಕ ಅಧಿಕಾರಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಕುರಿತು ನಮ್ಮೊಂದಿಗೆ ಮಾತನಾಡಿರುವ ಅವರು ಸಾಮಾಜಿಕ ಮಾಧ್ಯಮದ ಮೂಲಕ ವಿಷಯ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ತನಿಖೆಯಲ್ಲಿ ಅಗತ್ಯ ಸಹಾಯ ನೀಡುವುದಾಗಿ ಇಂದೋರ್ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ ಭರವಸೆ ನೀಡಿದ್ದಾರೆ. ಉಪಾಧ್ಯಾಯ ಅವರ ಕುಟುಂಬಕ್ಕೆ ಈವರೆಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಅವರು ಕೂಡ ಏನೂ ವಿಚಾರಣೆ ನಡೆಸಿಲ್ಲ ಎಂದು ತಿಳಿಸಿದರು.