ಲಖನೌ, ಮೇ 30: ಅದು ಒಂದೂವರೆ ವರ್ಷದ ಹಾಲುಗಲ್ಲದ ಕಂದಮ್ಮ. ಕಣ್ಣು ಪಿಳಿಪಿಳಿ ಬಿಡುತ್ತ, ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಿತ್ತು. ಜಗತ್ತಿನ ಪಾಪ, ದ್ವೇಷ ಅದ್ಯಾವುದೂ ಈ ಹಸುಳೆಗೆ ತಟ್ಟಿರಲೇ ಇಲ್ಲ. ಆದರೆ ಯಾರದೋ ತೀಟೆಗೆ ಈ ಪುಟ್ಟ ಮಗು ಬಲಿಯಾಗಿದೆ (Firozabad Horror). ತನ್ನ ಅನೈತಿಕ ಸಂಬಂಧಕ್ಕೆ ಈ ಮಗು ಅಡ್ಡಿಯಾಗಿದೆ ಎಂದು ಪಾಪಿ ಈ ಮಗುವನ್ನು ನೆಲಕ್ಕೆ ಕುಕ್ಕಿ ಕುಕ್ಕಿ ಕ್ರೂರವಾಗಿ ಕೊಂದಿದ್ದಾನೆ. ಜಗತ್ತನ್ನು ಸರಿಯಾಗಿ ನೋಡುವ ಮುನ್ನವೇ ಹಸುಳೆ ಬಾರದ ಲೋಕಕ್ಕೆ ಹೊರಟು ಹೋಗಿದೆ. ಮಗುವನ್ನು ಪಾಪಿ ನಾಲ್ಕೈದು ಬಾರಿ ಡಾಮರು ರಸ್ತೆಗೆ ಎತ್ತಿ ಎಸೆಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ (Crime News). ಸದ್ಯ ಈ ವಿಡಿಯೊ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಫಿರೋಝಾಬಾದ್ನಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಕೊಲೆಗೈದ ವ್ಯಕ್ತಿ ಈ ಬಾಲಕನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಸಂಬಂಧಕ್ಕೆ, ಮದುವೆಗೆ ಮಗು ಅಡ್ಡಿಯಾಗುತ್ತಿದೆ ಎಂದು ಕೋಪಗೊಂಡ ಭೀಕರವಾಗಿ ಕೊಲೆ ಮಾಡಿದ್ದಾನೆ. ಆತನ ಕೃತ್ಯವೆಲ್ಲ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ವಿಡಿಯೊದಲ್ಲಿ ಏನಿದೆ?
ವಿಡಿಯೊದ ಆರಂಭದಲ್ಲಿ ಮನೆಯಿಂದ ಮಗುವನ್ನು ಪಾಪಿ ಎತ್ತಿಕೊಂಡು ಬರುತ್ತಿರುವುದು ಕಂಡು ಬಂದಿದೆ. ನಿರ್ಜನ ರಸ್ತೆಗೆ ಬಂದ ಆತ ಮಗುವನ್ನು ಎತ್ತಿ ಹಲವು ಬಾರಿ ನೆಲಕ್ಕೆ ಒಗೆದಿದ್ದಾನೆ. ಹಿಂಸೆ ತಾಳಲಾರದೆ ಕೆಲವು ಹೊತ್ತಲ್ಲಿ ಮಗು ನಿಶ್ಚಲವಾಗಿದೆ. ಬಳಿಕ ಮಗುವನ್ನು ಎತ್ತಿಕೊಂಡು ಅಲ್ಲಿಂದ ತೆರಳಿ ರಸ್ತೆ ಬದಿ ಬಿಟ್ಟು ಹೊರಟು ಹೋಗಿದ್ದಾನೆ. ಸುದ್ದಿ ತಿಳಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅದು ಮೃತಪಟ್ಟಿತ್ತು ಎಂದು ವೈದ್ಯರು ಘೋಷಿಸಿದರು. ಮೃತ ಬಾಲಕನನ್ನು ಆರವ್ (ಕಲ್ಲು), ಆತನನ್ನು ಕೊಂದ ಪಾಪಿಯನ್ನು ವಿರಾಜ್ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ
ಪೊಲೀಸರ ಪ್ರಕಾರ ಈ ಬಾಲಕ ರತಿ ಮತ್ತು ಸುಮಿತ್ ದಂಪತಿಯ ಪುತ್ರ. ರತಿಗೆ ಮದುವೆಯಾಗಿದ್ದಾರೂ ವಿರಾಜ್ ಆಕೆಯನ್ನು ಪ್ರೀತಿಸುತ್ತಿದ್ದ. ಆಕೆಯನ್ನೇ ಮದುವೆಯಾಗ ಬಯಸಿದ್ದ. ಹೀಗಾಗಿ ಆತ ಈ ಸಂಬಂಧಕ್ಕೆ ಆರವ್ ಅಡ್ಡಿಯಾಗುತ್ತಿದ್ದಾನೆ ಎಂದೇ ಭಾವಿಸಿದ್ದ. ಬಾಲಕನ್ನು ಕೊಲೆ ಮಾಡಲು ತಕ್ಕ ಸಮಯಕ್ಕೆ ಹೊಂಚು ಹಾಕುತ್ತಿದ್ದ. ಅಂತಹ ಅವಕಾಶ ಆತನಿಗೆ ಶುಕ್ರವಾರ (ಮೇ 30) ದೊರೆಯಿತು.
ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾದ ಸಹೋದರಿಯರು
ಶುಕ್ರವಾರ ರತಿ ಮಗನನ್ನು ಕರೆದುಕೊಂಡು ತವರು ಮನೆಗೆ ಆಗಮಿಸಿದಳು. ಆಕೆ ಬಂದಿರುವುದು ವಿರಾಜ್ಗೆ ಗೊತ್ತಾಯಿತು. ಹೀಗಾಗಿ ಅವರ ಮನೆಗೆ ಆಗಮಿಸಿದ. ಚಾಕಲೇಟ್ ಕೊಡಿಸುವ ನೆಪದಲ್ಲಿ ಆರವ್ನನ್ನು ಎತ್ತಿಕೊಂಡು ಮನೆಯಿಂದ ಹೊರ ಬಂದವನೇ ಸುತ್ತಮುತ್ತ ಯಾರೂ ಇಲ್ಲ ಎನ್ನುವುದನ್ನು ಖಚಿತಪಡಿಸಿ ಬಲವಾಗಿ ರಸ್ತೆಗೆ ಒಗೆದಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡ ಬಾಲಕನ್ನು ರಸ್ತೆ ಬದಿ ಬಿಟ್ಟು ಹೊರಟು ಹೋಗಿದ್ದಾನೆ. ಘಟನೆ ತಿಳಿದು ಧಾವಿಸಿ ಬಂದ ಮನೆಯವರು ಗಾಯಗೊಂಡ ಬಾಲಕನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಆ ಕಂದಮ್ಮ ನರಳಿ ನರಳಿ ಪ್ರಾಣ ಬಿಟ್ಟಿತು. ಸದ್ಯ ತಲೆ ಮರೆಸಿಕೊಂಡಿರುವ ವಿರಾಜ್ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.