ನಾಗಪುರ: ಪಬ್ಗೆ ಗುಟ್ಕಾ ಪ್ಯಾಕೆಟ್ ತೆಗೆದುಕೊಂಡು ಹೋಗುವುದನ್ನು ತಡೆದಿದ್ದರಿಂದ ‘ಅವಮಾನ’ ಅನುಭವಿಸಿದ ವ್ಯಕ್ತಿಯೊಬ್ಬ ಅದೇ ರಾತ್ರಿ ಸ್ನೇಹಿತನೊಂದಿಗೆ ಮರಳಿ ಬಂದು ಪಬ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಾಗಪುರದಲ್ಲಿ ನಡೆದಿದೆ. ಶಿವಾಜಿನಗರದಲ್ಲಿರುವ ದಿ ಕೆಫೆ ಬ್ಯಾರೆಲ್ನಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಬೆಂಕಿ ಅವಘಡ ಎಂದು ಶಂಕಿಸಲಾಗಿದ್ದರೂ, ಪೊಲೀಸರ ತನಿಖೆಯಲ್ಲಿ ಇದು ಉದ್ದೇಶಪೂರ್ವಕವಾಗಿ ನಡೆಸಿದ ಬೆಂಕಿ ಹಚ್ಚುವ ಕೃತ್ಯ ಎಂಬುದು ಬೆಳಕಿಗೆ ಬಂದಿದೆ. ಆರೋಪಿಯನ್ನು ನಾಗಪುರದ ಜಯಪ್ರಕಾಶ್ ನಗರದ ‘ಸಮೋಟಾ’ ರೆಸ್ಟೋರೆಂಟ್ ಮಾಲೀಕ ಹಾಗೂ 10 ದೇಶಗಳಲ್ಲಿ ಬಾಣಸಿಗನಾಗಿ ಕೆಲಸ ಮಾಡಿರುವ 31 ವರ್ಷದ ಮೋಹನ್ಲಾಲ್ ತಿವಾರಿ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಪಬ್ಗೆ ತೆರಳಿದ್ದ ತಿವಾರಿಯನ್ನು ಭದ್ರತಾ ಸಿಬ್ಬಂದಿ ಗುಟ್ಕಾ ಪ್ಯಾಕೆಟ್ ಹೊಂದಿದ್ದ ಕಾರಣ ಒಳಗೆ ಪ್ರವೇಶಿಸದಂತೆ ತಡೆದಿದ್ದರು. ಸ್ನೇಹಿತರ ಮುಂದೆಯೇ ಈ ಘಟನೆ ನಡೆದಿದ್ದರಿಂದ ತಿವಾರಿ ತೀವ್ರ ಅವಮಾನಕ್ಕೊಳಗಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತಿವಾರಿ ತನ್ನ ಸ್ನೇಹಿತ ಹಾಗೂ ನಗರದ ಹೋಟೆಲ್ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ 23 ವರ್ಷದ ಶುಭಂ ವಿಶ್ವಕರ್ಮನ ಸಹಾಯ ಪಡೆದಿದ್ದಾನೆ.
ಆರಂಭದಲ್ಲಿ ತನ್ನ ಉದ್ದೇಶವನ್ನು ತಿಳಿಸದೆ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ತಿವಾರಿ, ಪಬ್ ಸಮೀಪಕ್ಕೆ ಬಂದ ಬಳಿಕ ಬೆಂಕಿ ಹಚ್ಚುವ ಯೋಜನೆಯನ್ನು ತಿಳಿಸಿದ್ದಾನೆ. ಇಬ್ಬರೂ ಪಬ್ನ ಒಂದು ಭಾಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಅವರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಿಂದ ಪಬ್ಗೆ ಸುಮಾರು 9 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಪಬ್ ಮಾಲೀಕ ಹರೀಶ್ ಗವಾಯಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಇಬ್ಬರು ಆರೋಪಿಗಳು ಪಬ್ಗೆ ಪ್ರವೇಶಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅಂಬಾಝರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜೇಶ್ ಲೋಹಿ ತಿಳಿಸಿದ್ದಾರೆ.