ನವದೆಹಲಿ, ಮಾ. 9: ನವದೆಹಲಿಯ (New Delhi) ಸಾಕೇತ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ (Saket District Court Complex) ಬಳಿ ಭಾನುವಾರ ಸಂಜೆ ಮಣಿಪುರ (Manipur) ಮೂಲದ ಯುವತಿಯೊಬ್ಬರ ಮೇಲೆ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಯುವತಿಯು ತನ್ನ ಸ್ನೇಹಿತರೊಂದಿಗೆ ಉದ್ಯಾನವನದಲ್ಲಿ ಸಂಜೆ ವಿಹರಿಸುತ್ತಿದ್ದಾಗ, ಅಲ್ಲಿಗೆ ಬಂದ ಅಪರಿಚಿತ ಪುರುಷರ ಗುಂಪು ಅವರ ಬಗ್ಗೆ ಅತ್ಯಂತ ಅಸಭ್ಯ ಮತ್ತು ಅವಹೇಳನಕಾರಿ ಕಮೆಂಟ್ಗಳನ್ನು ಮಾಡಿದೆ. ಈ ಅಸಭ್ಯ ವರ್ತನೆಯನ್ನು ಯುವತಿಯು ಧೈರ್ಯದಿಂದ ಎದುರಿಸದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ವೇಳೆ ಆ ಪುರುಷರ ಗುಂಪು ಯುವತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಯುವತಿಯನ್ನು ತಕ್ಷಣವೇ ವೈದ್ಯಕೀಯ ಪರೀಕ್ಷೆ ಮತ್ತು ತುರ್ತು ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ವೈದ್ಯಕೀಯ ವರದಿಗಳ ಪ್ರಕಾರ ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ. ದೆಹಲಿ ಪೊಲೀಸರು ಈಗಾಗಲೇ ಸಂತ್ರಸ್ತೆಯನ್ನು ಸಂಪರ್ಕಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದೇ ವೇಳೆ, ಫೆಬ್ರವರಿ 25 ರಂದು ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯವಾಗಿ ನಿಂದಿಸಿ, ಕ್ರಿಮಿನಲ್ ಬೆದರಿಕೆ ಹಾಕಿದ್ದ ಆರೋಪದ ಮೇಲೆ ದಂಪತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಫೆಬ್ರವರಿ 20 ರಂದು ನಡೆದ ಈ ಘಟನೆಯಲ್ಲಿ, ಬಾಡಿಗೆಗೆ ವಾಸವಿದ್ದ ಈ ಮಹಿಳೆಯರಿಗೆ ದಂಪತಿಗಳು ಮಾನಸಿಕ ಕಿರುಕುಳ ಮತ್ತು ತೀವ್ರ ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಬೆಂಗಳೂರಿನಲ್ಲಿಅತ್ಯಾಚಾರ ದಂಧೆ, ಡ್ರಗ್ಸ್ ನೀಡಿ 19 ಕಾಲೇಜು ಯುವತಿಯರ ಮೇಲೆ ದೌರ್ಜನ್ಯ
ಪ್ರಸ್ತುತ ಈ ಎರಡೂ ಪ್ರಕರಣಗಳ ತನಿಖೆಯನ್ನು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ACP) ದರ್ಜೆಯ ಅಧಿಕಾರಿ ನಡೆಸುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಇದರ ಸಂಪೂರ್ಣ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರಂಭದಲ್ಲಿ, ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಮಾತು (ಬಿಎನ್ಎಸ್ ಸೆಕ್ಷನ್ 79), ಕ್ರಿಮಿನಲ್ ಬೆದರಿಕೆ (ಸೆಕ್ಷನ್ 351-2), ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದನೆ (ಸೆಕ್ಷನ್ 196) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಈಶಾನ್ಯ ರಾಜ್ಯಗಳ ಜನರ ಸುರಕ್ಷತೆಗಾಗಿ ಪೊಲೀಸರು ಈಗ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ.