ಭೋಪಾಲ್, ಫೆ. 14: 24 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳ ಬೆತ್ತಲೆ, ಕೊಳೆತ ದೇಹವು ಆಕೆಯ ಸಹಪಾಠಿಯ ಬಾಡಿಗೆ ಮನೆಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ (Madhya Pradesh) ಇಂದೋರ್ನಲ್ಲಿ ಬೆಳಕಿಗೆ ಬಂದಿದೆ. ಮೃತದೇಹದ ಕುತ್ತಿಗೆಯಲ್ಲಿ ಹಗ್ಗದ ಗುರುತುಗಳಿದ್ದು, ಆಕೆಯನ್ನು ಕತ್ತು ಹಿಸುಕಿ ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ (Crime News).
ಕೊಲೆಗೂ ಮುನ್ನ ಕಾಲೇಜು ವಾಟ್ಸ್ಆ್ಯಪ್ ಗ್ರೂಪ್ಗೆ ವಿದ್ಯಾರ್ಥಿನಿಯ ಫೋನ್ ಸಂಖ್ಯೆಯಿಂದ ಅನುಚಿತ ವಿಡಿಯೊವೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ ಆಕೆಯ ಮುಖ ಕಾಣುತ್ತಿತ್ತು. ಆದರೆ ಇನ್ನೊಬ್ಬ ವ್ಯಕ್ತಿಯ ಮುಖವನ್ನು ಎಮೋಜಿಗಳಿಂದ ಮುಚ್ಚಲಾಗಿತ್ತು. ವಿಡಿಯೊದಲ್ಲಿರುವ ಇನ್ನೊಬ್ಬ ವ್ಯಕ್ತಿಯು, ಶವವಾಗಿ ಪತ್ತೆಯಾದ ಯುವತಿಯ ಸಹಪಾಠಿಯಾಗಿದ್ದು, ಅವನು ಆಕೆಯ ಗೆಳೆಯನೂ ಆಗಿದ್ದ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸದ್ಯ ಆತ ನಾಪತ್ತೆಯಾಗಿದ್ದಾನೆ.
ಸನ್ವರ್ ರಸ್ತೆಯಲ್ಲಿರುವ ಸಂಸ್ಥೆಯೊಂದರಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿಯಾಗಿದ್ದ ಯುವತಿಯು, ತನ್ನ ತಂದೆಯೊಂದಿಗೆ ತನ್ನ ಜನನ ಪ್ರಮಾಣಪತ್ರವನ್ನು ಸರಿಪಡಿಸಲು ಹೋಗಿದ್ದಳು. ಆ ಸಂಜೆ ತನ್ನ ಸಹಪಾಠಿ ಪಿಯೂಷ್ ಧನೋಟಿಯಾ ಜತೆ ಹುಟ್ಟುಹಬ್ಬದ ಪಾರ್ಟಿಗೆ ತೆರಳುವುದಾಗಿ ಮನೆಯವರಿಗೆ ಹೇಳಿದ್ದಾಳೆ. ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿಯೂ ತಿಳಿಸಿದ್ದರು. ಆದರೆ ಅವಳು ಹಿಂತಿರುಗಲಿಲ್ಲ.
ಇನ್ಸ್ಟಾಗ್ರಾಂನಲ್ಲಿ ಶುರುವಾದ ಪ್ರೇಮ ಕೊಲೆಯಲ್ಲಿ ಅಂತ್ಯ; ಯುವತಿಯನ್ನು ಕೊಂದ ಎರಡು ಮಕ್ಕಳ ತಂದೆ
ಅದೇ ರಾತ್ರಿ ಆಕೆಯ ಆಕ್ಷೇಪಾರ್ಹ ವಿಡಿಯೊವನ್ನು ಕಾಲೇಜಿನ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಂಚಿಕೊಳ್ಳಲಾಯಿತು. ಕೂಡಲೇ ಕಾಲೇಜು ಆಡಳಿತ ಮಂಡಳಿಯು ವಿಡಿಯೊವನ್ನು ಡಿಲೀಟ್ ಮಾಡಿತು. ಜತೆಗೆ ಆಕೆಯ ತಂದೆಗೆ ವಿಷಯ ತಿಳಿಸಿತು. ಅವರು ವಿಡಿಯೊ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಹೇಳಿದರು. ಅಲ್ಲದೆ ಅವರ ಮಗಳ ಫೋನ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿದರು.
ನಂತರ ಕುಟುಂಬವು ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿತು. ಪದೇ ಪದೆ ಮನವಿ ಮಾಡಿದರೂ ಪೊಲೀಸರು ತಮ್ಮ ಮಗಳನ್ನು ಹುಡುಕಲು ಕಾಳಜಿ ತೋರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ದ್ವಾರಕಾಪುರಿ ಪ್ರದೇಶದ ಅಂಕಲ್ ಗಾಲಿಯಲ್ಲಿರುವ ಪಿಯೂಷ್ ಧನೋಟಿಯಾ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಹೊರಗಿನಿಂದ ಬೀಗ ಹಾಕಿದ್ದರಿಂದ ಪೊಲೀಸರು ವಾಪಸ್ ಆಗಿದ್ದರು.
ಫೆಬ್ರವರಿ 13 ಅಂಕಲ್ ಗಾಲಿಯ ನಿವಾಸಿಗಳು ಧನೋಟಿಯಾ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದರು. ಪೊಲೀಸರು ಅಲ್ಲಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ 24 ವರ್ಷದ ಯುವತಿಯ ಬೆತ್ತಲೆ ದೇಹವು ಪತ್ತೆಯಾಗಿದೆ. ದೇಹವು ಎಷ್ಟು ಕೊಳೆತಿತ್ತು ಎಂದರೆ ತಂದೆ ತನ್ನ ಮಗಳನ್ನು ಅವಳ ಸಾಕ್ಸ್ನಿಂದ ಗುರುತಿಸಿದರು.
ಕೊರಿಯನ್ ಗೇಮ್ ಗೀಳಿಗೆ ಧಾರವಾಡದಲ್ಲಿ ಯುವಕ ಬಲಿ
ಕುತ್ತಿಗೆಯ ಸುತ್ತ ಹಗ್ಗದ ಗುರುತುಗಳು ಕಂಡುಬಂದಿದ್ದು, ಆಕೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಆಕೆ ಕಾಣೆಯಾದ ದಿನವೇ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಧನೋಟಿಯಾ ಕೊಲೆಯ ಪ್ರಮುಖ ಶಂಕಿತ ವ್ಯಕ್ತಿಯಾಗಿದ್ದು, ಮಂಗಳವಾರ (ಫೆಬ್ರವರಿ 11) ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧನೋಟಿಯಾ ಮೂಲತಃ ಮಂದ್ಸೌರ್ನವನಾಗಿದ್ದು, ಅವನ ತಂದೆ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಈತ ಎಂಬಿಎ ಓದಲು ಇಂದೋರ್ಗೆ ತೆರಳಿದ್ದ.
ಧನೋಟಿಯಾ ತನ್ನ ಮಗಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿ, ಬ್ಲ್ಯಾಕ್ಮೇಲ್ ಮಾಡಿ, ಕೊನೆಗೆ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಸದ್ಯ, ಆತನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಧನೋಟಿಯಾಗಾಗಿ ಹುಡುಕಾಟ ಆರಂಭಿಸಿದ್ದಾರೆ.