Murder Case: ಕೋಲಾರದಲ್ಲಿ ಹೇಯ ಕೃತ್ಯ, 80ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ
ಆರೋಪಿ ಕೊಲೆ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಅಲ್ಲೇನಾಗಿದೆ ಎಂದು ನೋಡಲು ವಾಪಸ್ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಹದಿನೈದು ಸಾವಿರ ರೂ ಹಣವನ್ನು ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯ ಸಿಸಿಟಿವಿ ದೃಶ್ಯ

ಕೋಲಾರ: ಕೋಲಾರದಲ್ಲಿ (Kolar news) ಹೇಯ ಕೃತ್ಯ ಒಬ್ಬಾತನಿಂದ ನಡೆದಿದೆ. 80 ವರ್ಷದ ವೃದ್ಧೆಯೊಬ್ಬರನ್ನು (Senior citizen) ದುಷ್ಟನೊಬ್ಬ ಅತ್ಯಾಚಾರವೆಸಗಿ (Physically abused) ಕೊಲೆ (killed) ಮಾಡಿದ್ದು, ಆಕೆಯಲ್ಲಿದ್ದ ಹಣ ಹಾಗೂ ಒಡವೆಗಳನ್ನೂ ದೋಚಿದ್ದಾನೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದು ಚರ್ಚ್ ಹಾಗೂ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಕೊಂಡು ಒಂದೆರಡು ದಿನ ಪಟ್ಟಣದಲ್ಲೇ ಓಡಾಡಿಕೊಂಡು, ನಂತರ ಹಳ್ಳಿಗೆ ವಾಪಸ್ ಹೋಗುವವರಿದ್ದ ವೃದ್ಧೆ, ಈತನ ಪೈಶಾಚಿಕ ಕೃತ್ಯಕ್ಕೆ (murder case) ಬಲಿಯಾಗಿದ್ದಾರೆ. ಆರೋಪಿಯನ್ನು ಬಾಬ ಜಾನ್ ಎಂದು ಗುರುತಿಸಲಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿದೆ. ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದ ಮುಳಬಾಗಿಲು ರಸ್ತೆಯ ಸಂತೆ ಮೈದಾನದ ಬಳಿಯ ಗ್ಯಾರೇಜ್ ಬಳಿ ವೃದ್ದೆಯೊಬ್ಬರ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಶ್ರೀನಿವಾಸಪುರ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ವೃದ್ದೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವಿಷಯ ಮೇಲ್ನೋಟಕ್ಕೆ ತಿಳಿದು ಬಂದಿತ್ತು.
ಕೊಲೆಯಾದ ಮಹಿಳೆ ಶ್ರೀನಿವಾಸಪುರ ತಾಲ್ಲೂಕು ಹೆಚ್.ಜಿ.ಹೊಸೂರು ಗ್ರಾಮದ ಲಕ್ಷ್ಮೀದೇವಮ್ಮ(80) ಅನ್ನೋದು ತಿಳಿದು ಬಂದಿದೆ. ಲಕ್ಷ್ಮೀದೇವಮ್ಮ ಶನಿವಾರ ಶ್ರೀನಿವಾಸಪುರದಲ್ಲಿನ ಚರ್ಚ್ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಎರಡು ದಿನ ಶ್ರೀನಿವಾಸಪುರದಲ್ಲೇ ಇದ್ದು, ಸೋಮವಾರ ಸಂಜೆ ಹೆಚ್.ಜಿ.ಹೊಸೂರು ಗ್ರಾಮಕ್ಕೆ ವಾಪಸ್ಸಾಗಲು ಬಸ್ಗಾಗಿ ಕಾದು ಕುಳಿತಿದ್ದರು. ಆಗ ಅಲ್ಲಿಗೆ ಬಂದ ಆರೋಪಿ, ಗಫರ್ಖಾನ್ ಮೊಹಲ್ಲಾದ ಮುನ್ನಿಸಾಬ್ ಎಂಬವರ ಮಗ ಬಾಬ ಜಾನ್, ವೃದ್ಧೆಯನ್ನು ಹೊತ್ತೊಯ್ದು ಮೃಗದಂತೆ ವರ್ತಿಸಿ ಅತ್ಯಾಚಾರ ಮಾಡಿ ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಬ್ಯಾಗ್ನಲ್ಲಿದ್ದ ಹದಿನೈದು ಸಾವಿರ ರೂ ಹಣ ದೋಚಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಬಂದ ಶ್ರೀನಿವಾಸಪುರ ಪೊಲೀಸರು ಅಲ್ಲೇ ಇದ್ದ ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ಮಾಡಿದಾಗ ದುರುಳನ ಕೃತ್ಯ ಬಯಲಾಗಿದೆ. ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿ ಕೊಲೆ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಅಲ್ಲೇನಾಗಿದೆ ಎಂದು ನೋಡಲು ವಾಪಸ್ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಹದಿನೈದು ಸಾವಿರ ರೂ ಹಣವನ್ನು ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೊಲೆಯಾದ ವೃದ್ದೆ ಲಕ್ಷ್ಮೀದೇವಮ್ಮರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: Suhas Shetty murder case: ಸುಹಾಸ್ ಶೆಟ್ಟಿ ಕೊಲೆಯ ಮತ್ತೊಬ್ಬ ಆರೋಪಿ, ಅಬ್ದುಲ್ ರಹಿಮಾನ್ ಕೊಲೆಯ ಇಬ್ಬರು ಆರೋಪಿಗಳ ಬಂಧನ