ಬೆಂಗಳೂರು, ಡಿ.22 : ರಾಜಧಾನಿಯಲ್ಲಿ ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಹತ್ಯೆ (Rowdy Sheeter Biklu Shiva Murder case) ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು (MLA Byrathi Basavaraj) ಅವರ ಪತ್ತೆಗಾಗಿ ಸಿಐಡಿ ಪೊಲೀಸರು ಲುಕ್ಔಟ್ ನೋಟಿಸ್ (Look Out Notice) ಹೊರಡಿಸಲು ಮುಂದಾಗಿದ್ದಾರೆ.
ಬೆಳಗಾವಿ ಅಧಿವೇಶನಕ್ಕೆ ಹೋಗಿದ್ದ ಶಾಸಕ ಬೈರತಿ ಬಸವರಾಜು ಅವರು ಅಲ್ಲಿಂದಲೇ ಮಹಾರಾಷ್ಟ್ರ ಅಥವಾ ಗೋವಾಕ್ಕೆ ತೆರಳಿದ್ದು, ಅಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಐಡಿಯ 3 ತಂಡಗಳು ಅವರಿಗಾಗಿ 2-3 ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ. ಈ ಮಧ್ಯೆ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಲುಕ್ಔಟ್ ನೋಟಿಸ್ ಹೊರಡಿಸಲು ಮುಂದಾಗಿದ್ದಾರೆ.
ಎಲ್ಲ ವಿಮಾನ ನಿಲ್ದಾಣಗಳ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಲುಕ್ ಔಟ್ ನೋಟಿಸ್ ನೀಡಲು ಮುಂದಾಗಿದ್ದಾರೆ. ಜತೆಗೆ ರೈಲು ನಿಲ್ದಾಣಗಳಿಗೂ ಮಾಹಿತಿ ನೀಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಸವರಾಜು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಮಾಜಿ ಸಚಿವ ಬೈರತಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೆಆರ್ ಪುರದಲ್ಲಿರುವ ನಿವಾಸದಲ್ಲೂ ಬೈರತಿ ಬಸವರಾಜ್ ಇಲ್ಲ. ಬೆಳಗಾವಿಯಲ್ಲಿ ನಡೆದ ವಿಧಾನಸಬೆ ಅಧಿವೇಶನದಲ್ಲಿ ಮೊದಲ ವಾರ ಕಲಾಪಕ್ಕೆ ಬೈರತಿ ಬಸವರಾಜ್ ಹಾಜರಾಗಿದ್ದರು. ನಂತರ ಅಧಿವೇಶನಕ್ಕೆ ಬರದೇ ಗೈರಾಗಿದ್ದರು.
ಬಿಕ್ಲು ಶಿವ ಕೊಲೆ ಕೇಸ್ನಲ್ಲಿ ಒಳಸಂಚು ನಡೆಸಿರುವ ಆರೋಪ ಎದುರಿಸುತ್ತಿರುವ ಬೈರತಿ ಬಸವರಾಜ್, ಮೊದಲು ಪೊಲೀಸರ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿರುವುದು ಪತ್ತೆಯಾಗಿತ್ತು. ಕೊಲೆ ಕೇಸ್ನಲ್ಲಿ ಬಸವರಾಜ್ ಭಾಗಿಯಾಗಿರುವುದರ ಬಗ್ಗೆ ಸಾಕ್ಷ್ಯಗಳಿವೆ ಎಂದು ಹೈಕೋರ್ಟ್ನಲ್ಲಿ ಎಸ್ಪಿಪಿ ಜಗದೀಶ್ ವಾದಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಜಾಮೀನು ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬೈರತಿ ಬಸವರಾಜ್ ಬಂಧನ ಮಾಡಲು ಸಿಐಡಿ ಟೀಂ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣ
2025 ಜುಲೈ 15ರ ರಾತ್ರಿ ಬಿಕ್ಲು ಶಿವನನ್ನು ಹತ್ಯೆ ಮಾಡಲಾಗಿತ್ತು. ಈತನ ನಿಜವಾದ ಹೆಸರು ಶಿವಪ್ರಕಾಶ್ ಅಥವಾ ಶಿವಕುಮಾರ್, ವಯಸ್ಸು ಸುಮಾರು 40-44. ಬೆಂಗಳೂರಿನ ರೌಡಿಶೀಟರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ. ಆತನ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ 11ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 2025 ಜುಲೈ 15ರ ರಾತ್ರಿ ಬೆಂಗಳೂರಿನ ಹಲಸೂರು (ಭಾರತಿನಗರ) ಪ್ರದೇಶದ ಮಿನಿ ಅವೆನ್ಯೂ ರಸ್ತೆಯಲ್ಲಿ ಆತನ ಮನೆ ಬಳಿ 8-12 ಜನರ ಗುಂಪು ಮಾರಕ ಆಯುಧಗಳಿಂದ ಕೊಚ್ಚಿ, ಬರ್ಬರವಾಗಿ ಹತ್ಯೆ ಮಾಡಿತ್ತು. ಹತ್ಯೆ ಆತನ ತಾಯಿ ಎದುರು ನಡೆದಿದ್ದು, ದಾಳಿಯ ವಿಡಿಯೋಗಳು ಸಹ ಬಯಲಾಗಿವೆ. ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ದೂರು ಆಧರಿಸಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು.
ಇದರಲ್ಲಿ ಕೆಆರ್ ಪುರ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು A5 ಆರೋಪಿಯಾಗಿ ಹೆಸರಿಸಲಾಗಿದೆ. ಬಿಕ್ಲು ಶಿವ ಹತ್ಯೆಗೆ ಪ್ರೇರಣೆ ನೀಡಿದ ಆರೋಪ ಬೈರತಿ ಬಸವರಾಜ್ ಮೇಲಿದೆ. ಈ ಕೇಸ್ನಲ್ಲಿ ಬೈರತಿ ಬಸವರಾಜ್ ಆಪ್ತ ಜಗದೀಶ್ ಅಲಿಯಾಸ್ ಜಗ್ಗ A1 ಆಗಿದ್ದರೆ ಕಿರಣ್ ಸೇರಿದಂತೆ ಹಲವರ ಹೆಸರು ಇದೆ. ಆರಂಭದಲ್ಲಿ ಭಾರತಿನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ನಂತರ ಜುಲೈ 24ರಂದು ಸಿಐಡಿಗೆ ಕೇಸ್ ವರ್ಗಾವಣೆಯಾಗಿತ್ತು. ಜುಲೈ-ಆಗಸ್ಟ್ವರೆಗೆ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಕಿರಣ್, ವಿಮಲ್, ಪ್ರದೀಪ್, ಮದನ್, ಸ್ಯಾಮ್ಯುವೆಲ್, ಅರುಣ್, ನವೀನ್, ನರಸಿಂಹ ಮುಂತಾದವರು ಆರೆಸ್ಟ್ ಆಗಿದ್ದಾರೆ.
Byrathi Basavaraj: ಬಿಕ್ಲು ಶಿವ ಹತ್ಯೆ ಕೇಸ್ನಲ್ಲಿ ಬೈರತಿ ಬಸವರಾಜ್ಗೆ ಸಂಕಷ್ಟ, ಬಂಧನ ಭೀತಿ