ಲಖನೌ, ಜು.30: ಸರ್ಕಾರಿ ಶಾಲೆಯಲ್ಲಿ (government school) ನಡೆದ ಜಗಳದ ಸಂದರ್ಭದಲ್ಲಿ ಸಹಪಾಠಿಯೊಬ್ಬ 10 ವರ್ಷದ ವಿದ್ಯಾರ್ಥಿಯ ಕತ್ತು ಹಿಸುಕಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಯ ಸಾವಿನ ನಂತರ, ಆತನ ಕುಟುಂಬ ಮತ್ತು ಗ್ರಾಮಸ್ಥರು ಶಾಲಾ ಆವರಣದಲ್ಲಿ ಮೃತದೇಹವನ್ನಿರಿಸಿ, ಶಾಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಜುಲೈ 23 ರಂದು ಚಾರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪಹದ್ಪುರ ಸುಧ್ವರ್ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಊಟದ ವಿರಾಮದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ (ಬಿಎಸ್ಎ) ಕಮಲೇಂದ್ರ ಕುಶ್ವಾಹ ಹೇಳಿದರು. ಘಟನೆಯ ನಂತರ ವಿದ್ಯಾರ್ಥಿಗೆ ಉಸಿರಾಟದ ತೊಂದರೆ ಉಂಟಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮೃತ ಬಾಲಕ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ.
ಬಾಲಕನಿಗೆ ಆರಂಭದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಪ್ರಯಾಗ್ರಾಜ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬುಧವಾರ (ಜು.29) ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ನಿರ್ಲಕ್ಷ್ಯಕ್ಕೆ ಶಾಲೆಯ ಸಿಬ್ಬಂದಿ ಹೊಣೆಗಾರರಾಗಿದ್ದಾರೆ ಎಂದು ಚಾಯಲ್ ಬ್ಲಾಕ್ ಶಿಕ್ಷಣ ಅಧಿಕಾರಿ ಪ್ರಾಥಮಿಕವಾಗಿ ವರದಿ ಸಲ್ಲಿಸಿದ್ದಾರೆ ಎಂದು ಕುಶ್ವಾಹ ಹೇಳಿದರು.
ವರ್ತೂರು ಕ್ರಿಕೆಟ್ ಗ್ರೌಂಡ್ನಲ್ಲಿ ರುಂಡ ಪತ್ತೆ ಕೇಸ್ಗೆ ಟ್ವಿಸ್ಟ್; ಅಸಲಿ ಸತ್ಯ ಪೊಲೀಸರ ತನಿಖೆಯಲ್ಲಿ ಬಯಲು!
ವಿಚಾರಣಾ ವರದಿಯ ಆಧಾರದ ಮೇಲೆ, ಪ್ರಾಂಶುಪಾಲ ಯೋಗೇಶ್ ಸಿಂಗ್ ಮತ್ತು ಸಹಾಯಕ ಶಿಕ್ಷಕರಾದ ಉಮೇಶ್ ಸಿಂಗ್, ಪಟೇಲ್ ಮನೋಜ್ ಕುಮಾರ್ ಮಿಶ್ರಾ, ಅಸ್ಮಿತಾ ಶ್ರೀವಾಸ್ತವ, ರತ್ನಾಕರ್ ಸಿಂಗ್ ಮತ್ತು ಶಾಲಿನಿ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.
ಬಿಎಸ್ಎ ಮತ್ತಷ್ಟು ಮಾಹಿತಿ ನೀಡಿದ್ದು, ಇಬ್ಬರು ಶಿಕ್ಷಾ ಮಿತ್ರರಾದ ವಿಜಯ್ ಕುಮಾರ್ ಮತ್ತು ವಂದನಾ ಅವರನ್ನು ಮುಂದಿನ ಆದೇಶದವರೆಗೆ ಬೋಧನಾ ಕರ್ತವ್ಯಕ್ಕಾಗಿ ಮತ್ತೊಂದು ಅಭಿವೃದ್ಧಿ ಬ್ಲಾಕ್ಗೆ ನಿಯೋಜಿಸಲಾಗಿದೆ. ಸಂತ್ರಸ್ತೆಯ ಕುಟುಂಬವು ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ವಿರುದ್ಧ ದೂರು ದಾಖಲಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಚಾರಣೆ ಪೂರ್ಣಗೊಂಡ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.