ಗಾಂಧಿನಗರ: ಪತ್ನಿಯನ್ನು ಕೊಂದು ಶವದ ಮೇಲೆ ಸಿಮೆಂಟ್ ಸುರಿದು ಮರದ ಪೆಟ್ಟಿಗೆಯಲ್ಲಿಟ್ಟು ಮಣ್ಣು ಮಾಡಿದ ವ್ಯಕ್ತಿಯನ್ನು ಪೊಲೀಸರು (Murder Case) ಬಂಧಿಸಿದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಆಹಾರ ತಜ್ಞೆ ಶಿಲ್ಪಾ ಸಾಲ್ವಿ (39) ಅವರ ಕೊಳೆತ ಶವವು ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಆರೋಪಿ ವಿಶಾಲ್ ಸಾಲ್ವಿ (40), ನಾಲ್ಕು ದಿನಗಳ ಹಿಂದೆ ತನ್ನ ಪತ್ನಿ ಶಿಲ್ಪಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ತನಿಖೆ ನಡೆಸಿದಾಗ ಕೊಲೆಗಾರ ಸಿಕ್ಕಿ ಬಿದ್ದಿದ್ದಾನೆ.
ಏಪ್ರಿಲ್ 20ರಂದು ವಿಶಾಲ್ ಸಾಲ್ವಿ ಪೊಲೀಸ್ ಠಾಣೆಗೆ ಬಂದು, ಪತ್ನಿ ಕಾಣೆಯಾಗಿರೋದಾಗಿ ದೂರು ನೀಡಿದ್ದರು. ಪತ್ನಿ ಶಿಲ್ಪಾಳನ್ನು ಸ್ಮೈಮರ್ ಆಸ್ಪತ್ರೆಯಲ್ಲಿ ಡ್ರಾಪ್ ಮಾಡಿ ಬಂದಿದ್ದೇನೆ. ಆದರೆ ಅವಳು ಮರಳಿ ಮನೆಗೆ ಬಂದಿಲ್ಲ ಎಂದು ವಿಶಾಲ್ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಕಾಣೆಯಾಗಿದ್ದಾರೆ ಎಂದು ಮಿಸ್ಸಿಂಗ್ ಕಂಪ್ಲೇಂಟ್ ಕೂಡಾ ಕೊಟ್ಟಿದ್ದರು. ಗೋಡಾದರ ಪೊಲೀಸ್ ಠಾಣೆಯಲ್ಲಿ ವಿಶಾಲ್ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದು ಸಂಬಂಧಿಕರಲ್ಲಿಯೂ ಪತ್ನಿ ಕಾಣೆಯಾಗಿದ್ದಾಳೆ, ಮನೆಗೆ ಬಂದಿಲ್ಲ ಎಂದಿದ್ದರು.
ತನಿಖೆ ನಡೆಯುತ್ತಿದ್ದಾಗ ವಿಶಾಲ್ ಮತ್ತು ಶಿಲ್ಪಾ ಅವರ ಮಗನಿಗೆ ಮನೆಯಲ್ಲಿ ತನ್ನ ತಂದೆ ಬರೆದಿದ್ದ ಕೈಬರಹದ ಟಿಪ್ಪಣಿಯೊಂದು ಸಿಕ್ಕಿತ್ತು. ಅದರಲ್ಲಿ ವಿಶಾಲ್, ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಬದುಕಿಲ್ಲ ಎಂದು ಬರೆದುಕೊಂಡಿದ್ದ. ಮಗ ಈ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ ತಕ್ಷಣವೇ ವಿಶಾಲ್ನನ್ನು ತನಿಖೆಗೆ ಒಳಪಡಿಸಿದ್ದು, ಆತ ತಾನೇ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಪತ್ರದಲ್ಲಿ ಮದುವೆಯಾಗಿ ಆರಂಭದ ವರ್ಷಗಳು ತುಂಬಾನೆ ನೆಮ್ಮದಿಯಿಂದ ಕೂಡಿದ್ದವು. ನಂತರ ಶುರುವಾದ ಹಾಗೂ ಮುಂದುವರಿದಂತಹ ಕೌಟುಂಬಿಕ ಕಲಹ ನಾನು ಈ ಕೊಲೆ ಮಾಡಲು ಕಾರಣವಾಗಿದೆ. ಕಾಗ್ಜಿ ಚೌಲ್ನಲ್ಲಿರುವ ಹಳೆಯ ಮನೆಯಲ್ಲಿ ಶಿಲ್ಪಾ ಡೆಡ್ಬಾಡಿಯನ್ನು ಸೀಲ್ ಮಾಡಿದ್ದಾಗಿ ವಿಶಾಲ್ ಬರೆದಿದ್ದ.
ಫುಡ್ ಹಾಗೂ ನ್ಯೂಟ್ರಿಷನ್ನಲ್ಲಿ ಎಂಎಸ್ಸಿ ಮಾಡಿದ್ದ ಶಿಲ್ಪಾ ಅವರು ಡಯಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಕಾರ್ಪರೇಷನ್ SMIMER ವೈದ್ಯಕೀಯ ಕಾಲೇಜು ಹಾಗೂ ಹಾಸ್ಪಿಟಲ್ನಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ 13 ಹಾಗೂ 8 ವರ್ಷದ ಮಕ್ಕಳೂ ಇದ್ದಾರೆ. ಕಾಗ್ಜಿ ಚೌಲ್ನಲ್ಲಿರುವ ಮನೆಯ ಫಸ್ಟ್ ಫ್ಲೋರ್ನಲ್ಲಿ ಪೊಲೀಸರು ಪರೀಶಲನೆ ನಡೆಸಿದಾಗ, ಶಿಲ್ಪಾ ಮೃತದೇಹ ಮರದ ಬಾಕ್ಸ್ನಲ್ಲಿ ಪತ್ತೆಯಾಗಿದೆ. ಆ ದೇಹವನ್ನು ಅಲ್ಲಿಯೇ ಕಾಂಕ್ರೀಟ್ ಅಡಿಗೆ ಹಾಕಿ ಮುಚ್ಚುವ ಪ್ರಯತ್ನದಲ್ಲಿ ಶಿಲ್ಪಾ ಮೃತದೇಹದ ಮೇಲೆ ಸಿಮೆಂಟ್ ಸುರಿಯಲಾಗಿತ್ತು. ಸದ್ಯ ವಿಶಾಲ್ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.