ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ವ್ಯಾಪ್ತಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ 18 ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ಶಂಕಿತ ಉಗ್ರನನ್ನು ಪತ್ತೆ ಹಚ್ಚಿದ ಎರಡನೇ ಪ್ರಕರಣ ಇದಾಗಿದೆ. ಉತ್ತರ ಪ್ರದೇಶದ ಶಹಜಾನ್ಪುರ ಮೂಲದ ಹಾಗೂ ಹರಿಹರ ತಾಲೂಕು ಬನ್ನಿಕೋಡು ಗ್ರಾಮದಲ್ಲಿ ವಾಸವಿದ್ದ ಎನ್ನಲಾದ ಸುಹೇಲ್ (20) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಹರಿಹರ ತಾಲೂಕಿನ ಕಾರ್ಖಾನೆ ಒಂದರಲ್ಲಿ ಸುಹೇಲ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಸೂಚನೆಯ ಮೇರೆಗೆ ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದ ಪೊಲೀಸರ ತಂಡ, ಮಂಗಳವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.ದಾವಣಗೆರೆ ಹಾಗೂ ತುಮಕೂರು ನಗರಗಳಲ್ಲಿ ಜೂ.4ರಂದು ಬಂಧನಕ್ಕೊಳಗಾದ ಶಂಕಿತ ಉಗ್ರರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸುಹೇಲ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬಂಧಿತ ಸುಹೇಲ್, ವಾಟ್ಸ್ಆಪ್, ಇನ್ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಮಾಧ್ಯಮ, ಜಾಲತಾಣಗಳ ಮೂಲಕ ಪಾಕಿಸ್ತಾನದ ಕೆಲವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಶಂಕಿತ ಉಗ್ರನ ವಾಟ್ಸ್ಆಪ್ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಪತ್ತೆಯಾಗಿದೆ. ಬಂಧಿತನ ವಿಚಾರಣೆ ಪೂರ್ಣಗೊಳಿಸಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಜೌರಿಯಲ್ಲಿ ಎನ್ಕೌಂಟರ್: ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಮತ್ತೋರ್ವನಿಗಾಗಿ ಮುಂದುವರಿದ ಶೋಧ
ಜೂ.4ರಂದು ನಗರದ ಬಿಡಿ ಲೇಔಟ್ ನಿವಾಸಿಯಾಗಿದ್ದ ಜಮೀರ್ ಖಾನ್ (22) ಎಂಬ ಶಂಕಿತ ಉಗ್ರನನ್ನು ತುಮಕೂರು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ತುಮಕೂರಿನಲ್ಲಿ ಅಲ್ಲಾ ಬಕ್ಷ್ (24) ಎಂಬ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಶಂಕಿತ ಉಗ್ರರ ವಿಚಾರಣೆ ನಡೆಸಿದಾಗ ಹರಿಹರ ನಗರದಲ್ಲಿ ಅಡಗಿದ್ದ ಸುಹೇಲ್ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಬಂಧನಕ್ಕೊಳಗಾದ ಶಂಕಿತ ಉಗ್ರರ ವಿಚಾರಣೆಯನ್ನು ನಡೆಸಲಾಗುತ್ತಿದೆ.