ಲಖನೌ, ಆ. 24: ತಮಿಳುನಾಡು ಎಕ್ಸ್ಪ್ರೆಸ್ ರೈಲಿನ (Tamil Nadu Express) ಜನರಲ್ ಬೋಗಿಯಲ್ಲಿ ಕೆಂಪು ಟ್ರಾಲಿ ಬ್ಯಾಗ್ನಲ್ಲಿ ಕೊಳೆತ ಮಾನವ ದೇಹದ ಅವಶೇಷಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮೂರು ವಿಶೇಷ ಪೊಲೀಸ್ ತಂಡಗಳು ಒಡಿಶಾಗೆ ತೆರಳಿವೆ. ಉತ್ತರ ಪ್ರದೇಶದ ಆಗ್ರಾ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಆಗಸ್ಟ್ 5ರಂದು ತಮಿಳುನಾಡು ಎಕ್ಸ್ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು. ಈ ಸಂಬಂಧ ಆಗ್ರಾ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಗಾಗಿ ಚೆನ್ನೈ ಸರ್ಕಾರಿ ರೈಲ್ವೆ ಪೊಲೀಸರ ಸಹಾಯವನ್ನೂ ಪಡೆಯಲಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಮೃತದೇಹವು ಒಡಿಶಾ ಮೂಲದ 38 ವರ್ಷದ ಹಿದಾಯತ್ ನಿಶಾ ಎಂಬ ಮಹಿಳೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಅವರು ಚೆನ್ನೈ ನಗರದಲ್ಲಿ ಉದ್ಯೋಗದಲ್ಲಿದ್ದು, ನಗರದ ಹೊರವಲಯದ ಗುಡುವಾಂಚೇರಿಯಲ್ಲಿ ಆರೋಪಿಗಳೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐಫೋನ್ ಇಎಂಐ ಮಾತ್ರವಲ್ಲ...ಮಹಾರಾಷ್ಟ್ರದ ಜೆನ್ ಝೀ ಆತ್ಮಹತ್ಯೆಯ ಇನ್ನಷ್ಟು ಬೆಚ್ಚಿ ಬೀಳಿಸುವ ಅಂಶ ಬಹಿರಂಗ
ನಿಶಾ ಕಾಣೆಯಾಗಿರುವ ಕುರಿತು ಅವರ ಪುತ್ರ ದೂರು ನೀಡಿದ ಹಿನ್ನೆಲೆಯಲ್ಲಿ ಗುಡುವಾಂಚೇರಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸರ್ಕಾರಿ ರೈಲ್ವೆ ಪೊಲೀಸರು ಮತ್ತು ಆಗ್ರಾ ಪೊಲೀಸರು, ಆಗಸ್ಟ್ 3ರಂದು ಇದೇ ರೀತಿಯ ಕೆಂಪು ಟ್ರಾಲಿ ಬ್ಯಾಗ್ ಹೊತ್ತಿದ್ದ ದಂಪತಿ ತಮಿಳುನಾಡು ಎಕ್ಸ್ಪ್ರೆಸ್ ರೈಲನ್ನು ಹತ್ತಿರುವುದು ಪತ್ತೆ ಹಚ್ಚಿದರು.
ಹೆಚ್ಚಿನ ತನಿಖೆಯಲ್ಲಿ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದ ಪುರುಷ ಮತ್ತು ಮಹಿಳೆ ಗುಡುವಾಂಚೇರಿಯಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಅವರ ನಿವಾಸದಲ್ಲಿ ಶೋಧ ನಡೆಸಿದ ವೇಳೆ, ಮೃತ ಮಹಿಳೆಯ ಇನ್ನಷ್ಟು ದೇಹದ ಭಾಗಗಳನ್ನು ದೊಡ್ಡ ಕಂಟೇನರ್ನಲ್ಲಿ ಇರಿಸಲಾಗಿದ್ದ ಸ್ಥಿತಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದರು.
ಈ ಮಧ್ಯೆ, ಆರೋಪಿಗಳಾದ ಪುರುಷ ಮತ್ತು ಮಹಿಳೆ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಗುಡುವಾಂಚೇರಿ ಪೊಲೀಸರ ಅಧಿಕಾರಿಗಳನ್ನು ಒಳಗೊಂಡಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಮೊಬೈಲ್ ಫೋನ್ ಸಿಗ್ನಲ್ ಆಧರಿಸಿ ವಿಶೇಷ ಪೊಲೀಸ್ ತಂಡಗಳು ಒಡಿಶಾಗೆ ತೆರಳಿವೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.