ಹೈದರಾಬಾದ್: ಅಕ್ರಮ ಸಂಬಂಧ ಮತ್ತು ದುರಾಸೆಯಿಂದ ಪತಿಯನ್ನೇ ಸಂಚು ರೂಪಿಸಿ ಕೊಲೆ ಮಾಡಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಥಿ ಸುರೇಶ್ ಹತ್ಯೆಗೀಡಾದ ದುರ್ದೈವಿ ಆಗಿದ್ದು, ಆತನ ದುಶ್ಚಟವೇ ಆತನ ಅಂತ್ಯಕ್ಕೆ ಕಾರಣವಾಗಿದೆ. ಮಧ್ಯಮ ವರ್ಗದ ಕಥಿ ಸುರೇಶ್ ವೃತ್ತಿಯಲ್ಲಿ ಕಾರು ಚಾಲಕರಾಗಿದ್ದು, ಹೆಂಡತಿ ಹಾಗೂ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ. ಆದರೆ ದಿನ ಕಳೆದಂತೆ ಸಹವಾಸ ದೋಷ ಕಾರಣದಿಂದ ಮದ್ಯದ ವ್ಯಸನಕ್ಕೆ ಒಳಗಾಗಿದ್ದ ಎಂದು ತಿಳಿದು ಬಂದಿದ್ದು, ಕುಡಿದ ಅಮಲಿನಲ್ಲಿ ಪ್ರತಿದಿನ ಪತ್ನಿ ಮೌನಿಕಾ ಮೇಲೆ ಹಲ್ಲೆ ಮಾಡುವುದಲ್ಲದೇ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದ. ಅಷ್ಟೇ ಅಲ್ಲದೇ ಕುಟುಂಬ ಬೇಕು ಬೇಡಗಳನ್ನು ಕೇಳದೆ ಬೇಜವಾಬ್ದಾರಿಂದ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.
ಗಂಡನ ವರ್ತನೆಯಿಂದ ಬೇಸತ್ತು ಕೊಲೆಗೆ ಸಂಚು
ಸುರೇಶನ ವರ್ತನೆಯಿಂದ ಬೇಸತ್ತು ಹೋಗಿದ್ದ ಮೌನಿಕಾ ಕೂಡ ಅಡ್ಡ ದಾರಿ ಹಿಡಿದ್ದಲ್ಲದೇ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳಸಿದ್ದಳು. ಕೊನೆಗೆ ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೆ ಸಂಚು ರೂಪಿಸಿದ್ದಳು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಬೈಕ್ ನಿಲ್ಲಿಸಿದ್ದಕ್ಕೆ ಆರು ಜನರ ತಲೆಗೆ ಗಂಭೀರ ಪೆಟ್ಟು..!! : ಕ್ಷುಲ್ಲಕ ಕಾರಣಕ್ಕೆ ರಕ್ತದ ಕೋಡಿ
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಗಂಡನನ್ನು ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಮೌನಿಕಾ, ಸುರೇಶನನ್ನು ಹತ್ಯೆ ಮಾಡಲು ಯೋಚಿಸಿದಳು. ಇದಕ್ಕೆ ಆಕೆಯ ಪ್ರಿಯಕರ ಶಿವಕೃಷ್ಣನ ಸಹಾಯ ಪಡೆದಿದ್ದಳು.
ಮಟನ್ ಕರಿಯಲ್ಲಿ ವಯಾಗ್ರಾ ಮಾತ್ರೆ ಬೆರೆಸಿ ಕೊಲೆಗೆ ಯತ್ನ
ವೈದ್ಯಕೀಯ ಕ್ಷೇತ್ರದ ಅನುಭವವಿದ್ದ ಶಿವಕೃಷ್ಣನ ಸಲಹೆಯಂತೆ ಮಟನ್ ಕರಿಯಲ್ಲಿ 15 ವಯಾಗ್ರಾ ಮಾತ್ರೆಗಳನ್ನು ಬೆರೆಸಿ ಸುರೇಶನಿಗೆ ನೀಡಿ ಕೊಲೆಗೆ ಯತ್ನಿಸಿದ್ದಳು. ಆದರೆ ಆಹಾರದ ರುಚಿ ಮತ್ತು ವಾಸನೆ ಬದಲಾಗಿದ್ದನ್ನು ಗಮನಿಸಿದ ಸುರೇಶ್ ಅದನ್ನು ಸೇವಿಸದೇ ಹಾಗೇ ಬಿಟ್ಟಿದ್ದ, ಅಲ್ಲಿಗೆ ಮೌನಿಕಾಳ ಒಂದು ಪ್ಲಾನ್ ವಿಫಲವಾಗಿತು. ನಂತರ 2025ರ ಸೆಪ್ಟೆಂಬರ್ 17ರಂದು ಬಿಪಿ ಮತ್ತು ನಿದ್ರೆ ಮಾತ್ರೆಗಳನ್ನು ಮದ್ಯದಲ್ಲಿ ಬೆರೆಸಿ ಸುರೇಶ್ ಪ್ರಜ್ಞೆ ತಪ್ಪುವಂತೆ ಮಾಡಿ, ತನ್ನ ಗೆಳೆಯ ಅಜಯ್ ಹಾಗೂ ಇತರ ಸಹಚರರ ಸಹಾಯದಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ಲೈಂಗಿಕ ಕ್ರಿಯೆಯ ವೇಳೆ ಅಸ್ವಸ್ಥಗೊಂಡು ಮೃತಪಟ್ಟಂತೆ ನಾಟಕವಾಡಿ, ಸಹಜ ಸಾವು ಎಂದು ತೋರಿಸಲು ಪ್ರಯತ್ನಿಸಲಾಗಿದೆ. ಆದರೆ ಸುರೇಶ್ ಹೆಸರಿನ ಜೀವ ವಿಮಾ ಹಣ ಪಡೆಯಲು ದೂರು ದಾಖಲಿಸಿದ ಸಂದರ್ಭದಲ್ಲಿ, ಮರಣೋತ್ತರ ಪರೀಕ್ಷೆಯಲ್ಲಿ ಗಂಟಲಿನ ಗಾಯಗಳು ಪತ್ತೆಯಾಗಿದ್ದು, ಮೌನಿಕಾ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆ ಪೊಲೀಸರು ತೀವ್ರ ವಿಚಾರಣೆ ನಡೆಸಿ ಸಂಚನ್ನು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಮೌನಿಕಾ, ಆಕೆಯ ಗೆಳೆಯ ಅಜಯ್, ಸಲಹೆ ನೀಡಿದ ಶಿವಕೃಷ್ಣ ಹಾಗೂ ಸಹಚರರಾದ ಶ್ರೀಜಾ, ಸಂಧ್ಯಾ ಮತ್ತು ದೇವದಾಸ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿ, ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.