ಕಲಬುರಗಿ: ಗಣೇಶ ಮೂರ್ತಿ ನೋಡಲು ತೆರಳಿದ್ದ ಯುವಕರು ಬೈಕ್ ರೇಸಿಂಗ್ ಕಟ್ಟಿಕೊಂಡು ಸಂಚರಿಸುತ್ತಿದ್ದ ವೇಳೆ ಬೈಕ್ಗಳೇ ಪರಸ್ಪರ ಅಪಘಾತಕ್ಕೀಡಾಗಿ, ಓರ್ವ ಯುವಕ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಗರದ ಹೀರಾಪುರದ ಡಾ.ಬಿ.ಆರ್ ಅಂಬೇಡ್ಕರ್ ಮೇಲ್ಸೇತುವೆ ಬಳಿ ಸೋಮವಾರ ರಾತ್ರಿ ನಡೆದಿದೆ.
ನಗರದ ಹೊರವಲಯದ ಕೋಟನೂರ (ಡಿ) ಗ್ರಾಮದ ಪ್ರಶಾಂತ ಪೊಲೀಸ್ ಬಿರಾದಾರ ಮೃತಪಟ್ಟ ಯುವಕ. ಇದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಲಿಂಗರಾಜ್ ಪೂಜಾರಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಮುಂದಿನ 24 ಗಂಟೆಗಳ ಕಾಲ ನಿರ್ಣಾಯಕ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Chikkamagaluru Accident: ಚಿಕ್ಕಮಗಳೂರಿನ ಬಳಿ ಭೀಕರ ಅಪಘಾತ; ಸಾರಿಗೆ ಬಸ್ ಹರಿದು ಇಬ್ಬರು ಬೈಕ್ ಸವಾರರ ದುರ್ಮರಣ
ಗಣೇಶ ಮೂರ್ತಿ ವೀಕ್ಷಿಸಲು ತೆರಳಿದ್ದ ಯುವಕರು ಬೈಕ್ಗಳಲ್ಲಿ ರೇಸಿಂಗ್ ಕಟ್ಟಿಕೊಂಡು ವೇಗವಾಗಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ರೇಸ್ನಲ್ಲಿ ಭಾಗಿಯಾಗಿದ್ದ ಯುವಕರ ಬೈಕ್ಗಳೇ ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ಪ್ರಶಾಂತ ಹಾಗೂ ಲಿಂಗರಾಜ್ ಅವರ ತಲೆಗೆ ಗಂಭೀರ ಗಾಯಗಳಾಗಿ ಧಾರಾಕಾರ ರಕ್ತಸ್ರಾವವಾಗಿದೆ. ಘಟನೆಯಲ್ಲಿ ಸಚಿನ್ ಹಾಗೂ ಸಿದ್ದರಾಮ ಎಂಬ ಯುವಕರಿಗೂ ಗಾಯಗಳಾಗಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಚಾರಿ-1 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.