ಢಾಕಾ: ಬಾಂಗ್ಲಾದೇಶದಲ್ಲಿ ನಿನ್ನೆ ಚುನಾವಣೆ ನಡೆದಿದ್ದು, ಬಿಎನ್ಪಿ ಭರ್ಜರಿ ಗೆಲುವನ್ನು ಸಾಧಿಸಿದೆ. ಇದೀಗ ಗೆಲವು ಸಾಧಿಸಿದವರಲ್ಲಿ ಮೂವರು (Bangladesh Election) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದವರು ಎಂದು ತಿಳಿದು ಬಂದಿದೆ. ಅವರಲ್ಲಿ ಇಬ್ಬರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪತನದ ನಂತರದ ಮೊದಲ ರಾಷ್ಟ್ರೀಯ ಚುನಾವಣೆಯಲ್ಲಿ ಗೆದ್ದ ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ) ಮತ್ತು ಒಬ್ಬರು ಸೋತ ಜಮಾತ್-ಇ-ಇಸ್ಲಾಮಿ ಪಕ್ಷದಿಂದ ಬಂದವರು.
ಡಿಸೆಂಬರ್ 2024 ರಲ್ಲಿ, ಬಾಂಗ್ಲಾದೇಶ ಹೈಕೋರ್ಟ್ ಶೇಖ್ ಹಸೀನಾ ಅವರನ್ನು ಗುರಿಯಾಗಿಸಿಕೊಂಡು ಆಗಸ್ಟ್ 21, 2004 ರಂದು ನಡೆದ ಗ್ರೆನೇಡ್ ದಾಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ತಾರಿಕ್ ರೆಹಮಾನ್, ಲುಟ್ಫೋಝ್ಝಮಾನ್ ಬಾಬರ್ ಮತ್ತು ಇತರರನ್ನು ದೋಷಮುಕ್ತಗೊಳಿಸಿತು. ಅವರು ಕೂದಲೆಳೆ ಅಂತರದಲ್ಲಿ ಪಾರಾದರೂ, 24 ಜನರು ಸಾವನ್ನಪ್ಪಿದರು. ಲುಟ್ಫೋಝಮಾನ್ ಬಾಬರ್ ತಮ್ಮ ಪ್ರತಿಸ್ಪರ್ಧಿಯನ್ನು 1.6 ಲಕ್ಷ ಮತಗಳಿಂದ ಸೋಲಿಸಿದರು. ಗ್ರೇನೇಡ್ ದಾಳಿ ಪ್ರಕರಣದಲ್ಲಿ ಬಾಬರ್ ಖುಲಾಸೆಗೊಂಡ ಒಂದು ವರ್ಷದ ನಂತರ, ಅವರ ವಿರುದ್ಧದ ಆರೋಪಗಳು ತೆರವಾದಾಗ ಅಬ್ದುಸ್ ಸಲಾಮ್ ಪಿಂಟು ಕೂಡ ನಿರಾಳರಾದರು.
ಆದರೆ ಇಷ್ಟೇ ಅಲ್ಲ, 2006 ರಲ್ಲಿ ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯ ಆವರಣದಲ್ಲಿ, 2007 ರಲ್ಲಿ ಅಜ್ಮೀರ್ ಷರೀಫ್ ದರ್ಗಾದಲ್ಲಿ ಮತ್ತು 2011 ರಲ್ಲಿ ದೆಹಲಿಯಲ್ಲಿ ನಡೆದ ಸ್ಫೋಟಗಳು ಸೇರಿದಂತೆ ಭಾರತದಲ್ಲಿ ನಡೆದ ದಾಳಿಗಳ ಹಿಂದೆ ಪಾಕಿಸ್ತಾನದ ಭಯೋತ್ಪಾದಕ ಗುಂಪು ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ (ಹುಜಿ) ಗೆ ಪಿಂಟು ಬೆಂಬಲ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಪಿಂಟು ಕನಿಷ್ಠ ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಹೊಸ ಸರ್ಕಾರದಿಂದ ಭಾರತಕ್ಕೇನು ಲಾಭ?
ಹೊಸ ಸರ್ಕಾರದ ಈ ಬದಲಾವಣೆಯು ದಕ್ಷಿಣ ಏಷ್ಯಾ ಮತ್ತು ಅದರಾಚೆಗಿನ ಪ್ರಾದೇಶಿಕ ಭೌಗೋಳಿಕ ರಾಜಕೀಯವನ್ನು ಬದಲಾಯಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದಾಗಿ ಭಾರತವು ಈ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಹೊಸ ಸರ್ಕಾರ ಚೀನಾ ಹಾಗೂ ಪಾಕಿಸ್ತಾನದ ಜೊತೆಗೆ ಮೈತ್ರಿಯನ್ನು ತಳ್ಳಿ ಹಾಕಬಹುದು. ಶೇಕ್ ಹಸೀನಾ ಅಧಿಕಾರದಲ್ಲಿದ್ದಾಗ ವ್ಯಾಪಾರ, ಸಾರಿಗೆ, ಗಡಿ ಭದ್ರತೆ ಮತ್ತು ನೀರು ಹಂಚಿಕೆ ಒಪ್ಪಂದಗಳ ಮೇಲೆ ಕೇಂದ್ರೀಕರಿಸಿದ 'ಭಾರತ ಪರ' ಸರ್ಕಾರವನ್ನು ನಡೆಸುತ್ತಿದ್ದರು. ಇದೀಗ ರೆಹಮಾನ್ ಭಾರತದ ಹಿತಾಸಕ್ತಿಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ.