ಢಾಕಾ, ಜ. 8: ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಬಾಂಗ್ಲಾದೇಶವು (Bangladesh) ಭಾರತೀಯ ಪ್ರಜೆಗಳಿಗೆ ವೀಸಾ ನೀಡುವುದನ್ನು ಮತ್ತಷ್ಟು ನಿರ್ಬಂಧಿಸಿದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿರುವ ತನ್ನ ಕಾರ್ಯಾಚರಣೆಗಳಿಗೂ ನಿರ್ಬಂಧಗಳನ್ನು ವಿಸ್ತರಿಸಿದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಬುಧವಾರ (ಜನವರಿ 7) ರಾತ್ರಿ ಈ ನಿರ್ಧಾರವನ್ನು ದೃಢಪಡಿಸಿದೆ. ವ್ಯಾಪಾರ ಮತ್ತು ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಎಲ್ಲ ವರ್ಗದ ವೀಸಾಗಳನ್ನು ಸ್ಥಗಿತಗೊಳಿಸುವ ಆದೇಶ ಗುರುವಾರವೇ ಜಾರಿಗೆ ಬಂದಿದೆ.
ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶ ಉಪ ಹೈಕಮಿಷನ್ನಲ್ಲಿ ಕಾನ್ಸುಲರ್ ಮತ್ತು ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮುಂಬೈ ಮತ್ತು ಚೆನ್ನೈನಲ್ಲಿರುವ ತನ್ನ ಕಾರ್ಯಾಚರಣೆಗಳಲ್ಲಿ ಭಾರತೀಯರಿಗೆ ಪ್ರವಾಸಿ ಮತ್ತು ಇತರ ವೀಸಾ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.
ದೀಪು ಚಂದ್ರದಾಸ್ ಹತ್ಯೆಗೈದ ಪ್ರಮುಖ ಆರೋಪಿಯನ್ನು ಬಂಧಿಸಿದ ಬಾಂಗ್ಲಾ ಪೊಲೀಸರು
ಬಾಂಗ್ಲಾದೇಶ ಹಾಗೂ ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿಯಿರುವ ಹಿನ್ನೆಲೆಯಲ್ಲಿ ಭದ್ರತಾ ಕಾಳಜಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ. ಡಿಸೆಂಬರ್ 22ರಂದು, ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಬಳಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಅದು ಅನಿರ್ದಿಷ್ಟಾವಧಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಪ್ರತಿಭಟನೆ ಹಿನ್ನೆಲೆಯಲ್ಲಿ ತ್ರಿಪುರಾದ ಢಾಕಾದ ಸಹಾಯಕ ಹೈಕಮಿಷನ್ ಕೂಡ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬಾಂಗ್ಲಾದೇಶದ ಪರವಾಗಿ ಖಾಸಗಿ ನಿರ್ವಾಹಕರು ನೀಡುತ್ತಿದ್ದ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.
ನವದೆಹಲಿ ಮತ್ತು ಅಗರ್ತಲಾದಲ್ಲಿರುವ ರಾಯಭಾರ ಕಚೇರಿಗಳು, ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಣೆ ಹೊರಡಿಸುತ್ತ ಅನಿವಾರ್ಯ ಸಂದರ್ಭಗಳಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದವು.
ಪ್ರಮುಖ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಸಾವು ಮತ್ತು ದೀಪು ಚಂದ್ರದಾಸ್ ಎಂಬ ಹಿಂದೂ ಕಾರ್ಯಕರ್ತನ ಹತ್ಯೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ, ಭದ್ರತಾ ಕಾಳಜಿಯ ನಡುವೆ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಯಿತು.
ನವದೆಹಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರ ಕಚೇರಿಯು ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸುವ ಎರಡು ದಿನಗಳ ಮೊದಲು, ದಾಸ್ ಅವರ ಭೀಕರ ಹತ್ಯೆಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತ ಹೈಕಮಿಷನ್ ಹೊರಗೆ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು.
ಈ ಬೆಳವಣಿಗೆಗಳ ನಡುವೆ, ಢಾಕಾದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಗಳು ಮತ್ತು ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಭದ್ರತೆಯ ಮೇಲೆ ಪರಿಣಾಮ ಬೀರುವ ಉಗ್ರಗಾಮಿ ಅಂಶಗಳ ಯೋಜನೆಗಳ ಬಗ್ಗೆ ಭಾರತವು ಬಾಂಗ್ಲಾದೇಶದ ಹೈಕಮಿಷನರ್ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿ ತನ್ನ ಆಕ್ಷೇಪವನ್ನು ಸಲ್ಲಿಸಿತು. ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಿಂಸಾಚಾರದ ನಡುವೆ ಹಲವು ಹಿಂದೂಗಳು ಹತ್ಯೆಯಾಗಿದ್ದಾರೆ.