ವಾಷಿಂಗ್ಟನ್: ವಿಶ್ವದ ಯಾವುದೇ ದೇಶವಾಗಲಿ ಇರಾನ್ಗೆ (Iran war) ಸಹಾಯ ಮಾಡಲು ಮುಂದಾದರೆ ಅಮೆರಿಕದಿಂದ ಆರ್ಥಿಕ ಶಿಕ್ಷೆಗೆ (economic punishment) ಗುರಿಯಾಗಬೇಕಾದೀತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಬುಧವಾರ ಹೇಳಿಕೆ ನೀಡಿದ ಅವರು ಇರಾನ್ನ ಆರ್ಥಿಕತೆಯ ಮೇಲೆ ದಾಳಿ ನಡೆಸಲು ಒಂದು ಪ್ರಮುಖ ಹೊಸ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಕಳೆದ ಫೆಬ್ರವರಿ ತಿಂಗಳಾಂತ್ಯದಿಂದ ಪ್ರಾರಂಭವಾಗಿರುವ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಇದೀಗ ಆರನೇ ತಿಂಗಳಿಗೆ ಕಾಲಿಟ್ಟಿದ್ದು, ಯುದ್ಧ ಕೊನೆಗೊಳಿಸಲು ನಡೆಸಿರುವ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾಗಿವೆ.
ಇರಾನ್ನ ಆರ್ಥಿಕತೆ ಮೇಲೆ ದಾಳಿ ನಡೆಸಲು ಹೊಸ ಅಭಿಯಾನವನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ಲಾಮಿಕ್ ಗಣರಾಜ್ಯಕ್ಕೆ ಸಹಾಯ ಮಾಡುವ ಅಥವಾ ಅದರೊಂದಿಗೆ ಯಾವುದೇ ರೀತಿಯ ವ್ಯವಹಾರ ನಡೆಸುವ ದೇಶಗಳಿಗೆ ಗಂಭೀರ ರೀತಿಯ ಶಿಕ್ಷೆ ವಿಧಿಸಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ.
ಭಾರತೀಯ ಚುನಾವಣಾ ಮುಖ್ಯಸ್ಥರ ಪ್ರಶ್ನೆಯಿಂದಾಗಿ ಸೇವ್ ಅಮೆರಿಕ ಕಾಯ್ದೆ ನವೀಕರಣ: ಬೆಂಬಲಕ್ಕೆ ಡೊನಾಲ್ಡ್ ಟ್ರಂಪ್ ಮನವಿ
ಯಾವುದೇ ದೇಶವಾಗಲಿ ನಾನು ಅದರ ವಿರುದ್ಧ ನಿರ್ಣಯ ತೆಗೆದುಕೊಂಡರೆ ಅದು ಅತ್ಯಂತ ಕ್ರೂರವಾಗಿರುತ್ತದೆ. ಇದು ದೊಡ್ಡ ಪ್ರಮಾಣದ ಆರ್ಥಿಕ ಯುದ್ಧವಾಗುತ್ತದೆ. ಇತರರಿಂದ ಪ್ರತ್ಯೇಕ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರುತ್ ಸೋಶಿಯಲ್ನಲ್ಲಿ ಬರೆದಿದ್ದು, ಇರಾನ್ಗೆ ಯಾವುದೇ ರೀತಿಯ ಜೀವರಕ್ಷಕ ಒದಗಿಸದಿರುವಂತೆ ಎಲ್ಲಾ ದೇಶಗಳಿಗೆ ಸೂಚಿಸಿದ್ದಾರೆ. ಇರಾನ್ ನ ಹಣಕಾಸು ಸಂಸ್ಥೆಗಳು, ವ್ಯವಹಾರಗಳು, ವಿಮಾನ ನಿಲ್ದಾಣ ಅಥವಾ ಸರ್ಕಾರಿ ಘಟಕಗಳಿಗೆ ಅವಕಾಶ ನೀಡುವುದು ಮಾರಕ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಪ್ರತಿಕ್ರಿಯಿಸಿದ್ದು, ಜಗತ್ತು ಹಿಂದೆಂದೂ ನೋಡಿರದ ರೀತಿಯಲ್ಲಿ ಅಮೆರಿಕವು ಇರಾನ್ ಗೆ ಸಹಾಯ ಮಾಡುವ ದೇಶಗಳಿಗೆ ಆರ್ಥಿಕ ಪ್ರತ್ಯೇಕತೆಯ ಶಿಕ್ಷೆಯನ್ನು ವಿಧಿಸಲಿದೆ ಎಂದು ಹೇಳಿದ್ದಾರೆ.
ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷ ಪ್ರಾರಂಭವಾದ ಮೇಲೆ ಹೊರ್ಮುಜ್ ಜಲ ಮಾರ್ಗವನ್ನು ತೆರೆಯಲು ಯುಎಸ್ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಇರಾನ್ ಇಲ್ಲಿ ಮತ್ತೆ ಮತ್ತೆ ದಾಳಿ ನಡೆಸುತ್ತಿದೆ. ಹೀಗಾಗಿ ಯುಎಸ್-ಇರಾನ್ ನಡುವಿನ ಒಪ್ಪಂದ ಮಾತುಕತೆಗಳು ಯಾವುದೇ ಪರಿಣಾಮವನ್ನು ಬೀರಿಲ್ಲ.
ನಡುವೆ ಬಂದರೆ ಒಮಾನ್ ಮೇಲೆಯೂ ದಾಳಿ: ಹಾರ್ಮೊಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಖಡಕ್ ವಾರ್ನಿಂಗ್!
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಇನ್ನು ಮಾತುಕತೆ ಇಲ್ಲ. ಹೊರ್ಮುಜ್ ಜಲಸಂಧಿಯು ಹೊಸ ಯುಎಸ್ ಪ್ರದೇಶವಾಗಬಹುದು ಎಂದು ಹೇಳಿದ್ದಾರೆ. ಇದು ಸಂಘರ್ಷ ಹೊಸ ರೂಪ ಪಡೆಯುವ ಸಾಧ್ಯತೆಯ ಬಗ್ಗೆ ಅವರು ಹೇಳಿಕೊಂಡಿದ್ದಾಗಿ ಶ್ವೇತ ಭವನ ಮೂಲಗಳು ತಿಳಿಸಿವೆ.