ಇಸ್ಲಾಮಾಬಾದ್, ಜು. 7: ಭಾರತವು ಸಿಂಧೂ ನದಿ ಜಲ ಒಪ್ಪಂದವನ್ನು (Indus Waters Treaty) ಅಮಾನತಿನಲ್ಲಿಟ್ಟಿರುವ ಹಿನ್ನೆಲೆಯಲ್ಲಿ ಭಾರತ–ಪಾಕಿಸ್ತಾನ ನಡುವಿನ ನೀರಿನ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ಬೆಳವಣಿಗೆಯ ನಡುವೆ, ಪಾಕಿಸ್ತಾನದ ಸೇನೆ ದೇಶದ ʼನ್ಯಾಯಸಮ್ಮತ ನೀರಿನ ಪಾಲನ್ನುʼ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದೆ.
ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ನೇತೃತ್ವದಲ್ಲಿ ನಡೆದ 276ನೇ ಕಾರ್ಪ್ಸ್ ಕಮಾಂಡರ್ಸ್ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿದ್ದು, ಸರ್ಕಾರದ ನಿರ್ದೇಶನ ಹಾಗೂ ಜನರ ಆಶಯಕ್ಕೆ ಅನುಗುಣವಾಗಿ ಸಿಂಧೂ ನದಿ ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ಸಿಗಬೇಕಾದ ನೀರಿನ ಹಕ್ಕನ್ನು ರಕ್ಷಿಸಲು ಸೇನೆ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
2025ರ ಏಪ್ರಿಲ್ 24ರಂದು ನಡೆದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (NSC) ಸಭೆಯಲ್ಲಿ ಭಾರತವು ಸಿಂಧೂ ನದಿ ವ್ಯವಸ್ಥೆಯ ನೀರನ್ನು ತಡೆದರೆ ಅಥವಾ ಬೇರೆಡೆಗೆ ತಿರುಗಿಸಿದರೆ ಅದನ್ನು ಯುದ್ಧದ ಕ್ರಮ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಇದೇ ನಿಲುವನ್ನು ಸೇನೆಯೂ ಪುನರುಚ್ಚರಿಸಿದೆ.
ಈ ನಡುವೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಕಠಿಣ ಹೇಳಿಕೆ ನೀಡಿದ್ದಾರೆ. "ಇಂಡಸ್ ಜಲ ಒಪ್ಪಂದದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಗತ್ಯವಿದ್ದರೆ ಭಾರತದ ವಿರುದ್ಧ ಎಲ್ಲ ಹಂತಗಳಲ್ಲೂ ಹೋರಾಡಲು ಪಾಕಿಸ್ತಾನ ಸಿದ್ಧ" ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ ನಿಲ್ಲಿಸುವವರೆಗೆ ಇಂಡಸ್ ಜಲ ಒಪ್ಪಂದ ಅಮಾನತಿನಲ್ಲಿಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಭಯೋತ್ಪಾದನೆ ಮತ್ತು ಸಾಮಾನ್ಯ ದ್ವಿಪಕ್ಷೀಯ ಸಂಬಂಧಗಳು ಒಟ್ಟಿಗೆ ಸಾಗಲು ಸಾಧ್ಯವಿಲ್ಲ" ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಕೋಟಿ ಕೋಟಿ ವಂಚನೆ!
1960ರಲ್ಲಿ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಂಡಸ್ ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಡಿ ರವಿ, ಬಿಯಾಸ್ ಮತ್ತು ಸತ್ಲಜ್ ನದಿಗಳ ನೀರಿನ ಬಳಕೆಯ ಹಕ್ಕು ಭಾರತಕ್ಕಿದ್ದು, ಇಂಡಸ್, ಜೆಹ್ಲಂ ಹಾಗೂ ಚಿನಾಬ್ ನದಿಗಳ ನೀರಿನ ಬಹುಪಾಲು ಬಳಕೆಯ ಹಕ್ಕು ಪಾಕಿಸ್ತಾನಕ್ಕೆ ನೀಡಲಾಗಿದೆ. ಹಲವು ದಶಕಗಳಿಂದ ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವೆ ನೀರಿನ ಹಂಚಿಕೆಯನ್ನು ನಿಯಂತ್ರಿಸುತ್ತಿದೆ.
ಭಾರತವು ಒಪ್ಪಂದವನ್ನು ಅಮಾನತಿನಲ್ಲಿಟ್ಟ ಬಳಿಕ ಪಾಕಿಸ್ತಾನಕ್ಕೆ ಪ್ರವಾಹದ ಮುನ್ಸೂಚನೆ ಸೇರಿದಂತೆ ಕೆಲವು ತಾಂತ್ರಿಕ ಮಾಹಿತಿಯನ್ನು ಹಂಚಿಕೊಳ್ಳುವ ಕಡ್ಡಾಯವೂ ಇಲ್ಲ. ಜತೆಗೆ ಸಾವಲ್ಕೋಟ್, ರಾಟ್ಲೆ, ಬರ್ಸರ್, ಪಾಕಲ್ ದುಲ್, ಕ್ವಾರ್, ಕಿರು ಹಾಗೂ ಕಿರ್ಥೈ ಸೇರಿದಂತೆ ಜಮ್ಮು-ಕಾಶ್ಮೀರದ ಹಲವು ಜಲವಿದ್ಯುತ್ ಯೋಜನೆಗಳನ್ನು ಭಾರತ ವೇಗಗೊಳಿಸುತ್ತಿದೆ.
ಪಾಕಿಸ್ತಾನದ ಸುಮಾರು ಶೇಕಡಾ 80ರಿಂದ 90ರಷ್ಟು ಕೃಷಿ ಸಿಂಧೂ ನದಿ ನೀರಿನ ಮೇಲೆಯೇ ಅವಲಂಬಿತವಾಗಿದೆ. ದೇಶದ ಪ್ರಮುಖ ಜಲಾಶಯಗಳಾದ ಟರ್ಬೆಲಾ ಮತ್ತು ಮಂಗ್ಲಾ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಸೀಮಿತವಾಗಿರುವುದರಿಂದ, ಸಿಂಧೂ ನದಿಯ ನೀರಿನ ಹರಿವು ಪಾಕಿಸ್ತಾನದ ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಅತ್ಯಂತ ಮಹತ್ವದ್ದಾಗಿದೆ.
ಹೀಗಾಗಿ, ನೀರಿನ ಹಂಚಿಕೆ ಕುರಿತ ಈ ವಿವಾದ ಇದೀಗ ಕೇವಲ ತಾಂತ್ರಿಕ ಅಥವಾ ರಾಜತಾಂತ್ರಿಕ ವಿಷಯವಾಗಿರದೆ, ಭಾರತ–ಪಾಕಿಸ್ತಾನ ನಡುವಿನ ಪ್ರಮುಖ ಭದ್ರತಾ ಹಾಗೂ ಕಾರ್ಯತಂತ್ರದ ವಿಷಯವಾಗಿ ರೂಪುಗೊಂಡಿದೆ.