ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಗಿಯದ ಯುದ್ಧ: ಗಲ್ಫ್ ರಾಷ್ಟ್ರಗಳಿಂದ 52,000ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ; ಕೇಂದ್ರ ಸರ್ಕಾರದಿಂದ ನಿಗಾ

Middle east conflict: ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಭಾರತ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಈ ಪ್ರದೇಶದ ಭಾರತೀಯ ಪ್ರಜೆಗಳು ಸ್ಥಳೀಯ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಹಾಗೂ ಭಾರತೀಯ ರಾಯಭಾರ ಕಚೇರಿ ನೀಡುವ ಸಲಹೆಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಗಲ್ಫ್ ರಾಷ್ಟ್ರಗಳಿಂದ 52,000ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ನವದೆಹಲಿ, ಮಾ. 8: ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ (Middle east conflict) ಬೆಳವಣಿಗೆಗಳನ್ನು ಭಾರತ ಸರ್ಕಾರ (Indian Government) ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಲ್ಲಿ ಸಿಲುಕಿರುವ ಭಾರತೀಯರ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಈ ಪ್ರದೇಶದ ಭಾರತೀಯ ಪ್ರಜೆಗಳು ಸ್ಥಳೀಯ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಹಾಗೂ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ನೀಡುವ ಸಲಹೆಗಳನ್ನು ಅನುಸರಿಸಲು ಸೂಚಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಿಂದ ಉಂಟಾಗುವ ಕಳವಳಗಳನ್ನು ಪರಿಹರಿಸಲು ಪ್ರತಿಯೊಂದು ರಾಯಭಾರ ಕಚೇರಿಯು 24x7 ಸಹಾಯವಾಣಿಗಳನ್ನು ಸ್ಥಾಪಿಸಿದೆ.

ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಶೇಷ ನಿಯಂತ್ರಣ ಕೊಠಡಿಯನ್ನು (Special Control Room) ಸ್ಥಾಪಿಸಿದೆ. ಸಹಾಯವಾಣಿ ಸಂಖ್ಯೆಗಳ ವಿವರಗಳು MEA ವೆಬ್‌ಸೈಟ್‌ನಲ್ಲಿ ಲಭ್ಯ.

ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ; ಮಸೌದ್ ಪೆಜೆಶ್ಕಿಯಾನ್ ಹೇಳಿದ್ದೇನು?

ವಾಣಿಜ್ಯ ವಿಮಾನಗಳ ಪುನರಾರಂಭ

ಇತ್ತೀಚಿನ ದಿನಗಳಲ್ಲಿ ವಾಯುಪ್ರದೇಶವನ್ನು ಭಾಗಶಃ ಪುನಃ ತೆರೆದ ನಂತರ, ಭಾರತೀಯ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ನಿಗದಿತವಲ್ಲದ ಕಾರ್ಯಾಚರಣೆಗಳನ್ನು ಒಳಗೊಂಡಂತೆ ವಾಣಿಜ್ಯ ವಿಮಾನಗಳನ್ನು ಪುನರಾರಂಭಿಸಿವೆ. ಇದರಿಂದಾಗಿ ಭಾರತೀಯ ಪ್ರಯಾಣಿಕರು ಸುರಕ್ಷಿತವಾಗಿ ಮರಳಲು ಸಾಧ್ಯವಾಗಿದೆ. ಮಾರ್ಚ್ 1-7ರ ನಡುವೆ 52,000ಕ್ಕೂ ಹೆಚ್ಚು ಭಾರತೀಯರು ಕೊಲ್ಲಿಯಿಂದ ಮರಳಿದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಮಾನಗಳನ್ನು ಹಾರಾಟ ನಡೆಸಲು ಯೋಜನೆ ರೂಪಿಸಲಾಗಿದೆ.

ವಾಣಿಜ್ಯ ವಿಮಾನಗಳು ಲಭ್ಯವಿಲ್ಲದ ದೇಶಗಳಲ್ಲಿ ಭಾರತೀಯ ಪ್ರಜೆಗಳು ಆಯ್ಕೆಗಳ ಕುರಿತು ಮಾರ್ಗದರ್ಶನಕ್ಕಾಗಿ ಆಯಾ ರಾಯಭಾರ ಕಚೇರಿ ಅಥವಾ ದೂತಾವಾಸವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಕಲ್ಯಾಣವು ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು MEA ಒತ್ತಿಹೇಳಿದೆ.

7ನೇ ದಿನಕ್ಕೆ ಕಾಲಿಟ್ಟ ಇರಾನ್‌- ಇಸ್ರೇಲ್‌ ಯುದ್ಧ; ಅಬುಧಾಬಿ, ದುಬೈನಲ್ಲಿ ಭಾರೀ ಸ್ಫೋಟ

ಭಾರತೀಯ ಕೃಷಿಕರಿಗೂ ತಟ್ಟಿದ ಇರಾನ್‌ ಸಂಘರ್ಷದ ಬಿಸಿ

ಭಾರತದಿಂದ ರಫ್ತಾದ ಸುಮಾರು 4 ಲಕ್ಷ ಟನ್ ಬಾಸ್ಮತಿ ಅಕ್ಕಿ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಭಾರಿ ನಷ್ಟದ ಆತಂಕ ಎದುರಾಗಿದೆ. ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ನಡೆಸುತ್ತಿರುವ ಸಂಘರ್ಷದ ಪರಿಣಾಮ ಭೌಗೋಳಿಕ, ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಇದು ಭಾರತದ ಕೃಷಿ ರಫ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಈಗಾಗಲೇ ಬಾಸ್ಮತಿ ಅಕ್ಕಿ ವ್ಯಾಪಾರಕ್ಕೆ ಬಹುದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.

ಸಾಗಬೇಕಾದ ದಾರಿಯಲ್ಲಿ ಅನಿಶ್ಚಿತತೆ, ಯುದ್ಧ ಅಪಾಯದ ಆತಂಕ, ಹೆಚ್ಚುವರಿ ಶುಲ್ಕಗಳು, ವ್ಯಾಪಾರ ಮಾರ್ಗಗಳಲ್ಲಿ ಅಡ್ಡಿ, ಸರಕುಗಳ ಸಾಗಾಟ ಸ್ಥಗಿತ ಮೊದಲಾದ ಕಾರಣಗಳಿಂದ ವಿಶ್ವದಾದ್ಯಂತ ರಫ್ತು ಚಟುವಟಿಕೆ ನಿಧಾನವಾಗಿದೆ. ಇದರಿಂದ ಸುಮಾರು 4 ಲಕ್ಷ ಟನ್ ಭಾರತದ ಬಾಸ್ಮತಿ ಅಕ್ಕಿ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ. ಇದು ರಫ್ತುದಾರರು, ಗಿರಣಿಗಾರರು ಮತ್ತು ರೈತರಿಗೆ ಭಾರಿ ಸಂಕಷ್ಟ ತಂದೊಡ್ಡುವ ಭೀತಿಯನ್ನು ಉಂಟು ಮಾಡಿದೆ.