ನವದೆಹಲಿ: ನೇಪಾಳ ಪ್ರವಾಹದಲ್ಲಿ ಇನ್ಫೋಸಿಸ್ ಸಿಇಒ ಒಬ್ಬರು ನಾಪತ್ತೆಯಾಗಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಇನ್ಫೋಸಿಸ್, ಕಳೆದ ಶುಕ್ರವಾರ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದ ಬಳಿಕ ಐಟಿ ಸೇವೆಗಳ ಪ್ರಮುಖ ಇನ್ಫೋಸಿಸ್ನ ಅಂಗಸಂಸ್ಥೆಯಾದ ಇನ್ಫೋಸಿಸ್ ಪಬ್ಲಿಕ್ ಸರ್ವೀಸಸ್ ಸಿಇಒ ಲಕ್ಷ್ ಗೋಪಿ ಸೆಟ್ಟಿ ಅವರು ನಾಪತ್ತೆಯಾಗಿದ್ದಾರೆ. ಅವರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಇದು ತನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದೆ.
ನೇಪಾಳದಲ್ಲಿ ಶುಕ್ರವಾರ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದಲ್ಲಿ ಸುಮಾರು 586 ಮಂದಿ ಸಾವನ್ನಪ್ಪಿದ್ದು, 2,400 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ಬಳಿಕ ಹೇಳಿಕೆ ನೀಡಿರುವ ಇನ್ಫೋಸಿಸ್, ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವೀಸಸ್ನ ಮುಖ್ಯಸ್ಥ ಲಕ್ಷ್ ಗೋಪಿ ಸೆಟ್ಟಿ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.
ಪ್ರವಾಹಕ್ಕೆ 550ಕ್ಕೂ ಹೆಚ್ಚು ಮಂದಿ ಬಲಿ; 2,400 ಕ್ಕೂ ಅಧಿಕ ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ
ಅಮೆರಿಕ ಮತ್ತು ಕೆನಡಾದಲ್ಲಿ ಸಾರ್ವಜನಿಕ ವಲಯದ ಮೇಲೆ ಕೇಂದ್ರೀಕರಿಸಿ ಕಾರ್ಯನಿರ್ವಹಿಸುವ ಇನ್ಫೋಸಿಸ್ ಪಬ್ಲಿಕ್ ಸರ್ವೀಸಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗೋಪಿ ಸೆಟ್ಟಿ ಅವರು ವೈಯಕ್ತಿಕವಾಗಿ ನೇಪಾಳಕ್ಕೆ ತೆರಳಿದ್ದರು ಎಂದು ಕಂಪೆನಿ ತಿಳಿಸಿದೆ.
ಪ್ರಸ್ತುತ ಸಂಪರ್ಕದಲ್ಲಿ ಲಕ್ಷ್ ಗೋಪಿ ಸೆಟ್ಟಿ ಇಲ್ಲದೇ ಇರುವುದರಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಭಾವಿಸಲಾಗಿದೆ. ಅವರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಸಂಬಂಧಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಲಾಗುತ್ತಿದೆ. ಇನ್ಫೋಸಿಸ್ ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಿದೆ ಎಂದು ತಿಳಿಸಿದೆ.
ಯಾರು ಗೋಪಿ ಸೆಟ್ಟಿ ?
ಇನ್ಫೋಸಿಸ್ ವೆಬ್ಸೈಟ್ ಮಾಹಿತಿ ಪ್ರಕಾರ ಗೋಪಿ ಸೆಟ್ಟಿ ಅವರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕಾರ್ಯತಂತ್ರ, ತಂತ್ರಜ್ಞಾನ, ಕಾರ್ಯಾಚರಣೆ ಮತ್ತು ಏಜೆನ್ಸಿಗಳ ಧ್ಯೇಯವನ್ನು ಬೆಂಬಲಿಸಲು ಪರಿವರ್ತನೆಯ ಕುರಿತು ಸಲಹೆ ನೀಡುತ್ತಾರೆ. ಕಂಪನಿಯ ಕಾರ್ಯತಂತ್ರ ಮತ್ತು ಕಾರ್ಯಗತಗೊಳಿಸುವಿಕೆ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಾರೆ.
ಅವರು ಈ ಮೊದಲು ಇನ್ಫೋಸಿಸ್ನಲ್ಲಿ ಜಾಗತಿಕ ಉಪಾಧ್ಯಕ್ಷರಾಗಿ, ವ್ಯವಹಾರ ಅಪ್ಲಿಕೇಶನ್ಗಳು ಮತ್ತು ಡಿಜಿಟಲ್ ವರ್ಕ್ಸ್ಪೇಸ್ ಸೇವೆಯ ಮುಖ್ಯಸ್ಥರಾಗಿದ್ದರು. ಇನ್ಫೋಸಿಸ್ಗೆ ಸೇರುವ ಮೊದಲು ಅವರು ಆಕ್ಸೆಂಚರ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಉತ್ತರ ಅಮೆರಿಕಾದಲ್ಲಿ ಆರೋಗ್ಯ ಮತ್ತು ಸಾರ್ವಜನಿಕ ಸೇವೆಗಳ ವ್ಯವಹಾರದ ಒಂದು ವಿಭಾಗವನ್ನು ಮುನ್ನಡೆಸಿದರು.
320 ಭಾರತೀಯರು ನಾಪತ್ತೆ
ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹ ಮತ್ತು ದುರಂತ ಜೀವ ಹಾನಿಯ ಬಗ್ಗೆ ಇನ್ಫೋಸಿಸ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ನೇಪಾಳ-ಟಿಬೆಟ್ ಗಡಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ಸುಮಾರು 320 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ. 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.
ಬಿಜೆಪಿ ಶಾಸಕರ ನಿವಾಸದ ಆವರಣದಲ್ಲಿ ಸ್ಫೋಟ! ಹೆಚ್ಚಿದ ಭೀತಿ
ಚೀನಾದ ಕಡೆಯಿಂದ ಸಿಲುಕಿರುವ 153 ಭಾರತೀಯರು ಸುರಕ್ಷಿತವಾಗಿ ನೇಪಾಳಕ್ಕೆ ದಾಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಕಠ್ಮಂಡು ತಲುಪಿದ ಒಂದು ದಿನದ ಅನಂತರ ಇಪ್ಪತ್ತೊಂದು ಭಾರತೀಯರು ಶನಿವಾರ ಮಧ್ಯಾಹ್ನ ನವದೆಹಲಿಗೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.