ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ballistic Missile: ಯುದ್ಧದ ಭೀತಿ ನಡುವೆ ಪಾಕಿಸ್ತಾನದಿಂದ 450 ಕಿ.ಮೀ. ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಪರೀಕ್ಷೆ

ಪಾಕಿಸ್ತಾನ 450 ಕಿ.ಮೀ. ವ್ಯಾಪ್ತಿಯಲ್ಲಿ ಚಲಿಸಬಲ್ಲ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ತಿಳಿಸಿದೆ. ಏ. 22ರ ಪಹಲ್ಗಾಮ್‌ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು, ಕ್ಷಿಪಣಿ ಪ್ರಯೋಗ ವಾತಾವರಣವನ್ನು ಮತ್ತಷ್ಟಯ ಉದ್ವಿಗ್ನಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಿಂದ 450 ಕಿ.ಮೀ. ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಪರೀಕ್ಷೆ

Profile Ramesh B May 3, 2025 4:05 PM

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದೆ. ಈ ಮಧ್ಯೆ ಪಾಕಿಸ್ತಾನ 450 ಕಿ.ಮೀ. ವ್ಯಾಪ್ತಿಯಲ್ಲಿ ಚಲಿಸಬಲ್ಲ ಖಂಡಾಂತರ ಕ್ಷಿಪಣಿಯನ್ನು (Ballistic Missile) ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ತಿಳಿಸಿದೆ. ''ಅಬ್ದಾಲಿ ವೆಪನ್ ಸಿಸ್ಟಮ್ (Abdali Weapon System) ಎಂದು ಕರೆಯಲ್ಪಡುವ ಈ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತುʼʼ ಎಂದು ಶನಿವಾರ (ಮೇ 3) ಇಸ್ಲಾಮಾಬಾದ್ ಹೇಳಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನ ಈ ಕ್ಷಿಪಣಿಯ ಪ್ರಯೋಗ ನಡೆಸಿದೆ. ಇತ್ತ ನೆರೆಯ ರಾಷ್ಟ್ರದ ಯಾವುದೇ ಕ್ಷಿಪಣಿ ಪರೀಕ್ಷೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

"ಸೈನಿಕರ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಕ್ಷಿಪಣಿಯ ಸುಧಾರಿತ ನ್ಯಾವಿಗೇಷನ್ ವ್ಯವಸ್ಥೆ ಮತ್ತು ವರ್ಧಿತ ತಂತ್ರಗಾರಿಕೆ ವೈಶಿಷ್ಟ್ಯಗಳು ಸೇರಿದಂತೆ ಪ್ರಮುಖ ತಾಂತ್ರಿಕತೆಯನ್ನು ಮೌಲ್ಯೀಕರಿಸುವ ಗುರಿಯನ್ನು ಈ ಉಡಾವಣೆ ಹೊಂದಿತ್ತು" ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ. ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಮಿಲಿಟರಿ ಮುಖ್ಯಸ್ಥರು ಸೇನಾ ಪಡೆಯ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. Exercise INDUS ಯೋಜನೆಯ ಭಾಗವಾಗಿ ಕ್ಷಿಪಣಿ ಪ್ರಯೋಗ ನಡೆಸಲಾಗಿದೆ ಎಂದು ವರದಿಯೊಂದು ಹೇಳಿದೆ.

ಪಾಕಿಸ್ತಾನದ ಖಂಡಾಂತರ ಕ್ಷಿಪಣಿ ಪ್ರಯೋಗದ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: ಯುದ್ಧ ನಡೆದರೆ ಅಮೆರಿಕ ಪಾಕ್‌ನ ಪರಮಾಣು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುತ್ತಾ? ಏನಿದು Snatch And Grab ಪ್ಲ್ಯಾನ್‌?

ಕಮಾಂಡರ್ ಆರ್ಮಿ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಸೇರಿದಂತೆ ಹಿರಿಯ ಅಧಿಕಾರಿಗಳು, ಆರ್ಮಿ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್‌ನ ಸ್ಟ್ರಾಟೆಜಿಕ್ ಪ್ಲಾನ್ಸ್ ವಿಭಾಗದ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಪರೀಕ್ಷೆಯ ಸಮಯದಲ್ಲಿ ಉಪಸ್ಥಿತರಿದ್ದರು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರು ತರಬೇತಿ ಉಡಾವಣೆಯ ನಂತರ ಸೈನಿಕರು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಅಭಿನಂದಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬೇರ್ಪಡಿಸುವ ನಿಯಂತ್ರಣ ರೇಖೆ ಮತ್ತು ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಿಯಮಿತವಾಗಿ ಕದನ ವಿರಾಮ ಉಲ್ಲಂಘನೆಯ ಮೂಲಕ ಪಾಕಿಸ್ತಾನವು ಭಾರತವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದು, ಭಾರತೀಯ ಸೇನೆ ಡಿಟ್ಟವಾಗಿ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಇದಲ್ಲದೆ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಪಾಕಿಸ್ತಾನಕ್ಕೆ ಶಾಕ್‌ ಕೊಟ್ಟ ಭಾರತ; ರಫ್ತು, ಆಮದು ಸಂಪೂರ್ಣ ನಿಷೇಧ

ಈ ಮಧ್ಯೆ ಭಾರತ ಪಾಕಿಸ್ತಾನದ ನೇರ ಅಥವಾ ಪರೋಕ್ಷ ಸರಕುಗಳ ಆಮದನ್ನು ನಿಷೇಧಿಸಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಪಾಕಿಸ್ತಾನದಿಂದ ನೇರ ಆಮದುಗಳು ಕಡಿಮೆಯಿದ್ದರೂ, ಅಫ್ಘಾನಿಸ್ತಾನ ಹಾಗೂ ಇತರ ದೇಶಗಳಿಂದ ಪಾಕಿಸ್ತಾನದ ಮಾರ್ಗವೇ ಭಾರತಕ್ಕೆ ಆಮದಾಗುತ್ತಿತ್ತು. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದು ಪಾಕಿಸ್ತಾನದಿಂದ ಸಾಗಣೆಯಲ್ಲಿರುವ ಎಲ್ಲ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದೂ ಹೇಳಿದೆ.