ಇಸ್ಲಾಮಾಬಾದ್, ಜು. 14: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ರಾವಲಕೋಟ್ನ (Rawalakot) ನ್ಯೂ ಬಸ್ ಟರ್ಮಿನಲ್ ಸಮೀಪ ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಸಂಭವಿಸಿದ ಘರ್ಷಣೆಯಲ್ಲಿ 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಜಾಹಿದ್ ಮುಘಲ್, ಜಾಫರ್ ಮುಘಲ್, ಅರ್ಸಲಾನ್ ಅಕ್ಬರ್ ಹಾಗೂ ವಾಜಿದ್ ಹಯಾತ್ ಸೇರಿ ಹಲವರು ಸೇರಿದ್ದಾರೆ. ಈ ಘಟನೆ ಬಳಿಕ ಇಸ್ಲಾಮಾಬಾದ್ ವಿರುದ್ಧ ಸ್ಥಳೀಯರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ.
ಘರ್ಷಣೆಗೆ ಒಂದು ದಿನ ಮುನ್ನ ಅಮೆರಿಕದ ವಾಷಿಂಗ್ಟನ್ನ ವೈಟ್ ಹೌಸ್ ಎದುರು ಪಾಕ್ ಆಕ್ರಮಿತ ಕಾಶ್ಮೀರ ಮೂಲದ ಸುಮಾರು 100ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದರು. ಮಹಿಳೆಯರು, ಮಕ್ಕಳು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ ಪಾಕಿಸ್ತಾನ ಸೇನೆಯನ್ನು ನಾಗರಿಕ ಪ್ರದೇಶಗಳಿಂದ ಹಿಂತೆಗೆದುಕೊಳ್ಳುವಂತೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ಪಿಒಕೆ ಸಂಘರ್ಷದ ಬಗ್ಗೆ ಭಾರತದ ಪ್ರತಿಕ್ರಿಯೆ:
ಪ್ರದೇಶದಲ್ಲಿ ದೀರ್ಘಕಾಲದಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದ್ದು, ಸುಮಾರು 40 ಲಕ್ಷ ಜನರು ಹೊರಜಗತ್ತಿನ ಸಂಪರ್ಕದಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ ಮಾನವೀಯ ನೆರವು ತಲುಪಿಸಲು ಪೂಂಚ್ ಮತ್ತು ಡೋಡಾ ಮಾರ್ಗವಾಗಿ ನಿಯಂತ್ರಣ ರೇಖೆ (LoC) ತೆರೆಯಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಮತ್ತು ಆರೋಗ್ಯ ಪರಿಸ್ಥಿತಿ ಗಂಭೀರ
2025ರಲ್ಲಿ ಪ್ರಕಟವಾದ Nature ಅಧ್ಯಯನದ ಪ್ರಕಾರ, PoKಯಲ್ಲಿ ಸುಮಾರು 66% ಜನರು ಕೃಷಿ ಮತ್ತು ಪಶು ಸಂಗೋಪನೆ ಮೇಲೆ ಅವಲಂಬಿತರಾಗಿದ್ದು, 57%ಕ್ಕೂ ಹೆಚ್ಚು ಕುಟುಂಬಗಳು ಆಹಾರ ಅಭದ್ರತೆಯನ್ನು ಎದುರಿಸುತ್ತಿವೆ. ಸುಮಾರು 29% ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದು ಪಾಕಿಸ್ತಾನದ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.
ಪಾಕಿಸ್ತಾನದ ಸ್ವಯಂಪ್ರೇರಿತ ರಾಷ್ಟ್ರೀಯ ಪರಿಶೀಲನಾ ವರದಿ (Voluntary National Review Report) ಪ್ರಕಾರ, ಐದು ವರ್ಷದೊಳಗಿನ ಮಕ್ಕಳಲ್ಲಿ 39% ಬೆಳವಣಿಗೆ ಕುಂಠಿತವಾಗಿದೆ. ತಾಯಂದಿರ ಮರಣ ಪ್ರಮಾಣವೂ ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 104 ಆಗಿದೆ.
1963ರ ಪಾಕ್-ಚೀನಾ ಒಪ್ಪಂದ ಕಾನೂನುಬಾಹಿರ; ಚೀನಾ ಹಕ್ಕು ತಿರಸ್ಕರಿಸಿದ ಸೇನಾ ಮುಖ್ಯಸ್ಥ
ಪಾಕಿಸ್ತಾನ ವಿರುದ್ಧ ಭಾರತದ ವಾಗ್ದಾಳಿ
ಈ ಬೆಳವಣಿಗೆ ಕುರಿತು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಪಾಕಿಸ್ತಾನದ ದಶಕಗಳ ಶೋಷಣೆ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಆಡಳಿತಾತ್ಮಕ ದಮನದ ಪರಿಣಾಮ ಎಂದು ಆರೋಪಿಸಿದರು.
ಪಾಕಿಸ್ತಾನ ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಮಹಿಳೆಯರು ಮತ್ತು ಮಕ್ಕಳ ಮೇಲೂ ಪೊಲೀಸ್ ದೌರ್ಜನ್ಯ, ಆಹಾರ ಹಾಗೂ ಔಷಧಿ ಪೂರೈಕೆ ತಡೆ, ಇಂಟರ್ನೆಟ್ ಸ್ಥಗಿತ ಮತ್ತು ನಿರಾಯುಧ ನಾಗರಿಕರ ಮೇಲೆ ಮಾರಕ ಬಲ ಪ್ರಯೋಗ ನಡೆಸುತ್ತಿದೆ ಎಂದು ಅವರು ಟೀಕಿಸಿದರು.
ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಸಮುದಾಯ ಹೊಣೆಗಾರನನ್ನಾಗಿ ಮಾಡಬೇಕು ಎಂದು ಆಗ್ರಹಿಸಿದೆ.