ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯ ವಾಯು ಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ 3 ವಿಮಾನಗಳು; ಸೇಫ್‌ ಲ್ಯಾಂಡಿಂಗ್‌ಗೆ ಸಹಾಯ ಮಾಡಿದ ಭಾರತ

Pakistani Flights Entered Indian Airspace: ಒಂದು ವಾರದ ಹಿಂದಷ್ಟೇ ಪಾಕಿಸ್ತಾನದ ಮೂರು ವಾಣಿಜ್ಯ ವಿಮಾನಗಳು ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದ್ದವು ಎಂಬ ಅಂಶ ಬೆಳಕಿಗೆ ಬಂದಿದೆ. ಲಾಹೋರ್‌ಗೆ ತೆರಳುತ್ತಿದ್ದ ಕನಿಷ್ಠ ಮೂರು ವಾಣಿಜ್ಯ ವಿಮಾನಗಳು ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದ್ದವು.

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್, ಜೂ. 25: ಏರ್ ಇಂಡಿಯಾ (Air India) ವಿಮಾನ AI479 ಅಮೃತಸರದಲ್ಲಿ ಲ್ಯಾಂಡಿಂಗ್ ಪ್ರಯತ್ನದ ವೇಳೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಕೆಲಕಾಲ ಪಾಕಿಸ್ತಾನದ ವಾಯು ಪ್ರದೇಶಕ್ಕೆ ಪ್ರವೇಶಿಸಿದ ಘಟನೆ ಸುದ್ದಿಯಾಗುವ ಮೊದಲು, ಪಾಕಿಸ್ತಾನದ ಮೂರು ವಾಣಿಜ್ಯ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದ್ದವು ಎಂಬ ಅಂಶ ಬೆಳಕಿಗೆ ಬಂದಿದೆ. ಲಾಹೋರ್‌ಗೆ ತೆರಳುತ್ತಿದ್ದ ಕನಿಷ್ಠ ಮೂರು ವಾಣಿಜ್ಯ ವಿಮಾನಗಳು ವಾರದ ಹಿಂದೆ ಭಾರತೀಯ ವಾಯು ಪ್ರದೇಶವನ್ನು ಪ್ರವೇಶಿಸಿದ್ದವು.

ವಿಮಾನ ಹಾರಾಟದ ಮಾಹಿತಿಯ ಪ್ರಕಾರ, ಜೂನ್ 12ರಂದು ಫ್ಲೈ ಜಿನ್ನಾ ಸಂಸ್ಥೆಯ ಲಾಹೋರ್–ದುಬೈ ಮತ್ತು ಲಾಹೋರ್–ಜೆಡ್ಡಾ ವಿಮಾನಗಳು ಹಾಗೂ ಏರ್ ಸಿಯಾಲ್ ದಮ್ಮಾಮ್-ಲಾಹೋರ್ ವಿಮಾನವು ಕೆಲ ನಿಮಿಷಗಳ ಕಾಲ ಭಾರತೀಯ ವಾಯು ಪ್ರದೇಶದಲ್ಲೇ ಹಾರಾಟ ನಡೆಸಿದ್ದವು. ಅವುಗಳಲ್ಲಿ ಒಂದು ವಿಮಾನವು 15 ನಿಮಿಷಗಳಿಗಿಂತ ಹೆಚ್ಚು ಕಾಲ ಭಾರತೀಯ ವಾಯು ಪ್ರದೇಶದಲ್ಲಿ ಉಳಿದಿತ್ತು ಎಂದು ಫ್ಲೈಟ್-ಟ್ರ್ಯಾಕಿಂಗ್ ದತ್ತಾಂಶ ತೋರಿಸಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಆ ದಿನ ಬೀಸಿದ ಬಿರುಗಾಳಿ ಮತ್ತು ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನಿ ವಿಮಾನವು ಭಾರತದ ಆಕಾಶವನ್ನು ಪ್ರವೇಶಿಸಿತು ಎಂದು ಪಾಕಿಸ್ತಾನಿ ಮಾಧ್ಯಮಗಳು ತಿಳಿಸಿವೆ. ಈ ಮಾರ್ಗ ಬದಲಾವಣೆಗಳ (ಡೈವರ್ಷನ್‌ಗಳ) ಸಂದರ್ಭದಲ್ಲಿ ಲಾಹೋರ್ ಮತ್ತು ಅಮೃತಸರದ ಏರ್ ಟ್ರಾಫಿಕ್ ಕಂಟ್ರೋಲ್ ಘಟಕಗಳು ಪರಸ್ಪರ ಸಂಪರ್ಕದಲ್ಲಿದ್ದವು. ಈ ವೇಳೆ ವಿಮಾನಗಳ ಸುರಕ್ಷಿತ ಹಾರಾಟವನ್ನು ಖಚಿತಪಡಿಸಿಕೊಳ್ಳಲು ಎರಡೂ ಕಡೆಯ ಎಟಿಸಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ವಾಯು ಪ್ರದೇಶಕ್ಕೆ ಏರ್‌ ಇಂಡಿಯಾ ವಿಮಾನ ಎಂಟ್ರಿ; ತನಿಖೆ ಕೈಗೆತ್ತಿಕೊಂಡ ಕೇಂದ್ರ

ಜೂನ್ 22ರಂದು, ಏರ್ ಇಂಡಿಯಾ ವಿಮಾನ AI479 ಅಮೃತಸರ ವಿಮಾನ ನಿಲ್ದಾಣದ ಮೇಲೆ ಗೋ-ರೌಂಡ್ ಕುಶಲತೆಯನ್ನು ನಿರ್ವಹಿಸುವಾಗ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನವು ಸುಮಾರು 4:38 UTC (ಭಾರತೀಯ ಸಮಯ ರಾತ್ರಿ 9:38) ವೇಳೆ ಪಾಕಿಸ್ತಾನದ ವಾಯುಪ್ರದೇಶದಲ್ಲಿ ಹಾರಿತು, ಒಂದು ನಿಮಿಷದ ನಂತರ ನಿರ್ಗಮಿಸಿತು.

ಫ್ಲೈಟ್‌ರಾಡಾರ್ ಮಾಹಿತಿಯ ಪ್ರಕಾರ, AI479 ವಿಮಾನವು ರಾತ್ರಿ 9:38ಕ್ಕೆ ವಾಘಾ ಗಡಿಯ ಸಮೀಪ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿತ್ತು. ಸುಮಾರು ಒಂದು ನಿಮಿಷದವರೆಗೆ ಗಡಿಯ ಆಚೆ ಉಳಿದ ನಂತರ ಮತ್ತೆ ಭಾರತೀಯ ವಾಯುಪ್ರದೇಶಕ್ಕೆ ಮರಳಿತ್ತು. ಅಲ್ಲದೆ, ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುವ ವೇಳೆ ವಿಮಾನವು ಅಮೃತಸರದ ಮೇಲೆ ಹಲವು ಸುತ್ತುಗಳನ್ನು ಹಾರಿತ್ತು ಎಂದು ದತ್ತಾಂಶವು ತೋರಿಸಿದೆ. ಲ್ಯಾಂಡಿಂಗ್ ಪ್ರಯತ್ನ ವಿಫಲವಾದ ಕಾರಣ, ವಿಮಾನವು ಅಂತಿಮವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು.

ಕಳೆದ ವರ್ಷ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಉದ್ವಿಗ್ನತೆಯ ಉತ್ತುಂಗದಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರರ ವಿಮಾನಯಾನ ಸಂಸ್ಥೆಗಳಿಗೆ ತಮ್ಮ ವಾಯುಪ್ರದೇಶವನ್ನು ಮುಚ್ಚಿದ್ದವು.