ಢಾಕಾ: ಹಿಂದೂಗಳ ಘೋರ ನರಮೇಧಕ್ಕೆ ಕುಖ್ಯಾತಿ ಗಳಿಸಿರುವ ಬಾಂಗ್ಲಾದೇಶದಲ್ಲಿ ದಿನೇದಿನೇ ರಾಜಕೀಯದ ಹೈ ಡ್ರಾಮಾ (Bangladesh Unrest) ಕೂಡ ನಡೆಯುತ್ತಿದೆ. ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಕೂಡ ಇದೆ. ಏಕೆಂದರೆ ಅಲ್ಲಿ 2026ರ ಫೆಬ್ರವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ನಡುವೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ಮತ್ತು ಬಾಂಗ್ಲಾದೇಶ ನ್ಯಾಶನಲ್ ಪಾರ್ಟಿಯ ಮುಖ್ಯಸ್ಥ ತಾರಿಖ್ ರೆಹಮಾನ್ 17 ವರ್ಷಗಳ ಬಳಿಕ ಲಂಡನ್ನಿಂದ ಬಾಂಗ್ಲಾದೇಶಕ್ಕೆ ಕುಟುಂಬ ಸಮೇತರಾಗಿ ಬಂದಿಳಿದಿದ್ದಾರೆ. ಅವರಿಗೆ ಅದ್ದೂರಿಯಾದ ಸ್ವಾಗತ ಸಿಕ್ಕಿದೆ.ಈ
ಬೆಳವಣಿಗೆಯನ್ನು ಭಾರತ ಕೂಡ ಗಮನಿಸುತ್ತಿದೆ.
60 ವರ್ಷ ವಯಸ್ಸಿನ ತಾರಿಖ್ ರೆಹಮಾನ್ ಅವರು ತಮ್ಮ ಪತ್ನಿ , ಪುತ್ರಿ ಮತ್ತು ಮುದ್ದಿನ ಬೆಕ್ಕಿನ ಜತೆಗೆ ಬಾಂಗ್ಲಾದೇಶಕ್ಕೆ ಬಂದಿದ್ದಾರೆ. ಬುಲೆಟ್ ಪ್ರೂಫ್ ಬಸ್ ಸೇರಿದಂತೆ ಬಿಗಿ ಭದ್ರತೆಯನ್ನು ಅವರಿಗೆ ನೀಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾರಿವರು ತಾರಿಖ್ ರೆಹಮಾನ್ ಎಂಬ ಕುತೂಹಲ ಭಾರತೀಯರಲ್ಲಿ ಇರಬಹುದು. ಈತ ಅಕಸ್ಮಾತ್ ಬಾಂಗ್ಲಾದೇಶದ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಆಗ್ತಾರಾ? ಆದರೆ ಭಾರತದ ಜತೆಗೆ ಸಂಬಂಧವನ್ನು ಹೇಗೆ ಇಟ್ಟುಕೊಳ್ಳುತ್ತಾರೆ? ಇವರೂ ಇಸ್ಲಾಂ ಮೂಲಭೂತವಾದಿಯೇ? ಹಿಂದೂಗಳ ಘೋರ ನರಮೇಧಗಳನ್ನು ತಡೆಯುತ್ತಾರಾ? ಹಿಂದುಗಳ ಸುರಕ್ಷತೆಗೆ ಆದ್ಯತೆ ನೀಡುತ್ತಾರೆಯೇ? ಇತ್ಯಾದಿ ಪ್ರಶ್ನೆಗಳು ಇವೆ.
ಬಾಂಗ್ಲಾದೇಶದಿಂದ ಪದಚ್ಯುತರಾಗಿ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಅವಾಮಿ ಲೀಗ್ನ ಮುಖ್ಯಸ್ಥೆ ಶೇಖ್ ಹಸೀನಾ ಬಗ್ಗೆ ನಮಗೆಲ್ಲ ತಿಳಿದಿದೆ. ಇವರ ಪ್ರತಿಸ್ಪರ್ಧಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರೆಹಮಾನ್ ಈಗ ಬಾಂಗ್ಲಾದೇಶದ ನೂತನ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ತಾರಿಖ್ ರೆಹಮಾನ್ ಅವರ ತಂದೆ ಜನರಲ್ ಜಿಯೂರ್ ರೆಹಮಾನ್ ಅವರು ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಹತ್ಯೆಯ ಬಳಿಕ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದವರು.
ಚುನಾವಣೆ ಬಳಿಕ ಹಂಗಾಮಿ ಸರಕಾರವನ್ನು ವಿಸರ್ಜಿಸಿ ಹುದ್ದೆಯಿಂದ ಇಳಿಯುವುದಾಗಿ ಮಹಮ್ಮದ್ ಯೂನಸ್ ಹೇಳಿದ್ದಾರೆ. ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ಅವರಿಗೆ ಈಗ 80 ವರ್ಷ ವಯಸ್ಸು. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ನಿಲ್ದಾಣದಿಂದ ಇಳಿದ ಬಳಿಕ ಶೂಗಳನ್ನು ತೆಗೆದು, ಬಾಂಗ್ಲಾದೇಶದ ಮಣ್ಣನ್ನು ಕೈಗೆತ್ತಿಕೊಂಡು ಧನ್ಯವಾದ ಹೇಳಿದ್ದಾರೆ. ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಾಂಗ್ಲಾದೇಶದ ಅಭಿವೃದ್ಧಿಗೆ ನನ್ನ ದೇಶಕ್ಕಾಗಿ, ನನ್ನ ಜನರಿಗಾಗಿ ನನ್ನ ಬಳಿ ಪ್ಲಾನ್ ಇದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಸ್ಟೈಲ್ನಲ್ಲಿ ಹೇಳಿದ್ದಾರೆ.
ಬಾಂಗ್ಲಾದೇಶವು ಮುಸ್ಲಿಂ, ಹಿಂದೂಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಸೇರಿದೆ. ಎಲ್ಲರೂ ಜತೆಯಾಗಿ ಬಾಂಗ್ಲಾದೇಶವನ್ನು ಅಭಿವೃದ್ಧಿಪಡಿಸೋಣ. ಪ್ರಜಾಸತ್ತಾತ್ಮಕವಾಗಿ ಮತ್ತು ಆರ್ಥಿಕವಾಗಿ ಸದೃಢವಾದ ರಾಷ್ಟ್ರ ಆಗಬೇಕು. ದೇಶದಲ್ಲಿ ಶಾಂತಿ ನೆಲಸಬೇಕು ಎಂದು ಹೇಳಿದ್ದಾರೆ. ಸದ್ಯಕ್ಕೆ ಭಾರತದ ವಿರುದ್ಧ ಕೆಣಕುವ ಹೇಳಿಕೆ ನೀಡಿಲ್ಲ. ನೀಟಾಗಿ ಡ್ರೆಸ್ ಮಾಡಿಕೊಂಡು ಯಾವುದೋ ಕಂಪನಿಯ ಸಿಇಒ ಥರ ಕಾಣಿಸಿಕೊಂಡಿದ್ದಾರೆ. ಧರ್ಮಾಚರಣೆ ಅವರವರ ವೈಯಕ್ತಿಕ ಆದರೆ ಸುರಕ್ಷತೆ ಪ್ರತಿಯೊಬ್ಬರ ಹಕ್ಕು ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಜತೆಗೆ ಭಾರತ 4,000 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಆದ್ದರಿಂದ ಬಾಂಗ್ಲಾದೇಶದ ಜತೆಗೆ ಎಚ್ಚರದಿಂದ, ದೂರಗಾಮಿ ಆಲೋಚನೆಗಳೊಂದಿಗೆ ಭಾರತ ವ್ಯವಹರಿಸಬೇಕಾಗುತ್ತದೆ. ಅಲ್ಲಿ ಶಾಂತಿ-ಸುವ್ಯವಸ್ಥೆ-ಅಲ್ಪ ಸಂಖ್ಯಾತ ಹಿಂದೂ-ಬೌದ್ಧ-ಕ್ರಿಶ್ಚಿಯನ್ನರ ರಕ್ಷಣೆ ಭಾರತದ ಹಿತ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.
ಹೀಗಾಗಿ ಜಮಾತೆ ಇಸ್ಲಾಮಿಗೆ ಹೋಲಿಸಿದರೆ ಬಾಂಗ್ಲಾದೇಶ ನ್ಯಾಶನಲ್ ಪಾರ್ಟಿ ಸ್ವಲ್ಪ ಆಗಬಹುದು ಎನ್ನಬಹುದು. ಏಕೆಂದರೆ ಅಲ್ಲಿ ಸದ್ಯಕ್ಕೆ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಲಾಗಿದೆ. ಆದ್ದರಿಂದ ಹಾಳೂರಿನಲ್ಲಿ ಉಳಿದ ಪಕ್ಷಗಳ ಪೈಕಿ ಬಿಎನ್ಪಿ ಓಕೆ ಎನ್ನಬಹುದು.
ಹಾಗಾದರೆ ಭಾರತಕ್ಕೂ ಬಿಎನ್ಪಿಗೂ ಸಂಬಂಧ ಹೇಗಿದೆ? ಇತಿಹಾಸವನ್ನು ಗಮನಿಸಿದರೆ ಬಿಎನ್ಪಿಗೂ ಭಾರತಕ್ಕೂ ಸಂಬಂಧ ಅಷ್ಟಕ್ಕಷ್ಟೇ. ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಮಾತ್ರ ಭಾರತದ ಜತೆಗೆ ಚೆನ್ನಾಗಿ ಸಂಬಂಧವನ್ನು ಇಟ್ಟುಕೊಂಡಿತ್ತು.
ಈಗ ತಾರಿಖ್ ರೆಹಮಾನ್ ಎಲ್ಲಕ್ಕಿಂತ ಬಾಂಗ್ಲಾದೇಶ ಫಸ್ಟ್ ಎನ್ನುತ್ತಾರೆ. ಹೀಗಿದ್ದರೂ, ಹಿಂದೊಮ್ಮೆ ನರೇಂದ್ರ ಮೋದಿಯವರು ಜಿಯಾ ಅವರ ಆರೋಗ್ಯವನ್ನು ವಿಚಾರಿಸಿ, ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾಗ ತಾರಿಖ್ ಧನ್ಯವಾದ ತಿಳಿಸಿದ್ದರು.
ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್ ಜಮಾತೆ ಇಸ್ಲಾಮಿ ಪಕ್ಷದ ಬೆಳವಣಿಗೆ ಮತ್ತು ಅದಕ್ಕೆ ಪೋಷಣೆ ನೀಡುತ್ತಿರುವ ಮಹಮ್ಮದ್ ಯೂನಸ್ ಭಾರತದ ಕಡು ವಿರೋಧಿಗಳಾಗಿದ್ದಾರೆ. ಜಮಾತೆಗೆ ಪಾಕಿಸ್ತಾನದ ಐಎಸ್ಐ ಕೂಡ ಸಪೋರ್ಟ್ ನೀಡುತ್ತಿದೆ. ಬಾಂಗ್ಲಾದೇಶದ ಚುನಾವಣೆಯಲ್ಲಿ ಬಿಎನ್ಪಿಗೆ ಜಮಾತೆ ಇಸ್ಲಾಮಿ ತೀವ್ರ ಸ್ಪರ್ಧೆ ನೀಡುವ ನಿರೀಕ್ಷೆ ಇದೆ. ಒಂದು ವೇಳೆ ಜಮಾತೆ ಇಸ್ಲಾಮಿ ಮೆಜಾರಿಟಿಗೆ ಬಂದರೆ ಅಲ್ಲಿನ ಕೋಟ್ಯಂತರ ಹಿಂದೂಗಳ ಗತಿಯೇನು? ಭಾರತಕ್ಕೆ ಅದೊಂದು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ಹೀಗಿದ್ದರೂ, ತಾರಿಖ್ ರೆಹಮಾನ್ ಒಂದು ಮಾತು ಹೇಳಿದ್ದಾರೆ. ಜನರ ಬೆಂಬಲ ಕೋರುತ್ತಿರುವ ಜಮಾತೆ ಇಸ್ಲಾಮಿ ಪಕ್ಷವನ್ನು ಜನ 1971ರಲ್ಲೇ ನೋಡಿದ್ದಾರೆ. ಅವರು ಲಕ್ಷಾಂತರ ಮಂದಿಯನ್ನು ಕೊಂದು ಹಾಕಿದ್ದಾರೆ. ಅವರ ತಾಯಂದಿರು, ಸೋದರಿಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅದನ್ನು ನಾವು ಮರೆಯಲಾರೆವು ಎಂದು ಹೇಳಿದ್ದಾರೆ. ಇದು ಕುತೂಹಲಕರ ಹೇಳಿಕೆಯಾಗಿದೆ. ಆದ್ದರಿಂದ ಹಿಂದೊಮ್ಮೆ ಮಿತ್ರ ಪಕ್ಷಗಳಾಗಿದ್ದ ಬಿಎನ್ಪಿ ಮತ್ತು ಜಮಾತೆ ಈಗ ಪ್ರತಿಸ್ಪರ್ಧಿಗಳಾಗಿವೆ. ಹೀಗಾಗಿ ತಾರಿಖ್ ರೆಹಮಾನ್ ಬಾಂಗ್ಲಾದೇಶಕ್ಕೆ ರಿಟರ್ನ್ ಆಗಿರುವುದು ಅಲ್ಲಿನ ರಾಜಕೀಯಕ್ಕೆ ಈಗ ಹೊಸ ತಿರುವನ್ನು ನೀಡಿದೆ.
ಬಾಂಗ್ಲಾದೇಶದ ವಿವಾದಿತ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಗೈದ ಇಬ್ಬರು ಭಾರತಕ್ಕೆ ಪಲಾಯನ?
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಹಿಂಸಿಸುವ ಜಮಾತೆ ಇಸ್ಲಾಮ್ ಪಾರ್ಟಿಗಿಂತ ಸದ್ಯ ಸೆಂಟ್ರಿಸ್ಟ್ ನಂತೆ ಕಾಣುವ ಬಿಎನ್ಪಿ ಅಲ್ಲಿನ ಮಧ್ಯಮ guy ವರ್ಗದ ಜನತೆಗೆ ಆಗಬಹುದು ಎಂದು ಕಾಣಿಸುತ್ತಿದೆ. ತಾರಿಖ್ ರೆಹಮಾನ್ ಕೂಡ ತಮ್ಮನ್ನು ಲಿಬರಲ್ ಎಂದು ಹೇಳಿಕೊಂಡಿದ್ದಾರೆ.