ಬೆಂಗಳೂರು: ಹಲವರು ಸಕ್ಕರೆ ಖಾಯಿಲೆ, ಇನ್ಸುಲಿನ್ ಹೆಚ್ಚಳ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೆಳಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲವು ದೈನಂದಿನ ಅಭ್ಯಾಸಗಳು ನಮ್ಮ ದೇಹದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಲವು ಬಾರಿ ಬೆಳಗಿನ ಉಪಾಹಾರ ಸೇವಿಸುವ ಮುನ್ನವೇ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕಾಏಕಿ ಏರಿಕೆಯಾಗಲು ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣವಾಗುತ್ತವೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿಯುವುದು
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಇಲ್ಲವೇ ಟೀ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಕೆಫೀನ್ ದೇಹದಲ್ಲಿ ಕಾರ್ಟಿಸಾಲ್ ಅನ್ನು ಉತ್ತೇಜಿಸುತ್ತದೆ, ಇದರಿಂದಾಗಿ ರಕ್ತದಲ್ಲಿ ಗ್ಲೂಕೋಸ್ ಮಟ್ಟ ತಕ್ಷಣವೇ ಹೆಚ್ಚಾಗುತ್ತದೆ. ಕಾಫಿ ಕುಡಿಯುವ ಮುನ್ನ ಕನಿಷ್ಠ ಒಂದು ಲೋಟ ನೀರು ಅಥವಾ ಸ್ವಲ್ಪ ಉಪಹಾರ ಸೇವಿಸಿದ ನಂತರ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಬೆಳಗಿನ ಉಪಹಾರ ತ್ಯಜಿಸುವುದು ಅಥವಾ ತಡವಾಗಿ ತಿನ್ನುವುದು
ಸಮಯವಿಲ್ಲವೆಂದು ಅಥವಾ ತೂಕ ಇಳಿಸುವ ಭರದಲ್ಲಿ ಬೆಳಗಿನ ಉಪಹಾರವನ್ನು ತ್ಯಜಿಸುವುದು ದೊಡ್ಡ ತಪ್ಪು. ಉಪಹಾರ ಸೇವಿಸದಿದ್ದಾಗ ಶಕ್ತಿಗಾಗಿ ಶೇಖರಣೆಯಾಗಿರುವ ಗ್ಲೂಕೋಸ್ ಅನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಅಲ್ಲದೆ, ಮಧ್ಯಾಹ್ನ ತೀವ್ರ ಹಸಿವಾದಾಗ ಹೆಚ್ಚು ಕಾರ್ಬೋಹೈಡ್ರೇಟ್ ಸೇವಿಸಲು ಇದು ಕಾರಣವಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ 1 ರಿಂದ 2 ಗಂಟೆಯೊಳಗೆ ಪ್ರೋಟೀನ್ ಮತ್ತು ಫೈಬರ್ ಹೊಂದಿರುವ ಅಪಹಾರವನ್ನು ಕಡ್ಡಾಯವಾಗಿ ಸೇವಿಸಿ.
ತೀವ್ರ ದೈಹಿಕ ವ್ಯಾಯಾಮ
ಖಾಲಿ ಹೊಟ್ಟೆಯಲ್ಲಿ ಕಠಿಣವಾದ ಅಥವಾ ತೀವ್ರತರದ ವ್ಯಾಯಾಮಗಳನ್ನು ಮಾಡುವುದರಿಂದ ದೇಹವು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತದೆ. ಇದರ ಪರಿಣಾಮವಾಗಿ ಅಡ್ರಿನಲಿನ್ ಮತ್ತು ಕಾರ್ಟಿಸಾಲ್ ಹಾರ್ಮೋನಗಳು ಬಿಡುಗಡೆಯಾಗಿ, ಲಿವರ್ನಲ್ಲಿರುವ ಗ್ಲೂಕೋಸ್ ಸೇರಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವ ಮುನ್ನ ಕೆಲವು ಬಾದಾಮಿ, ವಾಲ್ನಟ್ಸ್ ಅಥವಾ ಹಗುರವಾದ ಪ್ರೋಟೀನ್ ಸೇವನೆ ಸೂಕ್ತ.
ಎದ್ದ ತಕ್ಷಣ ಮೊಬೈಲ್ ನೋಡುವುದು
ಎದ್ದ ತಕ್ಷಣ ಫೋನ್ ನೊಡುವುದು, ಆಫೀಸ್ ಇಮೇಲ್ ಪರಿಶೀಲಿಸುವುದು ಅಥವಾ ತಕ್ಷಣವೇ ಸೋಷಿಯಲ್ ಮೀಡಿಯಾ ನೋಡುವುದರಿಂದ ದೇಹದ ನರಮಂಡಲದ ಮೇಲೆ ಒತ್ತಡ ಉಂಟಾಗುತ್ತದೆ. ಈ ಮಾನಸಿಕ ಒತ್ತಡವು ಕಾರ್ಟಿಸಾಲ್ ಹಾರ್ಮೋನ್ ಮಟ್ಟವನ್ನು ಏರಿಸಿ, ಉಪಹಾರಕ್ಕೂ ಮುನ್ನವೇ ರಕ್ತದ ಮಟ್ಟದಲ್ಲಿ ಏರಿಳಿತ ತರುತ್ತದೆ. ಎದ್ದ ತಕ್ಷಣ 10 ರಿಂದ 20 ನಿಮಿಷಗಳ ಕಾಲ ಮೊಬೈಲ್ನಿಂದ ದೂರವಿದ್ದು, ಶಾಂತ ವಾತಾವರಣದಲ್ಲಿ ದಿನವನ್ನು ಆರಂಭಿಸಿ.
ಸಕ್ಕರೆಭರಿತ ಪಾನೀಯ ಸೇವನೆ
ಹಣ್ಣಿನ ಜ್ಯೂಸ್ ಆರೋಗ್ಯಕರ ಎಂದು ಭಾವಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದು ತಪ್ಪು ಅಭ್ಯಾಸ. ಹಣ್ಣುಗಳಲ್ಲಿ ನೈಸರ್ಗಿಕವಾಗಿ ಫೈಬರ್ ಇರುತ್ತದೆ, ಆದರೆ ಅದನ್ನು ಜ್ಯೂಸ್ ಮಾಡಿದಾಗ ಫೈಬರ್ ಇಲ್ಲದೆ ಕೇವಲ ಸಕ್ಕರೆ ಉಳಿಯುತ್ತೆದೆ, ಇದು ತಕ್ಷಣವೇ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಜ್ಯೂಸ್ ಬದಲಿಗೆ ಇಡೀ ಹಣ್ಣುಗಳನ್ನು ಸೇವಿಸಿ ಅಥವಾ ಪ್ರೋಟೀನ್ ಗ್ರೀಕ್ ಮೊಸರು ಅಥವಾ ಹಾಲಿನ ಉತ್ಪನ್ನಗಳನ್ನು ಆಯ್ಕೆ ಮಾಡಿ.
ಚರ್ಮದ ಆರೋಗ್ಯದಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಬೀಜಗಳ ಆರೋಗ್ಯ ಲಾಭ ಒಂದೆರಡಲ್ಲ!
ಬೆಳಗಿನ ಸಮಯದ ಸಣ್ಣ ಬದಲಾವಣೆಗಳು ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ. ದಿನವಿಡೀ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಇವು ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದು, ನಾರಿನಾಂಶ ಮತ್ತು ಪ್ರೋಟೀನ್ ಭರಿತ ಉಪಹಾರ ಸೇವಿಸುವುದರಿಂದ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಬಹುದು.